ನವದೆಹಲಿ: ಪಂಜಾಬ್ನಲ್ಲಿ ಈಗ ಸರ್ಕಾರದಿಂದ ಭತ್ತ ಸಂಗ್ರಹಣೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ದಾಸ್ತಾನಿಗೆ ಸ್ಥಳಗಳ ಕೊರತೆ ಎದುರಾಗಿದೆ ಎಂಬ ಆರೋಪವನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ, ‘ಪಂಜಾಬ್ನಲ್ಲಿ ಭತ್ತ ದಾಸ್ತಾನಿಗೆ ಸ್ಥಳದ ಕೊರತೆ ಕಂಡುಬಂದಿಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸುಳ್ಳು ಮಾಹಿತಿ ಹರಡುತ್ತಿವೆ’ ಎಂದರು.
‘ಕೇವಲ ವದಂತಿ ಹಬ್ಬಿಸಲಾಗುತ್ತಿದೆ. ಭತ್ತ ದಾಸ್ತಾನಿಗೆ ಅಗತ್ಯವಿರುವ ಸ್ಥಳಾವಕಾಶ ಕಲ್ಪಿಸುವುದು ಸರ್ಕಾರ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.
ಪ್ರಸ್ತುತ ಪಂಜಾಬ್ 14 ಲಕ್ಷ ಟನ್ ದಾಸ್ತಾನು ಸಾಮರ್ಥ್ಯ ಹೊಂದಿದೆ. ನವೆಂಬರ್ 1ರೊಳಗೆ ಇದನ್ನು 16 ಲಕ್ಷ ಟನ್ ಸಾಮರ್ಥ್ಯಕ್ಕೆ ವಿಸ್ತರಿಸಲಾಗುವುದು. ಖಾಸಗಿ ಸಹಭಾಗಿತ್ವದಡಿ ಹೆಚ್ಚುವರಿಯಾಗಿ 31 ಲಕ್ಷ ಟನ್ನಷ್ಟು ದಾಸ್ತಾನಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.