ADVERTISEMENT

ಆಲೂಗೆಡ್ಡೆ ಬಿತ್ತನೆ ಚುರುಕು, ಈರುಳ್ಳಿ ಬಿತ್ತನೆ ಗುರಿ ಶೇ 27ರಷ್ಟು ಏರಿಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 15:12 IST
Last Updated 7 ಜುಲೈ 2024, 15:12 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ವಿವಿಧೆಡೆ ಉತ್ತಮ ಮಳೆ ಸುರಿಯುತ್ತಿರುವುದರಿಂದ ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಮತ್ತು ಆಲೂಗೆಡ್ಡೆ ಬಿತ್ತನೆಯು ಚುರುಕುಗೊಂಡಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ. 

ಸದ್ಯ ಬೆಳೆಗಾರರು ದಾಸ್ತಾನು ಇಟ್ಟಿದ್ದ ಈರುಳ್ಳಿ ಮತ್ತು ಆಲೂಗೆಡ್ಡೆಯು ಮಾರುಕಟ್ಟೆ ಪ್ರವೇಶಿಸಿದೆ. ಹಾಗಾಗಿ, ಈ ಎರಡರ ಬೆಲೆಯು ಸ್ಥಿರವಾಗಿದೆ ಎಂದು ಹೇಳಿದೆ. 

ಮಳೆ ಸುರಿಯುತ್ತಿರುವುದರಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಿರುತ್ತದೆ. ಇದರಿಂದ ಈರುಳ್ಳಿ ದಾಸ್ತಾನಿಟ್ಟಿರುವ ರೈತರಿಗೆ ನಷ್ಟ ಕಟ್ಟಿಟ್ಟಬುತ್ತಿ. ಹಾಗಾಗಿ, ಹಿಂಗಾರು ಅವಧಿಯಲ್ಲಿ ಕಟಾವು ಮಾಡಿದ್ದ ಈರುಳ್ಳಿಯು ಮಾರುಕಟ್ಟೆಯಲ್ಲಿ ಆವಕವಾಗುತ್ತಿದ್ದು, ಮಂಡಿ ಬೆಲೆಯಲ್ಲಿಯೂ ಏರಿಕೆಯಾಗಿದೆ ಎಂದು ತಿಳಿಸಿದೆ. ‌

ADVERTISEMENT

ಮುಂಗಾರು ಋತುವಿನಲ್ಲಿ 3.61 ಲಕ್ಷ ಹೆಕ್ಟೇರ್‌ನಲ್ಲಿ ಈರುಳ್ಳಿ ಬಿತ್ತನೆಯ ಗುರಿ ಹೊಂದಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಿತ್ತನೆ ಪ್ರದೇಶದಲ್ಲಿ ಶೇ 27ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.  ‌ 

ಹಿಂಗಾರು ಋತುವಿನಲ್ಲಿ ಹೆಚ್ಚಾಗಿ ಆಲೂಗೆಡ್ಡೆ ಬೆಳೆಯಲಾಗುತ್ತದೆ. ಆದರೆ, ಕರ್ನಾಟಕ, ಹಿಮಾಚಲ ಪ್ರದೇಶ, ಉತ್ತರಾಖಂಡ, ಮೇಘಾಲಯ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಮುಂಗಾರು ಅವಧಿಯಲ್ಲಿ ಬಿತ್ತನೆ ಮಾಡುವುದು ಹೆಚ್ಚು. ಈ ಫಸಲನ್ನು ಸೆಪ್ಟೆಂಬರ್‌–ನವೆಂಬರ್‌ನಲ್ಲಿ ಮಾರುಕಟ್ಟೆಗೆ ಪೂರೈಕೆಯಾಗುತ್ತದೆ ಎಂದು ವಿವರಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಮುಂಗಾರಿನಲ್ಲಿ ಆಲೂಗೆಡ್ಡೆ ಬಿತ್ತನೆ ಪ್ರದೇಶದಲ್ಲಿ ಶೇ 12ರಷ್ಟು ಏರಿಕೆಯಾಗಿದೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ನಿಗದಿತ ಬಿತ್ತನೆ ಪೂರ್ಣಗೊಂಡಿದೆ. ಕರ್ನಾಟಕ ಸೇರಿ ಇತರೆ ರಾಜ್ಯಗಳಲ್ಲಿ ಬಿತ್ತನೆ ಪ್ರಕ್ರಿಯೆ ಉತ್ತಮವಾಗಿದೆ. ಹಿಂಗಾರು ಅವಧಿಯಲ್ಲಿ 273 ಲಕ್ಷ ಟನ್‌ನಷ್ಟು ಆಲೂಗೆಡ್ಡೆಯನ್ನು ಶೈತ್ಯಾಗಾರದಲ್ಲಿ ದಾಸ್ತಾನು ಮಾಡಲಾಗಿದೆ. ಹಾಗಾಗಿ, ಮಾರುಕಟ್ಟೆಯಲ್ಲಿ ಅಭಾವ ತಲೆದೋರುವುದಿಲ್ಲ ಎಂದು ವಿವರಿಸಿದೆ.  

ದೇಶದಲ್ಲಿ ಕಳೆದ ವರ್ಷ ಈರುಳ್ಳಿ ಮತ್ತು ಆಲೂಗೆಡ್ಡೆ ಉತ್ಪಾದನೆ ಇಳಿಕೆಯಾಗಿತ್ತು. ಇದರಿಂದ ಪ್ರಸಕ್ತ ವರ್ಷ ಮಾರುಕಟ್ಟೆಯಲ್ಲಿ ಇವುಗಳ ಧಾರಣೆಯಲ್ಲಿ ಏರಿಕೆಯಾಗಿತ್ತು. ಬೇಸಿಗೆಯಲ್ಲಿ ಬಿಸಿಲ ಝಳ ಹೆಚ್ಚಳ ಮತ್ತು ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟ ಕಡಿಮೆ ಇತ್ತು. ಹಾಗಾಗಿ ಬೆಂಡೆಕಾಯಿ, ಸೋರೆಕಾಯಿ, ಬೀನ್ಸ್‌ ಮತ್ತು ಎಲೆಕೋಸು ಬೆಲೆಯಲ್ಲಿ ಏರಿಕೆಯಾಗಿತ್ತು. ಗ್ರಾಹಕರು ಆಲೂಗೆಡ್ಡೆ, ಈರುಳ್ಳಿ, ಟೊಮೆಟೊ ಬಳಕೆಯತ್ತ ಚಿತ್ತ ನೆಟ್ಟಿದ್ದರಿಂದ ಇವುಗಳ ಬೆಲೆಯಲ್ಲಿ ಏರಿಕೆಯಾಗಿತ್ತು ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.