ADVERTISEMENT

ಜುಲೈಗೆ ತೊಗರಿ, ಕಡಲೆ, ಉದ್ದು ಬೆಲೆ ಇಳಿಕೆ?

ಪಿಟಿಐ
Published 14 ಜೂನ್ 2024, 15:47 IST
Last Updated 14 ಜೂನ್ 2024, 15:47 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಉತ್ತಮ ಮುಂಗಾರು ನಿರೀಕ್ಷೆ ಹಾಗೂ ಆಮದು ಪ್ರಮಾಣದಲ್ಲಿನ ಏರಿಕೆಯಿಂದಾಗಿ ಜುಲೈನಿಂದ ತೊಗರಿ, ಕಡಲೆ ಮತ್ತು ಉದ್ದಿನ ಬೇಳೆ ಧಾರಣೆಯು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನಿಧಿ ಖಾರೆ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂದಿನ ತಿಂಗಳಿನಿಂದ ಈ ಮೂರು ಪದಾರ್ಥಗಳ ಆಮದು ಪ್ರಮಾಣದಲ್ಲಿ ಏರಿಕೆಯಾಗಲಿದೆ. ಇದರಿಂದ ದೇಶೀಯ ಮಟ್ಟದಲ್ಲಿ ಪೂರೈಕೆ ಹೆಚ್ಚಾಗಲಿದೆ. ಹಾಗಾಗಿ, ಗ್ರಾಹಕರು ಮತ್ತಷ್ಟು ಬೆಲೆ ಏರಿಕೆಯಾಗಲಿದೆ ಎಂಬ ಆತಂಕಕ್ಕೆ ಒಳಗಾಗಬಾರದು’ ಎಂದರು.

ADVERTISEMENT

ಕಳೆದ ಆರು ತಿಂಗಳಿನಿಂದಲೂ ಈ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು, ಸ್ಥಿರವಾಗಿದೆ. ಆದರೆ, ಹೆಸರು ಮತ್ತು ಮಸೂರ ಅವರೆ ದರದಲ್ಲಿ ಏರಿಕೆಯಾಗಿಲ್ಲ ಎಂದು ತಿಳಿಸಿದರು.

‘ಈ ಬಾರಿಯ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ನಿರೀಕ್ಷಿಸಲಾಗಿದೆ. ಹಾಗಾಗಿ, ದ್ವಿದಳಧಾನ್ಯಗಳ ಬಿತ್ತನೆ ಪ್ರದೇಶದಲ್ಲಿ ವಿಸ್ತರಣೆಯಾಗಲಿದೆ. ಇದರಿಂದ ಮಾರುಕಟ್ಟೆಯಲ್ಲಿ ಪೂರೈಕೆ ಸರಪಳಿ ಸದೃಢಗೊಳ್ಳಲಿದೆ’ ಎಂದರು. 

ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಕಡಲೆ ಬೇಳೆ ಪ್ರತಿ ಕೆ.ಜಿಗೆ ₹87.74, ತೊಗರಿ ₹160.75, ಉದ್ದಿನ ಬೇಳೆ ₹126.67, ಹೆಸರು ₹118.9 ಹಾಗೂ ಮಸೂರ ಅವರೆ ದರವು ₹94.34 ಇದೆ. 

ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ಮ್ಯಾನ್ಮಾರ್‌ ಮತ್ತು ಆಫ್ರಿಕಾದ ದೇಶಗಳಿಂದ 8 ಲಕ್ಷ ಟನ್‌ ತೊಗರಿ ಮತ್ತು 6 ಲಕ್ಷ ಟನ್‌ ಉದ್ದಿನ ಬೇಳೆಯನ್ನು ಆಮದು ಮಾಡಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.