ನವದೆಹಲಿ: ಈ ಹಣಕಾಸು ವರ್ಷದಲ್ಲಿ ಸಾಲ ನೀಡಿಕೆ ಪ್ರಮಾಣವು ಶೇ 14–15ರಷ್ಟು ಹೆಚ್ಚಳ ಆಗುವ ನಿರೀಕ್ಷೆ ಇದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ನ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಹೇಳಿದ್ದಾರೆ.
ಒಟ್ಟು ಆಂತರಿಕ ಉತ್ಪನ್ನದಲ್ಲಿ ಆಗುವ ಏರಿಕೆ ಮತ್ತು ಹಣದುಬ್ಬರದ ಆಧಾರದಲ್ಲಿ ಸಾಲ ನೀಡಿಕೆ ಪ್ರಮಾಣವನ್ನು ಲೆಕ್ಕ ಹಾಕಲಾಗುತ್ತದೆ. ಹೀಗೆ ಲೆಕ್ಕ ಹಾಕಿದಾಗ ಈ ವರ್ಷದ ಪ್ರಗತಿಯು ಶೇ 14ರಷ್ಟಿರಬಹುದು ಎಂದು ಅಂದಾಜಿಸಿದ್ದೇವೆ. ಸಾಲ ನೀಡುವುದಕ್ಕೆ ಇರುವ ಅವಕಾಶಗಳ ಮೇಲೆ ಕೂಡ ಈ ಪ್ರಗತಿ ಅವಲಂಬಿತವಾಗಿದೆ. ಈ ಪ್ರಮಾಣದ ಬೆಳವಣಿಗೆಯು ಅಪಾಯವನ್ನು ಎದುರಿಸುವ ನಮ್ಮ ಸಾಮರ್ಥ್ಯದ ಮಿತಿಯೊಳಗೇ ಇದೆ ಎಂದು ಅವರು ವಿವರಿಸಿದ್ದಾರೆ.
ಠೇವಣಿಯು ಶೇ 11ರ ಪ್ರಮಾಣದಲ್ಲಿ ಬೆಳೆಯಬಹುದು ಎಂಬ ಅಂದಾಜು ಇದೆ ಎಂದು ಅವರು ಹೇಳಿದ್ದಾರೆ.
ಬ್ಯಾಂಕ್ ಹೊಂದಿರುವ ಹೆಚ್ಚುವರಿ ನಗದು ಮೀಸಲು ಅನುಪಾತವು (ಎಸ್ಎಲ್ಆರ್) ₹3.5 ಲಕ್ಷ ಕೋಟಿಯಿಂದ ₹4 ಲಕ್ಷ ಕೊಟಿಯಷ್ಟು ಇದೆ. ನಮ್ಮ ಸಾಲ-ಠೇವಣಿ ಅನುಪಾತವು ಶೇ 68-69ರಷ್ಟಿದೆ. ಹಾಗಾಗಿ ಸಾಲ ನೀಡಿಕೆಯನ್ನು ಹೆಚ್ಚಿಸಲು ಸಾಕಷ್ಟು ಅವಕಾಶ ಇದೆ ಎಂದು ಅವರು ಹೇಳಿದ್ದಾರೆ.
‘ನಾವು ಯಾವಾಗಲೂ ಠೇವಣಿಗಳಿಗೆ ಪ್ರಾಮುಖ್ಯತೆ ನೀಡುತ್ತೇವೆ. ಅದಕ್ಕಾಗಿಯೇ ಇತ್ತೀಚೆಗೆ ಅಲ್ಪಾವಧಿಯ ಠೇವಣಿಗಳ ಬಡ್ಡಿದರವನ್ನು ಹೆಚ್ಚಿಸಿದ್ದೇವೆ. ಈ ವರ್ಷದಲ್ಲಿ ನಾವು ಕನಿಷ್ಠ ಶೇ 12-13ರಷ್ಟು ಬೆಳೆಯಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.