ADVERTISEMENT

ಟೊಮೆಟೊ | ಕೆ.ಜಿಗೆ ₹80: ಗ್ರಾಹಕ ತತ್ತರ

ಕೆ.ಜಿಗೆ ₹80 ದರ: ಆಹಾರ ತಯಾರಿಕೆ ವೆಚ್ಚ ಹೆಚ್ಚಳ– ಕ್ರಿಸಿಲ್

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 15:42 IST
Last Updated 5 ಜುಲೈ 2024, 15:42 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ವಿವಿಧ ಚಿಲ್ಲರೆ ಮಾರುಕಟ್ಟೆಗಳಲ್ಲಿ ಟೊಮೆಟೊ ಧಾರಣೆಯು ಪ್ರತಿ ಕೆ.ಜಿಗೆ ₹80 ದಾಟಿದ್ದು, ಗ್ರಾಹಕರು ತತ್ತರಿಸಿದ್ದಾರೆ. 

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಟೊಮೆಟೊ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಬೇಸಿಗೆ ಅವಧಿಯಲ್ಲಿ ಬೆಳೆದಿರುವ ಟೊಮೆಟೊ ಬೆಳೆಯು ರೋಗ ಬಾಧೆಗೆ ತುತ್ತಾಗಿದೆ. ಜೊತೆಗೆ, ತಾಪಮಾನ ಹೆಚ್ಚಳದಿಂದಾಗಿ ಈ ಎರಡು ರಾಜ್ಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ಪಾದನೆಯಲ್ಲಿ ಶೇ 35ರಷ್ಟು ಇಳಿಕೆಯಾಗಿದೆ. ಹಾಗಾಗಿ, ಪೂರೈಕೆಯಲ್ಲಿ ಕೊರತೆಯಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ADVERTISEMENT

ಬಿಸಿ ಗಾಳಿ ಕೂಡ ಧಾರಣೆ ಏರಿಕೆಗೆ ಕಾರಣವಾಗಿದೆ. ನವದೆಹಲಿಯಲ್ಲಿ ಮದರ್‌ ಡೇರಿಯು ತನ್ನ ‘ಸಫಲ್‌’ ಮಳಿಗೆಗಳ ಮೂಲಕ ಪ್ರತಿ ಕೆ.ಜಿಗೆ ₹75 ದರದಲ್ಲಿ ಟೊಮೆಟೊ ಮಾರಾಟ ಮಾಡುತ್ತಿದೆ. 

ದೇಶದ ಕೆಲವು ಭಾಗಗಳಲ್ಲಿ ಟೊಮೆಟೊ ಚಿಲ್ಲರೆ ಧಾರಣೆಯು ಕಳೆದ ಒಂದು ತಿಂಗಳ ಅವಧಿಯಲ್ಲಿ ದುಪ್ಪಟ್ಟಾಗಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಬರುವ ಬೆಲೆ ನಿಯಂತ್ರಣ ವಿಭಾಗದ ಮಾಹಿತಿ ಪ್ರಕಾರ,  ಪ್ರಸ್ತುತ ದೇಶದಲ್ಲಿ ಟೊಮೆಟೊದ ಸರಾಸರಿ ಬೆಲೆ ಕೆ.ಜಿಗೆ ₹58.2 ಇದೆ. ಕಳೆದ ತಿಂಗಳಿನಲ್ಲಿ ಇದ್ದ ಚಿಲ್ಲರೆ ದರಕ್ಕೆ ಹೋಲಿಸಿದರೆ ಶೇ 64.45ರಷ್ಟು ಏರಿಕೆಯಾಗಿದೆ. ಸಗಟು ದರದಲ್ಲಿ ಶೇ 73.24ರಷ್ಟು ಹೆಚ್ಚಳವಾಗಿದೆ. 

ಒಂದು ತಿಂಗಳ ಅವಧಿಯಲ್ಲಿ ಚಿಲ್ಲರೆ ಈರುಳ್ಳಿ ದರ ಶೇ 32.19, ಆಲೂಗೆ‌ಡ್ಡೆ ಶೇ 17.09ರಷ್ಟು ಏರಿಕೆಯಾಗಿದೆ. ಪ್ರತಿ ಕೆ.ಜಿ ಈರುಳ್ಳಿ ಬೆಲೆಯು ₹32.53ರಿಂದ ₹43ಕ್ಕೆ ಮುಟ್ಟಿದೆ.

ಕಳೆದ ವರ್ಷದ ಮಾನ್ಸೂನ್‌ ಅವಧಿಯಲ್ಲಿ ಟೊಮೆಟೊ ಬೆಲೆ ಏರಿಕೆ ಕಂಡಿತ್ತು. ಆ ವರ್ಷದ ಜುಲೈ–ಆಗಸ್ಟ್‌ನಲ್ಲಿ ಪ್ರತಿ ಕೆ.ಜಿಗೆ ₹350 ದಾಟಿತ್ತು. ಬಳಿಕ ಸೆಪ್ಟೆಂಬರ್‌ ವೇಳೆಗೆ ಇಳಿಕೆ ಕಂಡಿತ್ತು. ‍ಈ ಬಾರಿಯೂ ಹಿಂದಿನ ವರ್ಷದ ಸ್ಥಿತಿಯೇ ಮುಂದುವರಿಯುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. 

ಆಹಾರ ತಯಾರಿಕಾ ವೆಚ್ಚ ಏರಿಕೆ:

ಟೊಮೆಟೊ, ಆಲೂಗೆಡ್ಡೆ, ಈರುಳ್ಳಿ ಬೆಲೆ ಏರಿಕೆಯಿಂದಾಗಿ ಜೂನ್‌ನಲ್ಲಿ ಮನೆಯಲ್ಲಿ ತಯಾರಿಸುವ ಆಹಾರದ ವೆಚ್ಚದಲ್ಲಿ ಶೇ 10ರಷ್ಟು ಏರಿಕೆಯಾಗಿದೆ ಎಂದು ಕ್ರೆಡಿಟ್ ರೇಟಿಂಗ್ಸ್‌ ಸಂಸ್ಥೆ ಕ್ರಿಸಿಲ್‌ ತಿಳಿಸಿದೆ.

ಮೇ ತಿಂಗಳಿನಲ್ಲಿ ಮನೆಯಲ್ಲಿ ಒಂದು ಪ್ಲೇಟ್‌ ಸಸ್ಯಾಹಾರ ತಯಾರಿಕೆ ವೆಚ್ಚ ₹26.7 ಇತ್ತು. ಜೂನ್‌ನಲ್ಲಿ ₹29.4ಕ್ಕೆ ತಲುಪಿದೆ. ಟೊಮೆಟೊ, ಈರುಳ್ಳಿ, ಆಲೂಗೆಡ್ಡೆ ಬೆಲೆ ಏರಿಕೆಗೆ ‍‍ಪ್ರತಿಕೂಲ ಹವಾಮಾನವೇ ಕಾರಣ ಎಂದು ವರದಿ ತಿಳಿಸಿದೆ.  

‘ಕಳೆದ ವರ್ಷದ ನವೆಂಬರ್‌ನಿಂದಲೂ ಮನೆಯಲ್ಲಿ ತಯಾರಿಸುವ ಸಸ್ಯಾಹಾರದ ಥಾಲಿ ದರದಲ್ಲಿ ಏರಿಕೆಯಾಗುತ್ತಿದೆ. ತರಕಾರಿಗಳ ಬೆಲೆ ಏರಿಕೆಯು ಇದಕ್ಕೆ ಕೊಡುಗೆ ನೀಡಿದೆ’ ಎಂದು ಕ್ರಿಸಿಲ್ ಮಾರ್ಕೆಟ್‌ ಇಂಟೆಲಿಜೆನ್ಸಿ ಆ್ಯಂಡ್‌ ಆ್ಯನಲಟಿಕ್ಸ್‌ನ (ಸಂಶೋಧನಾ) ನಿರ್ದೇಶಕ ಪೂಶನ್ ಶರ್ಮಾ ತಿಳಿಸಿದ್ದಾರೆ.

ಈರುಳ್ಳಿ ಬೆಲೆ ಸ್ಥಿರ: ಕೇಂದ್ರ

ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಚಿಲ್ಲರೆ ಬೆಲೆಯೂ ಸ್ಥಿರವಾಗಿದೆ ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯವು ಶುಕ್ರವಾರ ತಿಳಿಸಿದೆ.     ‘ಖಾರೀಪ್‌ ಋತುವಿನಲ್ಲಿ ಸಕಾಲದಲ್ಲಿ ಮಳೆ ಸುರಿದಿರುವುದು ಈರುಳ್ಳಿ ಟೊಮೆಟೊ ಆಲೂಗೆಡ್ಡೆ ಬೆಳೆಗೆ ವರದಾನವಾಗಿದೆ’ ಎಂದು ತಿಳಿಸಿದೆ.  ರಾಬಿ ಅವಧಿಯಲ್ಲಿ ಈರುಳ್ಳಿ ಉತ್ಪಾದನೆ ಕುಂಠಿತವಾಗಿತ್ತು. ಖಾರೀಪ್‌ ಅವಧಿಯಲ್ಲಿ 3.61 ಲಕ್ಷ ಹೆಕ್ಟೇರ್‌ನಲ್ಲಿ ಈರುಳ್ಳಿ ಬಿತ್ತನೆ ಗುರಿ ಹೊಂದಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಿತ್ತನೆಯಲ್ಲಿ ಶೇ 27ರಷ್ಟು ಏರಿಕೆಯಾಗಲಿದೆ ಎಂದು ತಿಳಿಸಿದೆ.   ಕರ್ನಾಟಕದಲ್ಲಿ 1.50 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ಇಲ್ಲಿಯವರೆಗೆ ಶೇ 30ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಇತರೆ ರಾಜ್ಯಗಳಲ್ಲೂ ಬಿತ್ತನೆ ಚುರುಕುಗೊಂಡಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.