ನವದೆಹಲಿ: ದೇಶದಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಡಿ ಹೆಚ್ಚಿನ ಪ್ರದೇಶದಲ್ಲಿ ಉದ್ದು ಬಿತ್ತನೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕಳೆದ ವರ್ಷದ ಮುಂಗಾರು ಋತುವಿನಲ್ಲಿ 3.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಉದ್ದು ಬಿತ್ತನೆಯಾಗಿತ್ತು. ಜುಲೈ 5ರ ವರೆಗೆ 5.37 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ ಎಂದು ತಿಳಿಸಿದೆ.
ಗ್ರಾಹಕ ವ್ಯವಹಾರಗಳ ಸಚಿವಾಲಯದ ನಿರಂತರ ಪ್ರಯತ್ನದಿಂದಾಗಿ ನವದೆಹಲಿ ಮತ್ತು ಇಂಧೋರ್ನ ಸಗಟು ಮಾರುಕಟ್ಟೆಯಲ್ಲಿ ಉದ್ದು ಬೆಲೆ ಇಳಿಕೆಯ ಹಾದಿ ಹಿಡಿದಿದೆ. ಆಮದು ಪ್ರಮಾಣದಲ್ಲಿಯೂ ಇಳಿಕೆಯಾಗುತ್ತಿದೆ ಎಂದು ತಿಳಿಸಿದೆ.
ಸದ್ಯ ಉದ್ದು ಸಗಟು ಮಾರಾಟ ಬೆಲೆಯು ಇಂದೋರ್ನಲ್ಲಿ ಶೇ 3.12ರಷ್ಟು ಮತ್ತು ನವದೆಹಲಿಯಲ್ಲಿ ಶೇ 1.08ರಷ್ಟು ಇಳಿಕೆಯಾಗಿದೆ.
ಮಧ್ಯಪ್ರದೇಶ, ಆಂಧ್ರಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ದು ಬೆಳೆಯಲಾಗುತ್ತದೆ.
ಸರ್ಕಾರದ ಏಜೆನ್ಸಿಗಳಾದ ನಾಫೆಡ್ ಮತ್ತು ಎನ್ಸಿಸಿಎಫ್ನಿಂದ ಬೆಂಬಲ ಬೆಲೆಯಡಿ ಉದ್ದು ಖರೀದಿಸಲಾಗುತ್ತಿದ್ದು, ಸಂಗ್ರಹಣೆ ಪ್ರಕ್ರಿಯೆ ಆರಂಭಗೊಂಡಿದೆ. ಮಧ್ಯಪ್ರದೇಶದಲ್ಲಿ 8,487, ಮಹಾರಾಷ್ಟ್ರ 2,037, ತಮಿಳುನಾಡು 1,611 ಮತ್ತು ಉತ್ತರಪ್ರದೇಶದಲ್ಲಿ 1,633 ರೈತರು ಹೆಸರು ನೋಂದಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.