ADVERTISEMENT

ಹಣಕಾಸು ಸಾಕ್ಷರತೆ | ಉಳಿತಾಯ, ಹೂಡಿಕೆ ಹೇಗಿರಬೇಕು?

ರಾಜೇಶ್ ಕುಮಾರ್ ಟಿ. ಆರ್.
Published 14 ಅಕ್ಟೋಬರ್ 2024, 0:47 IST
Last Updated 14 ಅಕ್ಟೋಬರ್ 2024, 0:47 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

26 ವರ್ಷದ ರೋಹಿತ್ ಎಂಬಿಎ ಪದವಿ ಮುಗಿಸಿ ಹೊಸ ಉದ್ಯೋಗಕ್ಕೆ ಸೇರಿ ಎರಡು ತಿಂಗಳಾಗಿವೆ. ಅವರಿಗೆ ಒಟ್ಟು ₹50 ಸಾವಿರ ಸಂಬಳ. ಎಲ್ಲಾ ಕಡಿತದ ಬಳಿಕ ಕೈಗೆ ₹40 ಸಾವಿರ ಸಿಗುತ್ತಿದೆ. ಇದರಲ್ಲಿ ಅವರು ಊಟ, ವಸತಿ, ಪ್ರಯಾಣ ವೆಚ್ಚ, ಸ್ನೇಹಿತರ ಜೊತೆ ಮನರಂಜನೆಗಾಗಿ ₹35 ಸಾವಿರ ಖರ್ಚು ಮಾಡುತ್ತಿದ್ದಾರೆ.

ಪ್ರತಿ ತಿಂಗಳು ಅವರ ಬಳಿ ಕೇವಲ ₹5 ಸಾವಿರ ಉಳಿಯುತ್ತಿದೆ. ರೋಹಿತ್ ಇಷ್ಟು ಹಣ ಉಳಿಸಿದರೆ ಸಾಕೇ? ಹಾಗಿದ್ದರೆ ಅವರ ಉಳಿತಾಯ ಮತ್ತು ಹೂಡಿಕೆ ಲೆಕ್ಕಾಚಾರ ಹೇಗೆ ಬದಲಾಗಬೇಕು? ಹೂಡಿಕೆ ಹೆಚ್ಚಿಸಿಕೊಳ್ಳಲು ಅವರು ಏನು ಮಾಡಬೇಕು? ಹೂಡಿಕೆಗೂ ಮುನ್ನ ಏನೆಲ್ಲಾ ಕ್ರಮ ಕೈಗೊಳ್ಳಬೇಕು? ಬನ್ನಿ ಈ ಲೇಖನದಲ್ಲಿ ₹50 ಸಾವಿರದ ಆಸುಪಾಸು ಸಂಬಳ ಹೊಂದಿರುವವರು ಹೇಗೆ ಉಳಿತಾಯ, ಹೂಡಿಕೆಯ ಆಲೋಚನೆ ಮಾಡಬೇಕು ಎನ್ನುವುದನ್ನು ಹಂತ ಹಂತವಾಗಿ ಕಲಿಯೋಣ.

ADVERTISEMENT

ಹಣಕಾಸು ನಿರ್ವಹಣೆಯ ಪ್ರಥಮ ಹೆಜ್ಜೆ:

ಹಣಕಾಸು ನಿರ್ವಹಣೆಗಾಗಿ ಮಾಡುವ ಬಜೆಟ್‌ನ ಪ್ರಥಮ ಹೆಜ್ಜೆ ಅಂದರೆ ಅದು 50:30:20 ನಿಯಮ. ಬಂದ ಆದಾಯದಲ್ಲಿ ಶೇ 50ರಷ್ಟು ಹಣವನ್ನು ಅಗತ್ಯಗಳಿಗೆ ಖರ್ಚು ಮಾಡಬೇಕು. ಶೇ 30ರಷ್ಟು ದುಡ್ಡನ್ನು ನಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ವ್ಯಯಿಸಬೇಕು. ಇನ್ನುಳಿದ ಶೇ 20ರಷ್ಟು ಹಣವನ್ನು ಕಡ್ಡಾಯವಾಗಿ ಉಳಿತಾಯ ಮಾಡಿ ಹೂಡಿಕೆ ಮಾಡಬೇಕು ಎನ್ನುತ್ತದೆ ಈ ನಿಯಮ.

ಈ ಲೆಕ್ಕಾಚಾರದಲ್ಲಿ ರೋಹಿತ್ ತಮ್ಮ ಗಳಿಕೆಯಲ್ಲಿ ₹20 ಸಾವಿರವನ್ನು ಊಟ, ವಸತಿ, ಕಚೇರಿ ಪ್ರಯಾಣದಂತಹ ಅಗತ್ಯಗಳಿಗೆ ಖರ್ಚು ಮಾಡಬಹುದು. ₹12 ಸಾವಿರವನ್ನು ಪ್ರವಾಸ, ಪಾರ್ಟಿ, ಐಷಾರಾಮಿ ವಸ್ತುಗಳ ಖರೀದಿಗೆ ಮೀಸಲಿಡಬಹುದು. ಉಳಿದ ₹8 ಸಾವಿರವನ್ನು ಕಡ್ಡಾಯವಾಗಿ ಉಳಿತಾಯ ಮಾಡಿ ಹೂಡಿಕೆ ಮಾಡಬೇಕು.

ಆದರೆ, ಸದ್ಯ ರೋಹಿತ್ ಕೇವಲ ₹5 ಸಾವಿರ ಉಳಿತಾಯ ಮಾಡುತ್ತಿದ್ದು, ಇದು ತೀರಾ ಕಡಿಮೆ ಮೊತ್ತವಾಗಿದೆ. ಅವರು ತಮ್ಮ ಪ್ರವಾಸ, ಪಾರ್ಟಿ ವೆಚ್ಚದ ಮೇಲೆ ಹಿಡಿತ ಸಾಧಿಸಿ ಉಳಿತಾಯವನ್ನು ಕನಿಷ್ಠ ₹8 ಸಾವಿರಕ್ಕೆ ಹೆಚ್ಚಿಸಿಕೊಳ್ಳಲೇಬೇಕು. 50:30:20 ನಿಯಮದ ಪ್ರಕಾರ ಆದಾಯದ ಶೇ 20ರಷ್ಟು ಮೊತ್ತವನ್ನು ಉಳಿತಾಯ ಹೂಡಿಕೆಗೆ ಮೀಸಲಿಡಲೇಬೇಕು ಎನ್ನುವುದು ಒಂದು ಮಾನದಂಡ ಅಷ್ಟೆ. ವಾಸ್ತವದಲ್ಲಿ ಆದಾಯ ಹೆಚ್ಚಾದಂತೆ ಉಳಿತಾಯದ ಪ್ರಮಾಣವನ್ನು ಶೇ 30ರಿಂದ ಶೇ 40ರ ವರೆಗೂ ಕೊಂಡೊಯ್ಯಬೇಕು.

ಹಣಕಾಸು ನಿರ್ವಹಣೆಯಲ್ಲಿ ಸುರಕ್ಷತೆ ಅಗತ್ಯ:

ವೈಯಕ್ತಿಕ ಹಣಕಾಸು ನಿರ್ವಹಣೆ ಮಾಡುವಾಗ ಬಂದ ಆದಾಯದಲ್ಲಿ ಉಳಿತಾಯ, ಹೂಡಿಕೆ ಮಾಡುವುದಕ್ಕೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ಜೀವನದ ಸುರಕ್ಷತೆಗೆ ನೀಡಬೇಕು. ಅಂದರೆ ಜೀವನದ ಅನಿಶ್ಚಿತ ಸಂದರ್ಭಗಳು ಮತ್ತು ಆನಾರೋಗ್ಯದ ಪರಿಸ್ಥಿತಿಯನ್ನು ಎದುರಿಸಲು ಟರ್ಮ್ ಲೈಫ್ ಇನ್ಶೂರೆನ್ಸ್ ಮತ್ತು ಹೆಲ್ತ್ ಇನ್ಶೂರೆನ್ಸ್ ತೆಗೆದುಕೊಳ್ಳಬೇಕು.

ಉದಾಹರಣೆಗೆ ರೋಹಿತ್ ಪ್ರತಿ ತಿಂಗಳು ತಮ್ಮ ಕೈಗೆ ಸಿಗುವ ₹40 ಸಾವಿರ  ಸಂಬಳದಲ್ಲಿ ₹8 ಸಾವಿರ ಉಳಿತಾಯ ಮಾಡುತ್ತಾರೆ ಎಂದುಕೊಳ್ಳಿ. ಈ ಪೈಕಿ ₹1,500 ಸಾವಿರವನ್ನು ತಂದೆ– ತಾಯಿ ಮತ್ತು ಸ್ವತಃ ಅವರಿಗೆ ಒಳ್ಳೆಯ ಕವರೇಜ್ ಇರುವ ಹೆಲ್ತ್ ಇನ್ಶೂರೆನ್ಸ್ ಪಡೆದುಕೊಳ್ಳಲು ಬಳಸಿಕೊಳ್ಳಬೇಕು. ಟರ್ಮ್ ಲೈಫ್ ಇನ್ಶೂರೆನ್ಸ್ ಖರೀದಿಗೆ ₹500 ಮೀಸಲಿಡಬೇಕು. ನಂತರದಲ್ಲಿ ತುರ್ತು ನಿಧಿ (ಎಮರ್ಜೆನ್ಸಿ ಫಂಡ್) ಸ್ಥಾಪಿಸಿಕೊಳ್ಳಬೇಕು.

ತುರ್ತು ನಿಧಿಯು ನಿತ್ಯದ ಬದುಕಿನಲ್ಲಿ ಎದುರಾಗುವ ಅನಾರೋಗ್ಯ, ತಾತ್ಕಾಲಿಕ ಉದ್ಯೋಗ ನಷ್ಟದಂತಹ ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಲು ನೆರವಿಗೆ ಬರುತ್ತದೆ. ಕನಿಷ್ಠ 3ರಿಂದ 6 ತಿಂಗಳ ತುರ್ತು ನಿಧಿಯ ಮೊತ್ತ ರೋಹಿತ್ ಬಳಿ ಇರಬೇಕು. ಅವರ ಮಾಸಿಕ ಅಗತ್ಯ ವೆಚ್ಚಗಳು ಸುಮಾರು ₹20 ಸಾವಿರದಷ್ಟು. ಈ ಅಂದಾಜಿನ ಪ್ರಕಾರ ಕನಿಷ್ಠ ಮೂರು ತಿಂಗಳಿಗೆ ಸಾಕಾಗುವ ತುರ್ತು ನಿಧಿ ಅಂದರೆ ₹60 ಸಾವಿರವನ್ನು ರೋಹಿತ್ ಮೀಸಲಿಟ್ಟುಕೊಳ್ಳಬೇಕಾಗುತ್ತದೆ.

ಅಯ್ಯೋ ಇರುವ ₹8 ಸಾವಿರ ಉಳಿತಾಯದಲ್ಲಿ ಒಂದೇ ಬಾರಿಗೆ ₹60 ಸಾವಿರ ಎಲ್ಲಿಂದ ತರುವುದು ಎನ್ನುವ ಪ್ರಶ್ನೆ ನಿಮಗೆ ಎದುರಾಗಬಹುದು. ತುರ್ತು ನಿಧಿಯನ್ನು ಧುತ್ತೆಂದು ಸ್ಥಾಪಿಸಬೇಕಿಲ್ಲ. ಪ್ರತಿ ತಿಂಗಳ ₹8 ಸಾವಿರ ಉಳಿತಾಯದಲ್ಲಿ ಸುಮಾರು ₹2 ಸಾವಿರವನ್ನು ತುರ್ತು ನಿಧಿಗೆ ಮೀಸಲಿಡುತ್ತಾ ಸಾಗಿದರೆ ಎರಡರಿಂದ ಎರಡೂವರೆ ವರ್ಷದಲ್ಲಿ ₹60 ಸಾವಿರ ಮೊತ್ತದ ತುರ್ತು ನಿಧಿ ಸ್ಥಾಪನೆಯಾಗುತ್ತದೆ.

ಇನ್ನುಳಿದ ₹4 ಸಾವಿರವನ್ನು ರೋಹಿತ್ ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ರೋಹಿತ್ ವಯಸ್ಸು ಚಿಕ್ಕದಿರುವ ಕಾರಣ ಬೆಲೆ ಏರಿಕೆಯನ್ನು ಮೀರಿ ದೀರ್ಘಾವಧಿಯಲ್ಲಿ ಲಾಭ ಗಳಿಸಿಕೊಳ್ಳುವಲ್ಲಿ ಈಕ್ವಿಟಿ ಮ್ಯೂಚುಯಲ್ ಫಂಡ್ ಒಂದು ಒಳ್ಳೆಯ ಆಯ್ಕೆಯಾಗುತ್ತದೆ. ₹4 ಸಾವಿರವನ್ನು ಇಂಡೆಕ್ಸ್ ಮ್ಯೂಚುವಲ್ ಫಂಡ್, ಲಾರ್ಜ್ ಕ್ಯಾಪ್ , ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಫ್ಲೆಕ್ಸಿ ಕ್ಯಾಪ್ ಮತ್ತು ಮಲ್ಟಿ ಕ್ಯಾಪ್ ಫಂಡ್‌ಗಳಲ್ಲಿ ಹೂಡಿಕೆಗೆ ಪರಿಗಣಿಸಬಹುದು.

ಮ್ಯೂಚುಯಲ್ ಫಂಡ್‌ನಲ್ಲಿ ಶೇ 12ರಷ್ಟು ವಾರ್ಷಿಕ ಲಾಭ ಸಿಕ್ಕರೂ ಪ್ರತಿ ತಿಂಗಳು ₹4 ಸಾವಿರ ಹೂಡಿಕೆ ಮಾಡುತ್ತಾ ಹೋದರೆ 10 ವರ್ಷದಲ್ಲಿ ಹೂಡಿಕೆ ಮೊತ್ತ ಮತ್ತು ಗಳಿಕೆ ಸೇರಿ ಸುಮಾರು ₹10 ಲಕ್ಷ ಮೊತ್ತವು ರೋಹಿತ್ ಬಳಿ ಇರುತ್ತದೆ. ಇನ್ನೊಂದು ವಿಷಯವನ್ನು ಇಲ್ಲಿ ಗಮನಿಸಿಕೊಳ್ಳಿ. ರೋಹಿತ್ ಸಂಬಳ ಮುಂದಿನ 10 ವರ್ಷದಲ್ಲಿ ಇದ್ದಷ್ಟೇ ಇರುವುದಿಲ್ಲ. ವರ್ಷದಿಂದ ವರ್ಷಕ್ಕೆ ಅದು ಕೂಡ ಹೆಚ್ಚುತ್ತಾ ಹೋಗುತ್ತದೆ. ಅದಕ್ಕೆ ಅನುಗುಣವಾಗಿ ಹೂಡಿಕೆ ಮೊತ್ತವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದರೆ ಅವರಿಗೆ 10 ವರ್ಷದಲ್ಲಿ ₹20ರಿಂದ ₹25 ಲಕ್ಷದ ಮೊತ್ತವನ್ನು ಗಳಿಸಿಕೊಳ್ಳುವುದು ಕಷ್ಟವಾಗುವುದಿಲ್ಲ.

ಅಲ್ಲದೆ, ರೋಹಿತ್ ತನ್ನ ಆಸೆಗಳಿಗೆ ಮಾಡುವ ವೆಚ್ಚವನ್ನು ತಗ್ಗಿಸಿಕೊಂಡರೆ ಇನ್ನೂ ಉಳಿತಾಯ ಹೂಡಿಕೆ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಅಂದರೆ, ಗಳಿಕೆಯಲ್ಲಿ ಉಳಿತಾಯ ಮತ್ತು ಹೂಡಿಕೆಯನ್ನು ಎಷ್ಟು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತೇವೋ ಅಷ್ಟು ಅನುಕೂಲವಾಗುತ್ತದೆ.

ಎರಡನೇ ವಾರವೂ ಕುಸಿದ ಷೇರುಪೇಟೆ

ಷೇರು ಸೂಚ್ಯಂಕಗಳು ಸತತ ಎರಡನೇ ವಾರವೂ ಕುಸಿತ ದಾಖಲಿಸಿವೆ. ಅಕ್ಟೋಬರ್ 11ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಅಲ್ಪ ಮೊತ್ತದ ಇಳಿಕೆ ಕಂಡಿವೆ. 81381 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.38ರಷ್ಟು ಕುಸಿದಿದೆ. 24964 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಶೇ 0.2ರಷ್ಟು ಇಳಿಕೆಯಾಗಿದೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಎಫ್ಎಂಸಿಜಿ ಶೇ -2.05 ಲೋಹ ವಲಯ ಶೇ -1.78 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ -1.62 ಎನರ್ಜಿ ಶೇ -1.34 ಅನಿಲ ಮತ್ತು ತೈಲ ಶೇ -1.25 ಬ್ಯಾಂಕ್ ಶೇ –0.56 ಮತ್ತು ಫೈನಾನ್ಸ್ ಶೇ 0.04ರಷ್ಟು ಕುಸಿದಿವೆ. ನಿಫ್ಟಿ ಫಾರ್ಮಾ ಸೂಚ್ಯಂಕ ಅತಿಹೆಚ್ಚು ಅಂದರೆ ಶೇ 2.11ರಷ್ಟು ಗಳಿಸಿಕೊಂಡಿದೆ. ಆಟೊ ವಲಯ ಶೇ 1.97 ಐಟಿ ವಲಯ ಶೇ 1.01 ರಿಯಲ್ ಎಸ್ಟೇಟ್ ಶೇ 0.85 ಮತ್ತು ಮಾಧ್ಯಮ ವಲಯ ಶೇ 0.3ರಷ್ಟು ಹೆಚ್ಚಳ ಕಂಡಿವೆ. ಇಳಿಕೆ–ಗಳಿಕೆ: ನಿಫ್ಟಿಯಲ್ಲಿ ವಾರದ ಲೆಕ್ಕಾಚಾರ ನೋಡಿದಾಗ ಟೈಟನ್ ಶೇ -5.14 ಟಾಟಾ ಸ್ಟೀಲ್ ಶೇ –3.63 ಎಸ್ ಬಿಐ ಲೈಫ್ ಇನ್ಶೂರೆನ್ಸ್ ಶೇ -3.55 ಬ್ರಿಟಾನಿಯಾ ಇಂಡಸ್ಟ್ರೀಸ್ ಶೇ -3.53 ನೆಸ್ಲೆ ಇಂಡಿಯಾ ಶೇ -3.24 ಐಟಿಸಿ ಶೇ –2.98 ಮತ್ತು ಇಂಡಸ್ ಇಂಡ್ ಬ್ಯಾಂಕ್ ಶೇ –2.97ರಷ್ಟು ಕುಸಿದಿವೆ. ಟ್ರೆಂಟ್ ಶೇ 11.92 ಕೋಟಕ್ ಮಹೀಂದ್ರ ಬ್ಯಾಂಕ್ ಶೇ 4.1 ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 3.91 ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 3.27 ಅಪೋಲೊ ಹಾಸ್ಪಿಟಲ್ಸ್ ಶೇ 3.12 ಏರ್‌ಟೆಲ್ ಶೇ 2.82 ಎಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಶೇ 2.07 ಮತ್ತು ಮಾರುತಿ ಸುಜುಕಿ ಶೇ 1.36ರಷ್ಟು ಗಳಿಸಿಕೊಂಡಿವೆ. ಮುನ್ನೋಟ: ಈ ವಾರ ರಿಲಯನ್ಸ್ ಬಜಾಜ್ ಆಟೊ ಇನ್ಫೊಸಿಸ್ ವಿಪ್ರೊ ನೆಸ್ಲೆ ಹ್ಯಾವೆಲ್ಸ್ ಪಾಲಿಕ್ಯಾಬ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಕಂಪನಿಗಳ ಫಲಿತಾಂಶದ ಆಧಾರದಲ್ಲಿ ನಿರ್ದಿಷ್ಟ ಷೇರುಗಳ ಬೆಲೆಯಲ್ಲಿ ಏರಿಳಿತ ನಿರೀಕ್ಷಿಸಬಹುದಾಗಿದೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಲಿವೆ. ಒಟ್ಟಾರೆಯಾಗಿ ಸದ್ಯದ ಸ್ಥಿತಿಯಲ್ಲಿ ಏರಿಳಿತದ ಹಾದಿ ಮುಂದುವರಿಯಲಿದೆ.

ಲೇಖಕ: ಚಾರ್ಟರ್ಡ್ ಅಕೌಂಟೆಂಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.