ADVERTISEMENT

ಮಹಿಳೆಯರನ್ನು ಗೌರವಿಸುವುದರಿಂದ ಏಳಿಗೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 19:30 IST
Last Updated 15 ಜುಲೈ 2012, 19:30 IST

ಶಿವಮೊಗ್ಗ: ಯಾವ ಸಮಾಜದಲ್ಲಿ ಮಹಿಳೆಯರನ್ನು ಗೌರವದಿಂದ ಕಾಣಲಾಗುತ್ತದೆಯೋ ಆ ಸಮಾಜ ಅಭಿವೃದ್ಧಿ ಕಾಣುತ್ತದೆ ಎಂದು `ಸೂಡಾ~ ಅಧ್ಯಕ್ಷ ಎಸ್. ದತ್ತಾತ್ರಿ ಅಭಿಪ್ರಾಯಪಟ್ಟರು.

ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಭಾನುವಾರ `ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ~ ಹಮ್ಮಿಕೊಂಡಿದ್ದ ಸ್ನೇಹ-ಮಿಲನ ಹಾಗೂ ವಾರ್ಷಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ನಾಯರ್ ಸಮಾಜದಲ್ಲಿ ಮಹಿಳೆಯರನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತಿದೆ. ಹಾಗಾಗಿ, ಸಮಾಜದ ಜನರು ಏಳಿಗೆ ಹೊಂದಲು ಸಾಧ್ಯವಾಗಿದೆ ಎಂದು ಶ್ಲಾಘಿಸಿದರು.

ADVERTISEMENT

ಇಷ್ಟು ಮಾತ್ರವಲ್ಲದೆ ನಾಯರ್ ಸಮಾಜ ತಮ್ಮ ಸಮಾಜದ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿಯೂ ಮಹತ್ತರವಾದ ಪಾತ್ರ ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಯುವಕರು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಕರೆ ನೀಡಿದರು.

ಇಂದು ಎಷ್ಟೋ ಸಮುದಾಯಗಳು ಒಡೆದು ಚೂರು ಚೂರಾಗಿವೆ. ಈ ಮೂಲಕ ಏನನ್ನೂ ಸಾಧಿಸಲಾಗುತ್ತಿಲ್ಲ. ಆದರೆ, ನಾಯರ್ ಸಮುದಾಯದವರು ಧೈರ್ಯ ಮತ್ತು ಶಕ್ತಿಯ ಮೂಲಕ ಯಾವುದೇ ಗುರಿ ಮುಟ್ಟಬಲ್ಲವರಾಗಿದ್ದು, ಇತರೆ ಸಮುದಾಯಗಳಿಗೆ ಮಾದರಿಯಾಗಿದ್ದಾರೆ ಎಂದು ವಿವರಿಸಿದರು.  ಬೆಂಗಳೂರಿನ ಶಾಂತಗಿರಿ ಆಶ್ರಮದ ಪದ್ಮಪ್ರಕಾಶ ಜ್ಞಾನತಪಸ್ವಿ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಿದರು.

ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ಅಧ್ಯಕ್ಷ ವಿ.ಕೆ. ಗೋವಿಂದನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವಿ. ವಿಜಯ್‌ಕುಮಾರ್, ಕೆ.ಜಿ. ಶಂಕರ್, ವಿ. ವಿಜಯನ್, ಸಾವಿತ್ರಿ ಪೊಡುವಾಳ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.