ADVERTISEMENT

ಮಹಾಲಿಂಗಪುರ: ನೀರಿನ ಹರಿವು ಪ್ರಮಾಣ ಪರಿಶೀಲನೆ; ಚಿಮ್ಮಡ ಕಾಲುವೆಗೆ ಎಸಿ ಭೇಟಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 13:02 IST
Last Updated 24 ಫೆಬ್ರುವರಿ 2024, 13:02 IST
ಮಹಾಲಿಂಗಪುರ ಸಮೀಪದ ಚಿಮ್ಮಡ ಜಿಎಲ್‌ಬಿಸಿ ಕಾಲುವೆಗೆ ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ ಭೇಟಿ ನೀಡಿ ಪರಿಶೀಲಿಸಿದರು
ಮಹಾಲಿಂಗಪುರ ಸಮೀಪದ ಚಿಮ್ಮಡ ಜಿಎಲ್‌ಬಿಸಿ ಕಾಲುವೆಗೆ ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ ಭೇಟಿ ನೀಡಿ ಪರಿಶೀಲಿಸಿದರು    

ಮಹಾಲಿಂಗಪುರ: ಸಮೀಪದ ಚಿಮ್ಮಡ ಗ್ರಾಮದಲ್ಲಿ ಹರಿಯುವ ಘಟಪ್ರಭಾ ಎಡದಂಡೆ ಮುಖ್ಯ ಕಾಲುವೆಗೆ ಶುಕ್ರವಾರ ರಾತ್ರಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಭೇಟಿ ನೀಡಿ ನೀರಿನ ಹರಿವಿನ ಪ್ರಮಾಣವನ್ನು ಪರಿಶೀಲಿಸಿದರು.

ಕುಡಿಯುವ ನೀರಿನ ಉದ್ದೇಶಕ್ಕಾಗಿ ಜಿಎಲ್‌ಬಿಸಿ ಕಾಲುವೆಗೆ ಹತ್ತು ದಿನಗಳವರೆಗೆ ನೀರು ಹರಿಸಲಾಗುತ್ತಿದೆ. ಅದರಲ್ಲಿ ಈಗಾಗಲೇ ಐದು ದಿನ ಮುಕ್ತಾಯಗೊಂಡಿದೆ. ಆದರೆ, ಇದುವರೆಗೆ ಬೀಳಗಿ ಭಾಗದ ಬಹುತೇಕ ಗ್ರಾಮಗಳಿಗೆ ನೀರು ತಲುಪುತ್ತಿಲ್ಲ ಎನ್ನುವ ದೂರುಗಳು ಬಂದ ಹಿನ್ನೆಲೆ ಎಸಿ ಖುದ್ದು ಭೇಟಿ ನೀಡಿದರು.

‘ಮಧುರಖಂಡಿ ಭಾಗದ ಹಲವು ರೈತರು ಜಮಖಂಡಿ ಕಾಲುವೆಗೆ ಹೆಚ್ಚುವರಿ ನೀರು ಹರಿಸುವಂತೆ ಸ್ಥಳಿಯ ನಿಯಂತ್ರಕರಿಗೆ ಒತ್ತಡಹಾಕಿ ನೀರು ಹರಿಸುತ್ತಿದ್ದಾರೆ ಹಾಗೂ ಮುಧೋಳ ಭಾಗದ ರೈತರು ಉಪ ಕಾಲುವೆಗಳ ಗೇಟ್ ಗಳನ್ನು ಒಡೆದು ನೀರನ್ನು ತಮ್ಮ ಜಮೀನುಗಳಿಗೆ ಹರಿಸುತ್ತಿರುವುದರಿಂದ ಬೀಳಗಿ ಭಾಗಕ್ಕೆ ನೀರು ಪೂರೈಕೆಯಾಗುತ್ತಿಲ್ಲ’ ಎಂದು ಮುಧೋಳ ಪ್ರಭಾರ ಕಾರ್ಯ ನಿರ್ವಾಹಕ ಎಂಜಿನಿಯರ್ ಎಚ್.ಆರ್.ಮಹಾರಡ್ಡಿ ಮಾಹಿತಿ ನೀಡಿದರು.

ADVERTISEMENT

ಕುಡಿಯುವ ಉದ್ದೇಶಕ್ಕೆ ಅವಶ್ಯವಿರುವಷ್ಟು ನೀರನ್ನು ಮಾತ್ರ ಮುಧೋಳ ಹಾಗೂ ಜಮಖಂಡಿ ಕಾಲುವೆಗೆ ಹರಿಸಬೇಕು. ಗೇಟ್‌ಗಳನ್ನು ಒಡೆದು ಇಲಾಖೆಯ ಆಸ್ತಿಗಳಿಗೆ ಹಾನಿ ಮಾಡುವವರ ಮೇಲೆ ಪೊಲೀಸ್ ಠಾಣೆಗಳಲ್ಲಿ ಮೊಕದ್ದಮೆ ದಾಖಲಿಸುವಂತೆ ಉಪವಿಭಾಗಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದರು.

ಜಮಖಂಡಿ ಕಾರ್ಯ ನಿರ್ವಾಹಕ ಎಂಜಿನಿಯರ್ ಶ್ರೀಶೈಲ ಕಲ್ಯಾಣಿ, ಸಹಾಯಕ ಕಾರ್ಯಪಾಲಕ ಚೇತನ ಅಬ್ಬಿಗೇರಿ, ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ನೀಲನ್ನವರ, ಸದಾಶಿವ ಕುಂಬಾರ ಉಪಸ್ಥಿತರಿದ್ದರು.

ಮಹಾಲಿಂಗಪುರ ಸಮೀಪದ ಚಿಮ್ಮಡ ಜಿಎಲ್‌ಬಿಸಿ ಕಾಲುವೆಗೆ ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.