ADVERTISEMENT

ಕೃಷಿ ಖುಷಿ | ಬಿಸನಾಳಕೊಪ್ಪ: ಮಳೆ ನೀರಿನಿಂದಲೇ ಸಮಗ್ರ ಕೃಷಿ

ಶ್ರೀಧರ ಗೌಡರ
Published 28 ಜೂನ್ 2024, 4:35 IST
Last Updated 28 ಜೂನ್ 2024, 4:35 IST
<div class="paragraphs"><p>ಹವ್ಯಾಸಿ ಕೃಷಿಕ ಗಿರಿಮಲ್ಲಪ್ಪ ಶಿರೂರ</p></div>

ಹವ್ಯಾಸಿ ಕೃಷಿಕ ಗಿರಿಮಲ್ಲಪ್ಪ ಶಿರೂರ

   

ಕೂಡಲಸಂಗಮ: ಬರಡು ಭೂಮಿಯನ್ನು ಕೃಷಿ ಭೂಮಿಯಾಗಿ ಪರಿವರ್ತಿಸಿ, ಮಳೆ ನೀರಿನಿಂದಲೇ ರೇಷ್ಮೆ, ವಿವಿಧ ಹಣ್ಣಿನ, ಅರಣ್ಯ ಆಧಾರಿತ ಗಿಡಗಳನ್ನು ಬೆಳೆದ ಬಿಸನಾಳಕೊಪ್ಪದ ಗಿರಿಮಲ್ಲಪ್ಪ ಶಿರೂರ ಇತರ ರೈತರಿಗೆ ಮಾದರಿಯಾಗಿದ್ದಾರೆ.

ವೃತ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ, ಪ್ರವೃತ್ತಿಯಲ್ಲಿ ಕೃಷಿಕ. 10 ವರ್ಷಗಳ ಹಿಂದೆ ಬರಡು ಭೂಮಿಯಾಗಿದ್ದ 15 ಎಕರೆ ಭೂಮಿಯನ್ನು ಕೃಷಿ ಭೂಮಿಯಾಗಿ ಪರಿವರ್ತಿಸಿದರು. ನದಿ, ಕೊಳವೆಬಾವಿ ನೀರಿನ ಸಂಪರ್ಕ ಇಲ್ಲದೇ ಮಳೆಯ ನೀರಿನ ಸಂಗ್ರಹದಿಂದಲೇ 15 ಎಕರೆ ಭೂಮಿಯಲ್ಲಿ ಭಿನ್ನ ರೀತಿಯ ಕೃಷಿ ಮಾಡುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

ADVERTISEMENT

5 ಎಕರೆ ಭೂಮಿಯಲ್ಲಿ ರೇಷ್ಮೆ, ಮೂರು ಎಕರೆ ಭೂಮಿಯಲ್ಲಿ ಹಣ್ಣಿನ ಗಿಡಗಳು, ಎರಡು ಎಕರೆಯಲ್ಲಿ ಅರಣ್ಯ ಆಧಾರಿತ ಗಿಡಗಳು, 5 ಎಕರೆ ಭೂಮಿಯಲ್ಲಿ ಸಾಮಾನ್ಯ ಬೆಳೆ ಬೆಳೆಯುತ್ತಿದ್ದಾರೆ.

4 ಅಡಿ ಅಗಲ, 4 ಅಡಿ ಉದ್ದ, 4 ಅಡಿ ಆಳದ ತಗ್ಗು ತೆಗೆದು ಅದರಲ್ಲಿ ವಿವಿಧ ಕಸ, ಕಡ್ಡಿ, ಗೊಬ್ಬರ, ಮಣ್ಣು ಹಾಕಿ ಹಣ್ಣಿನ, ಅರಣ್ಯ ಆಧಾರಿತ ಗಿಡಗಳನ್ನು ಹಚ್ಚುತ್ತೇವೆ. ಗಿಡಗಳ ಸಾಲಿನ ಮಧ್ಯ 12 ಅಡಿ ಉದ್ದ, 4 ಅಡಿ ಅಗಲ, 3 ಅಡಿ ಆಳದ ಮಲಚಿಂಗ ಗುಂಡಿಗಳನ್ನು ತೆಗೆದು ಅದರಲ್ಲಿ ಕೃಷಿ ಭೂಮಿಯಲ್ಲಿಯ ತ್ಯಾಜ್ಯ ಹಾಕಲಾಗುತ್ತದೆ. ಮಳೆ ಬಂದಾಗ ನೀರು ಸಂಪೂರ್ಣ ತುಂಬಿಕೊಳ್ಳುತ್ತದೆ. ಒಮ್ಮೆ ತುಂಬಿಕೊಂಡರೆ ಒಂದು ವರ್ಷ ಕಾಲ ಅದರಲ್ಲಿಯ ನೀರಿನ ತೇವಾಂಶದಿಂದಲೇ ಗಿಡಗಳು ಬೆಳೆಯುತ್ತವೆ. ಈ ಮಾದರಿಯಲ್ಲಿಯೇ ನಾನು 4 ವರ್ಷಗಳ ಹಿಂದೆ 10 ಅಡಿ ಅಗಲ, 10 ಅಡಿ ಉದ್ದದ ನಡುವೆ ಗಿಡ ಹಚ್ಚಿದ್ದೇನೆ. ಇಂದು ಕೆಲವು ಗಿಡಗಳು ಫಸಲು ನೀಡುತ್ತಿವೆ. ಇನ್ನೂ ಕೆಲವು ಗಿಡಗಳು ಫಸಲು ಕೊಡುವ ಹಂತಕ್ಕೆ ಬಂದಿವೆ.

ಮಲಚಿಂಗ್ ಗುಂಡಿಯಲ್ಲಿ ನೀರಿನ ಕೊರತೆ ಆದರೆ ಬೃಹತ್ ಕೃಷಿ ಹೊಂಡ ಇದ್ದು ಅದರಲ್ಲಿಯ ನೀರು ಬಳಸುತ್ತೇವೆ. ಇಲ್ಲಿಯವರೆಗೂ ಮಲಚಿಂಗ್ ಗುಂಡಿಯ ತೇವಾಂಶದಿಂದಲೇ ಗಿಡಗಳು ಬೆಳೆದಿವೆ. ಕೃಷಿ ಹೊಂಡದ ನೀರು ಬಳಸಿಯೇ ಇಲ್ಲ ಎನ್ನುತ್ತಾರೆ ಗಿರಿಮಲ್ಲಪ್ಪ.

ಮರಗಡ್ಡಿ ಪದ್ದತಿಯಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದೇನೆ. ಈ ಕೃಷಿಯಿಂದ ಖರ್ಚು ಕಳೆದು ವಾರ್ಷಿಕ ₹ 7 ಲಕ್ಷದಿಂದ ₹ 8 ಲಕ್ಷ ಆದಾಯ ಬರುತ್ತದೆ. ನಿತ್ಯ ಬೆಳಿಗ್ಗೆ 6 ರಿಂದ 8ರವರೆಗೆ, ಸಂಜೆ 5 ರಿಂದ 7 ರವರೆಗೆ ಕೃಷಿ ಕಾಯಕದಲ್ಲಿ ತೊಡಗುತ್ತೇನೆ. ಅಗತ್ಯ ಬಿದ್ದಾಗ ಮಾತ್ರ ಕಾರ್ಮಿಕರನ್ನು ಕೆಲಸಕ್ಕೆ ಕರೆಯುತ್ತೇನೆ.

‘80 ಮಾವು, 60 ನೇರಳೆ, 20 ಚಿಕ್ಕು, 15 ಹಲಸು, 60 ತೆಂಗು, 100 ಪೇರಲ, 10 ಅಂಜೂರ, 30 ಸೀತಾಫಲ, 20 ರಾಮಫಲ, 20 ಲಕ್ಷ್ಮಣ ಫಲ, 20 ಲಿಂಬೆ ಮುಂತಾದ ಹಣ್ಣಿನ ಗಿಡಗಳು, 2 ಎಕರೆ ಭೂಮಿಯಲ್ಲಿ ಅರಣ್ಯ ಆಧಾರಿತ ಹುಣಸೆ, ಬೇವು, ಸೀಮಾರೋ ಮುಂತಾದ ಗಿಡಗಳನ್ನು ಬೆಳೆಸಿದ್ದೇನೆ. 5 ಎಕರೆ ಭೂಮಿಯಲ್ಲಿ ಸಾಮಾನ್ಯ ಕೃಷಿ ಮಾಡುತ್ತೇನೆ. ಬದುವಿಗೆ ಬಿದಿರು, ಬಾಳೆ, ಕರಿಬೇವು ಹಚ್ಚಿದ್ದೇನೆ’ ಎಂದು ವಿವರಿಸಿದರು. (9448060520 ಸಂಪರ್ಕಿಸಬಹುದು).

ಮಲಚಿಂಗ ಗುಂಡಿಗಳು
ರೇಷ್ಮೆ ಹುಳುಗಳು
ಆರಂಭದಿಂದಲೂ ನನಗೆ ಕೃಷಿಯಲ್ಲಿ ಆಸಕ್ತಿ. ಸಾಮಾಜಿಕ ಜಾಲತಾಣ ಕೋಲಾರ ಜಿಲ್ಲೆಯ ರೈತರ ಕೃಷಿ ಪದ್ದತಿಯಿಂದ ಪ್ರೇರಣೆಗೊಂಡು ಈ ಪ್ರಯೋಗ ಮಾಡಿದೆ ಯಶಸ್ವಿಯೂ ಆಗಿದ್ದೇನೆ
ಗಿರಿಮಲ್ಲಪ್ಪ ಶಿರೂರ ಹವ್ಯಾಸಿ ಕೃಷಿಕ

ಹಲವು  ಪ್ರಯೋಗ

ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಕೃಷಿಯಲ್ಲಿ ಉತ್ತಮ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಮಣ್ಣಿನ ಫಲವತ್ತತೆ ವೃದ್ಧಿಸಬಲ್ಲ ಸಾವಯವ ಕೃಷಿ ಅವಲಂಬಿಸಿದ್ದಾರೆ. ಕೃಷಿಯಿಂದ ವಿಮುಖಗೊಳ್ಳುತ್ತಿರುವವರ ಮಧ್ಯದಲ್ಲಿಯೇ ಮಕ್ಕಳಿಗೆ ಪಾಠ ಮಾಡುವುದರ ಜೊತೆಗೆ ಕೃಷಿ ಕಾಯಕದ ಪಾಠವನ್ನೂ ಮಾಡುತ್ತ ಮಾದರಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.