ಬೀಳಗಿ: ದೇವರ ವಿಗ್ರಹಗಳನ್ನೇ ಕದಿಯುತ್ತಿದ್ದ ಕಳ್ಳನನ್ನು ಬೀಳಗಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬೀಳಗಿ ಪೊಲೀಸರಿಂದ ನಡೆದ ಕಾರ್ಯಾಚರಣೆಯಲ್ಲಿ ಬಂಧಿತನಿಂದ ₹ 6.20 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣ ವಶಕ್ಕೆ ಪಡೆಯಲಾಗಿದೆ. ಶಂಕರ ಬಾಳಾಸೊ ಗುರುವ (45) ಬಂಧಿತ ಆರೋಪಿ. ಈತ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಬುಡ್ ಗ್ರಾಮದವನು ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಬೀಳಗಿ ತಾಲ್ಲೂಕಿನ ಚಿಕ್ಕಾಲಗುಂಡಿ ಗ್ರಾಮದಲ್ಲಿ ದುರ್ಗಾದೇವಿಯ ದೇವಸ್ಥಾನದ ಗರ್ಭಗುಡಿಗೆ ಹಾಕಿದ ಕೀಲಿ ಮುರಿದು ದೇವಿಯ ಮೈ ಮೇಲೆ ಹಾಕಿದ್ದ ₹ 5,62,500 ಮೌಲ್ಯದ ಬಂಗಾರದ ಆಭರಣಗಳು ಹಾಗೂ ₹ 57,500 ಮೌಲ್ಯದ 1 ಕೆ.ಜಿಗೂ ಹೆಚ್ಚಿನ ತೂಕದ ಬೆಳ್ಳಿಯ ಆಭರಣಗಳು, ಬಾಗಲಕೋಟೆ ತಾಲ್ಲೂಕಿನ ಹಳೆ ಸಿಂದಗಿಯಲ್ಲಿ₹ 70 ಸಾವಿರ ಬೆಲೆ ಬಾಳುವ ಬೆಳ್ಳಿಯ ಆಂಜನೇಯ ಮೂರ್ತಿಯನ್ನ ಕಳ್ಳತನಮಾಡಿದ್ದಾನೆ.
ಬಾಗಲಕೋಟೆ ಎಸ್.ಪಿ. ಜಯಪ್ರಕಾಶ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಡಿವೈಎಸ್ಪಿ ಪಂಪನಗೌಡ ಮಾರ್ಗದರ್ಶನದ ಮೇರೆಗೆ ಬೀಳಗಿ ಸಿಪಿಐ ಕೆ.ಟಿ. ಶೋಭಾ, ಪಿಎಸ್ಐ ಮಂಜುನಾಥ ತಿರಕನ್ನವರ ಹಾಗೂ ಪ್ರೀತಮ ನಾಯಕ ನೇತೃತ್ವದ ತಂಡ ಕಾರ್ಯಚರಣೆ ನಡೆಸಿದಾಗ, ಕಾತರಕಿ-ಚಿಕ್ಕಾಲಗುಡಿಯ ಸರಹದ್ದಿನಲ್ಲಿ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಆರೋಪಿಯನ್ನು ಎಎಸ್ಐ ಸಿದ್ದು ಹೊಕ್ರಾಣಿ, ಕಾನ್ಸ್ಟೆಬಲ್ ಬಾಬು ಹುಡೇದ ಠಾಣೆಗೆ ಕರೆತಂದು ವಿಚಾರಿಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ರವಿ ಶಿಂಧೆ, ಎಲ್.ಎಚ್. ಬಾಳಾಗೊಳ, ವಿ.ವಿ.ಕೊಲಂಬಿ, ಆನಂದ್ ತೇಲಿ, ಚನ್ನಪ್ಪ ತಳವಾರ, ಪುರು ಲಮಾಣಿ, ರಮೇಶ ನಾಯಕ, ರಮೇಶ ಹೊಸಮನಿ, ಮುತ್ತು ಹಾದಿಮನಿ ಕಳ್ಳನ ಬಂಧನದ ವೇಳೆ ಕಾರ್ಯನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.