ADVERTISEMENT

ಜಮಖಂಡಿ | ಕೊಲೆ ಯತ್ನ: ಐವರಿಗೆ 3 ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 15:22 IST
Last Updated 5 ಅಕ್ಟೋಬರ್ 2024, 15:22 IST

ಜಮಖಂಡಿ: ಮಾರಾಟ ಮಾಡಿದ್ದ ಕಬ್ಬಿನ ವಾಡಿ ಹಣ ಕೇಳಲು ಹೋಗಿದ್ದ ವ್ಯಕ್ತಿಯ ಕೊಲೆಗೆ ಯತ್ನಿಸಿದ್ದ ಐವರಿಗೆ 3 ವರ್ಷ ಜೈಲು ಶಿಕ್ಷೆ, ತಲಾ ₹22,500 ದಂಡ ವಿಧಿಸಿ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಹ್ಮದ್ ಇಮತಿಯಾಜ್ ಅಹ್ಮದ್ ಆದೇಶ ಹೊರಡಿಸಿದ್ದಾರೆ.

ಆರು ಪೆಂಡಿ ಕಬ್ಬಿನವಾಡಿ ಮಾರಾಟದ ಹಣ ಕೇಳಲುಹೋಗಿದ್ದ ಕುಂಚನೂರ ಸರಹದ್ದಿನಲ್ಲಿರುವ ಯಮನಪ್ಪ ನಂದೆಪ್ಪ ಗೋಡೆಕಾರ (46) ಮೇಲೆ ಕುಂಬಾರಹಳ್ಳದ ಕಮಲವ್ವ ಪ್ರಕಾಶ ಛತ್ರಬಾನು, ಶ್ರೀಕಾಂತ ಪರಪ್ಪ ಪಾಟೀಲ, ಮಲ್ಲಿಕಾರ್ಜುನ ಪರಪ್ಪ ಪಾಟೀಲ, ಸದಾಶಿವ ಗುರುಪಾದಪ್ಪ ಕುಲಗೂಡ, ಶ್ರುತಿ ಸದಾಶಿವ ಕುಲಗೂಡ ಅವರು ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದರು ಎಂದು 2021ರ ನವೆಂಬರ್ 24 ರಂದು ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪಿಎಸ್‌ಐ ವಸಂತ ಬಂಡಗಾರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ಜಿ.ಎಸ್‌. ಪಾಟೀಲ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT