ಬಾದಾಮಿ: ಹೊರವಲಯದ ಗದಗ ಬೈಪಾಸ್ ರಸ್ತೆಯಲ್ಲಿ ದರೋಡೆಗೆ ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬುಧವಾರ ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ ಎಂದು ಪಿಎಸ್ಐ ವಿಠ್ಠಲ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಐವರ ಗುಂಪಿನಲ್ಲಿ ಒಬ್ಬ ವ್ಯಕ್ತಿ ಮತ್ತು ಮೂವರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಒಬ್ಬ ಅರೋಪಿ ಪರಾರಿಯಾಗಿದ್ದಾನೆ. ಆರೋಪಿಗಳಿಂದ ₹ 10 ಲಕ್ಷ ಮೌಲ್ಯದ ಕಾರು, ₹ 6.27 ಲಕ್ಷ ಮೌಲ್ಯದ 42 ಮೊಬೈಲ್ ಫೋನ್ ಮತ್ತು ದರೋಡೆ ಕೃತ್ಯಕ್ಕೆ ಬಳಸುವ ಹಗ್ಗ, ರಾಡ್ ಮತ್ತು ಕಾರದಪುಡಿಯನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಮೂವರು ಬಾಲಕರನ್ನು ಬಾಲ ನ್ಯಾಯ ಮಂಡಳಿಗೆ ಒಪ್ಪಿಸಲಾಗಿದೆ. ಪರಾರಿಯಾದ ಒಬ್ಬ ಆರೋಪಿಯ ಹುಡುಕಾಟ ಮುಂದುವರಿದಿದೆ.
ವಿವಿಧ ಸಂತೆಗಳಲ್ಲಿ ಮೊಬೈಲ್ ಕದಿಯುತ್ತಿದ್ದ ಬಾಲಕರು, ಅವುಗಳನ್ನು ಪರಾರಿಯಾದ ವ್ಯಕ್ತಿಗೆ ಕೊಡುತ್ತಿದ್ದರು ಎಂದು ಬಾಲಕರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ರಾತ್ರಿ ಗಸ್ತು ತಿರುಗುತ್ತಿದ್ದಾಗ ಪೊಲೀಸರನ್ನು ಕಂಡು ಆರೋಪಿಗಳು ಓಡಿ ಪರಾರಿಯಾಗಲು ಯತ್ನಿಸಿದರು. ಅವರನ್ನು ಬೆನ್ನತ್ತಿದ ಪೊಲೀಸರು ನಾಲ್ವರನ್ನು ಸೆರೆ ಹಿಡಿದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರಡ್ಡಿ, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಡಿವೈಎಸ್ಪಿ ಮಹಾಂತೇಶ ಜಿದ್ದಿ, ಹೆಚ್ಚುವರಿ ಡಿವೈಎಸ್ಪಿ ನಾರಾಯಣ ಕುಲಕರ್ಣಿ ನಿರ್ದೇಶನದಲ್ಲಿ ಸಿಪಿಐ ಕರಿಯಪ್ಪ ಬನ್ನೆ, ಅಪರಾಧ ವಿಭಾಗದ ಪಿಎಸ್ಐ ವಿಜಯಕುಮಾರ ರಾಠೋಡ ಕಾರ್ಯಾಚರಣೆ ನಡೆಸಿದರು.
ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.