ಹುನಗುಂದ: ತಾಲ್ಲೂಕಿನ ನಾಗೂರು ಗ್ರಾಮಕ್ಕೆ ನಿಗದಿತ ಸಮಯಕ್ಕೆ ಬಸ್ ಬಾರದ ಕಾರಣ ಆಕ್ರೋಶಗೊಂಡ ವಿದ್ಯಾರ್ಥಿಗಳು ಗ್ರಾಮಸ್ಥರೊಂದಿಗೆ ಸೇರಿ ಬಸ್ ತಡೆದು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.
ಗುಡೂರು ಮಾರ್ಗದಿಂದ ಹುನಗುಂದ ಪಟ್ಟಣಕ್ಕೆ ಬೆಳಿಗ್ಗೆ ಶಾಲೆ– ಕಾಲೇಜು ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ಹೋಗಲು ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ ನಿಗದಿತ ಸಮಯಕ್ಕೆ ಶಾಲೆ– ಕಾಲೇಜುಗಳಿಗೆ ಹೋಗಲು ಪರದಾಡುವಂತಾಗಿದೆ.
ಈ ಮಾರ್ಗದಲ್ಲಿ ಕುಷ್ಟಗಿ ತಾಲ್ಲೂಕಿನ ಹುಚನೂರು, ಯರಿಗೋನಾಳ, ಪುರತಗೇರಿ, ಅಂಟರಠಾಣ, ಹುನಗುಂದ ಮತ್ತು ಇಳಕಲ್ ತಾಲ್ಲೂಕಿನ ಗುಡೂರು, ಇಲಾಳ, ಮುರುಡಿ, ಗಾಣದಾಳ, ಇಲಾಳ, ನಾಗೂರು, ಯಡಹಳ್ಳಿ, ಬನ್ನಹಟ್ಟಿ, ಹಿರೇಬಾದವಾಡಗಿ ಸೇರಿದಂತೆ 15ಕ್ಕೂ ಹೆಚ್ಚು ಗ್ರಾಮಗಳ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಮಾರ್ಗವನ್ನು ಅವಲಂಬಿಸಿದ್ದು, ನಿತ್ಯ ಬಸ್ಗಾಗಿ ಪರದಾಡುವುದು ತಪ್ಪಿಲ್ಲ. ಜೊತೆಗೆ ಸಮಯಕ್ಕೆ ಸರಿಯಾಗಿ ಶಾಲೆ–ಕಾಲೇಜಗಳಿಗೆ ತೆರಳಿ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಕಾಲೇಜು ವಿದ್ಯಾರ್ಥಿನಿಯೊಬ್ಬರು ದೂರಿದರು.
ಸರಿಸುಮಾರು 2-3 ಗಂಟೆಗಳ ಕಾಲ ಬಸ್ ತಡೆದಿದ್ದರಿಂದ ಸಂಚಾರ ಅಸ್ತವ್ಯಸ್ತವಾಯಿತು. ಹುನಗುಂದ ಬಸ್ ಘಟಕದ ವ್ಯವಸ್ಥಾಪಕ ಎಸ್.ಆರ್. ಸೊನ್ನದ ಅವರನ್ನು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ದೂರವಾಣಿ ಮೂಲಕ ಸಂಪರ್ಕಿಸಿ ಚರ್ಚಿಸಿದರು. ಮುಂಬರುವ ದಿನಗಳಲ್ಲಿ ಬಸ್ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಸೊನ್ನದ ಭರವಸೆ ನೀಡಿದರು.
ಶಾಲೆ–ಕಾಲೇಜುಗಳಿಗೆ ತೆರಳಲು ಸಮಯ ಮೀರಿದ್ದರಿಂದ ಕೆಲವು ವಿದ್ಯಾರ್ಥಿಗಳು ಪಟ್ಟಣದ ಬಸ್ ಘಟಕದ ಎದುರು ಜಮಾಯಿಸಿ ಅಧಿಕಾರಿಗಳ ಜೊತೆ ವಾಗ್ವಾದಕ್ಕಿಳಿದರು.
ಚಾಲಕ ಮತ್ತು ನಿರ್ವಾಹಕರು ವಿದ್ಯಾರ್ಥಿಗಳನ್ನು ಸಮಧಾನಪಡಿಸಲು ಮುಂದಾದರೂ ವಿದ್ಯಾರ್ಥಿಗಳ ಕೋಪ ಕಡಿಮೆಯಾಗಲಿಲ್ಲ. ನಂತರ ಸಮಯ ಮೀರಿದ್ದರಿಂದ ಬಹುತೇಕ ವಿದ್ಯಾರ್ಥಿಗಳು ಮರಳಿ ತಮ್ಮ ಊರಿಗೆ ಹೋದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಾಂತೇಶ ಮುರುಡಿ, ಗುಂಡನಗೌಡ ಪರತಗೌಡ್ರು, ಶರಣಪ್ಪ ಹೂಲಗೇರಿ, ಮಾಂತೇಶ ಮಾದರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.