ಇಳಕಲ್: ಕೊಲೆಯಾಗಿರುವ ಚಿತ್ರದುರ್ಗದ ರೇಣುಕಸ್ವಾಮಿ ಅವರ ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕು. ಕೊಲೆ ಪ್ರಕರಣದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ, ಇಲ್ಲಿಯ ಕಂಠಿ ವೃತ್ತದಲ್ಲಿ ಮಂಗಳವಾರ ವೀರಮಾಹೇಶ್ವರ ಜಂಗಮ ಸಮಾಜದವರು ತಹಶೀಲ್ದಾರ್ ಸತೀಶ ಕೂಡಲಗಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಗರದ ಪ್ರವಾಸಿ ಮಂದಿರ ಹತ್ತಿರದ ರೇಣುಕಾಚಾರ್ಯ ವೃತ್ತದಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಬಸ್ ನಿಲ್ದಾಣ ಮಾರ್ಗವಾಗಿ ಕಂಠಿ ವೃತ್ತ ತಲುಪಿದರು. ಸಂದೇಶಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಮಿಷನರ್ ಬಿ.ದಯಾನಂದ, ಡಿಸಿಪಿ ಗೀರಿಶ್, ಎಸಿಪಿ ಚಂದನ ಎಸ್, ಅಭಿಯೋಜಕರಾದ ಪ್ರಸನ್ನಕುಮಾರ ಅವರ ಭಾವಚಿತ್ರಗಳಿಗೆ ಪುಷ್ಪವೃಷ್ಟಿ ಮಾಡಿದರು.
ಇಳಕಲ್ ತಾಲ್ಲೂಕು ಜಂಗಮ ಸಮಾಜದ ಪ್ರಧಾನ ಕಾರ್ಯದರ್ಶಿ ಸಂಗಮೇಶ್ ಜಾವುರಮಠ ಮಾತನಾಡಿ, ‘ಕೊಲೆಯಾಗಿರುವ ರೇಣುಕಸ್ವಾಮಿಯ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು’ ಎಂದು ಎಂದು ಒತ್ತಾಯಿಸಿದರು.
ನಿವೃತ್ತ ಪ್ರಾಧ್ಯಾಪಕ ವಿಶ್ವನಾಥ ವಂಶಾಕೃತಮಠ ಮಾತನಾಡಿ, ʼರಾಜ್ಯದಲ್ಲಿ ಸಮಾಜದ ಬಾಂಧವರ ಸರಣಿ ಕೊಲೆಗಳಾಗಿವೆ. ಇದನ್ನು ಖಂಡಿಸುತ್ತೇವೆ. ಸರ್ಕಾರ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕುʼ ಎಂದರು. ಸಮಾಜ ಸೇವಕಿ ಜಯಶ್ರೀ ಸಾಲಿಮಠ ಮಾತನಾಡಿ, ʼಸಂದೇಶಸ್ವಾಮಿಯನ್ನು ಕೊಲೆ ಮಾಡಿರುವ ದರ್ಶನ್ನನ್ನು ಎನ್ಕೌಂಟರ್ ಮಾಡಬೇಕು. ಇಲ್ಲವೇ ಮಹಿಳೆಯರ ಕೈಯಲ್ಲಿ ಕೊಡಿ, ನಾವು ಪಾಠ ಕಲಿಸುತ್ತೇವೆ. ನೇಹಾ ಹಿರೇಮಠ, ಆಕಾಶ ಮಠಪತಿ, ರೇಣುಕಾ ಸ್ವಾಮಿಯ ಬರ್ಬರ ಹತ್ಯೆಯ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಲೇಬೇಕುʼ ಎಂದು ಒತ್ತಾಯಿಸಿದರು.
ವೀರಮಾಹೇಶ್ವರಿ ಜಂಗಮ ಸಮಾಜದ ಅಧ್ಯಕ್ಷ ಸಂಗಮೇಶ ಸಾರಂಗಮಠ, ಉಪಾಧ್ಯಕ್ಷ ದೊಡ್ಡಯ್ಯ ತೇಲಕಟ್ಟಮಠ, ಜಿ.ವಿ ಹಿರೇಮಠ, ಸಂತೋಷ ಮಠ, ಮಹಾಂತೇಶ ಹಿರೇಮಠ, ಉಮಾ ಮಠದ, ಸುಧಾ ಹಿರೇಮಠ, ಸಿದ್ದು ವಸ್ತ್ರದ, ಆದೇಶ ಬೇನಕನಾಳಮಠ, ಉಮೇಶ ಗಣಾಚಾರಿ, ಶಿವುಕುಮಾರ ನಂದಾಪುರಮಠ, ವಿರೂಪಾಕ್ಷ ಸರಗಣಾಚಾರಿ, ಶಂಕ್ರಯ್ಯ ಹಿರೇಮಠ, ಸಂಗಯ್ಯ ನಾಗಯ್ಯನವರ, ಈರಣ್ಣ ಕುಂದರಗಿಮಠ, ಜಿ.ಎಸ್. ಶಾಸ್ತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.