ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಈಚೆಗೆ ಸುರಿದ ಮಳೆಯಿಂದಾಗಿ ವಾಣಿಜ್ಯ ಬೆಳೆಗಳು ಸೇರಿದಂತೆ ಹೂ ಮತ್ತು ತರಕಾರಿ ಬೆಳೆಗಳಿಗೆ ಹಾನಿಯಾಗಿದೆ.
ಬನಹಟ್ಟಿ ಸಮೀಪದ ಜಗದಾಳ ಗ್ರಾಮದಲ್ಲಿ ಸದಾಶಿವ ಬಂಗಿ ತೋಟದ ಒಂದು ಎಕರೆ ಪ್ರದೇಶದಲ್ಲಿ ಬೆಳೆದ ಚಂಡು ಹೂ ಸಂಪೂರ್ಣವಾಗಿ ಹಾಳಾಗಿದೆ. ದೀಪಾವಳಿ ಸಂದರ್ಭದಲ್ಲಿ ಲಾಭವನ್ನು ತಂದು ಕೊಡಬೇಕಾಗಿದ್ದ ಹೂ ಹಾನಿಯನ್ನುಂಟು ಮಾಡಿದೆ. ಬಾಳೆ ಬೆಳೆಗೆ ಕೊಳೆ ರೋಗ ಉಂಟಾಗಿದೆ.
ಸಮೀಪದ ಯಲ್ಲಟ್ಟಿಯ ರಸ್ತೆಯ ತೋಟವೊಂದರಲ್ಲಿ ಹೊಸ ಕಬ್ಬಿನ ಬೆಳೆಯು ನೀರನಲ್ಲಿ ನಿಂತಿದೆ. ಸಾಕಷ್ಟು ಮಳೆಯಿಂದಾಗಿ ಭೂಮಿಯು ಜವುಳಗೊಂಡಿದೆ. ತೋಟದಲ್ಲಿ ಬೆಳೆದ ಬೆಂಡೆ, ಹಿರೇಕಾಯಿ, ಹೂವಿನ ಬೆಳೆ ಪೂರ್ತಿಯಾಗಿ ಹಾನಿಯಾಗಿದೆ. ಇನ್ನೂ ಒಂದು ತಿಂಗಳಿಗೆ ಫಸಲು ಬರಬೇಕಾದ ಹಿರೇಕಾಯಿ, ಹಾಗಲಕಾಯಿ, ಅಲಸಂದಿ ಮತ್ತು ಬೆಂಡೆಕಾಯಿ ಬೆಳೆ ಕೊಳೆತು ಹೋಗಿದ್ದರಿಂದ ಬೆಳೆಯನ್ನು ತೆಗೆದು ಹಾಕುತ್ತಿದ್ದೇವೆ ಎನ್ನುತ್ತಾರೆ ರೈತರಾದ ದಯಾನಂದ ಹೊರಟ್ಟಿ.
ಮಳೆಯಿಂದ ಹಾನಿಗೆ ಒಳಗಾದ ಬೆಳೆಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಜಗದಾಳ ಗ್ರಾಮದ ರೈತ ಸದಾಶಿವ ಬಂಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.