ಕುಳಗೇರಿ ಕ್ರಾಸ್: ಗ್ರಾಮದ ಪಡಿತರ ಧಾನ್ಯ ವಿತರಣಾ ಕೇಂದ್ರದಲ್ಲಿ ಸರ್ವರ್ ಸಮಸ್ಯೆಯಿಂದ ಫಲಾನುಭವಿಗಳು ಪಡಿತರ ಪಡೆಯಲು ವಿಳಂಬವಾಗಿದ್ದು ಕಳೆದ ಮೂನಾಲ್ಕು ದಿನಗಳಿಂದ ಖಾನಾಪುರ ಎಸ್.ಕೆ ಹಾಗೂ ಕುಳಗೇರಿ, ಚಿರ್ಲಕೊಪ್ಪ ಗ್ರಾಮದ ಜನರು ಪ್ರತಿನಿತ್ಯ ಪರದಾಡುತ್ತಿದ್ದಾರೆ.
‘ಆಹಾರ ಧಾನ್ಯ ಪಡೆಯಲು ವಿತರಣಾ ಕೇಂದ್ರಕ್ಕೆ ದಿನಕ್ಕೆ 2–3 ಸಲ ಬರುವುದು, ಸರ್ವರ್ ಸಮಸ್ಯೆಯಿಂದ ಮರಳುವುದು, ಜನರ ಜೊತೆ ಆಹಾರ ನಾಗರಿಕ ಸರಬರಾಜು ಇಲಾಖೆ ಆಟವಾಡುತ್ತಿದೆ’ ಎಂದು ಮಂಗಳವಾರ ವಿವಿಧ ಗ್ರಾಮಗಳ ಫಲಾ ನುಭವಿಗಳು ಇಲಾಖೆಯ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿದರು.
ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್ ಪಡಿತರ ವಿತರಣಾ ಕೇಂದ್ರದಲ್ಲಿ 1,000 ದಿಂದ 1,200 ಪಡಿತರ ಚೀಟಿಗಳಿವೆ. ಪ್ರತಿ ದಿನ ವಿವಿಧ ಗ್ರಾಮದಿಂದ ಫಲಾನುಭವಿಗಳು ವಿತರಣಾ ಕೇಂದ್ರಕ್ಕೆ ಬರುತ್ತಾರೆ. ಆದರೆ ಸರ್ವರ್ ಸಮಸ್ಯೆಯಿಂದ ಮರಳಿ ಹೋಗುವಂತಾಗಿದೆ.
ನೂರಾರು ಫಲಾನುಭವಿಗಳು ಸಾಲುಗಟ್ಟಿ ನಿಂತು, ಕೊನೆ ಕ್ಷಣದಲ್ಲಿ ಸರ್ವರ್ ಕೆಟ್ಟಿದೆಯೆಂದು ರೋಸಿ ಮರಳುವುದಕ್ಕೆ ರೋಸಿ ಹೋಗಿದ್ದಾರೆ. ಈ ಬಗ್ಗೆ ಕುಳಗೇರಿ ಗ್ರಾ.ಪಂ ಸದಸ್ಯ ರಾಮನಗೌಡ ದ್ಯಾವನಗೌಡ್ರ ಆಹಾರ ಸರಬರಾಜು ಇಲಾಖೆಯ ನಿರೀಕ್ಷಕರಿಗೆ ಕರೆ ಮಾಡಿ ಕೇಳಿದರೆ, ‘ರಾಜ್ಯದಾದ್ಯಂತ ಇಲಾಖೆಯ ಸರ್ವರ್ ಸಮಸ್ಯೆಯಿದೆ, ನಾವು ಏನೂ ಮಾಡಲಿಕ್ಕಾಗದು’ ಎಂದು ಸಮಜಾಯಿಷಿ ಹೇಳಿದ್ದಾಗಿ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.