ADVERTISEMENT

ಬಾಗಲಕೋಟೆ | ಎಪಿಎಂಸಿ: ಆದಾಯ ಹೆಚ್ಚಳ

ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ತಿದ್ದುಪಡಿ ಹಿಂದಕ್ಕೆ ಪಡೆದ ಪರಿಣಾಮ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 6:30 IST
Last Updated 13 ಅಕ್ಟೋಬರ್ 2024, 6:30 IST
ಬಾಗಲಕೋಟೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯ ಕಟ್ಟಡ
ಬಾಗಲಕೋಟೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯ ಕಟ್ಟಡ   

ಬಾಗಲಕೋಟೆ: ಕೃಷಿ ಉತ್ಪನ್ನ ಮಾರುಕಟ್ಟೆ (ಎ‍ಪಿಎಂಸಿ) ಕಾಯ್ದೆಗೆ ತಂದಿದ್ದ ತಿದ್ದುಪಡಿಯನ್ನು ರಾಜ್ಯ ಸರ್ಕಾರ ಹಿಂಪಡೆದ ಮೇಲೆ ಎಪಿಎಂಸಿ ಗಳಲ್ಲಿ ಮತ್ತೆ ವಹಿವಾಟು ಜೋರಾಗಿದೆ. ಎಪಿಎಂಸಿಗಳಿಗೆ ಆರ್ಥಿಕ ಬಲ ಬಂದಿದೆ.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಮುಕ್ತ ಮಾರುಕಟ್ಟೆಗೆ ಅವಕಾಶ ಕಲ್ಪಿಸಲಾಗಿತ್ತು.  ಮಾರುಕಟ್ಟೆ ಹೊರಗಡೆ ಮಾರಾಟವಾಗುವ ಕೃಷಿ ಉತ್ಪನ್ನಗಳಿಗೆ ವಿಧಿಸಲಾಗುತ್ತಿದ್ದ ಸೆಸ್ ಸಂಗ್ರಹಕ್ಕೆ ಕಡಿವಾಣ ಹಾಕಲಾಗಿತ್ತು. ಹಾಗಾಗಿ, ಆದಾಯ ನಿಂತು ಹೋಗಿತ್ತು. ಕೆಲವು ಕಡೆಗಳಲ್ಲಿ ಸಿಬ್ಬಂದಿ ಕೂಡ ಕಡಿತ ಮಾಡಲಾಗಿತ್ತು.

ಹೊರಗಡೆ ಸೆಸ್‌ ವಿಧಿಸುವುದನ್ನು ನಿಲ್ಲಿಸಿದ್ದರ ಜತೆಗೆ ಟೆಂಡರ್ ಇಲ್ಲದೆ ಹೊರಗಡೆ ತಾವೇ ದರ ನಿಗದಿ ಮಾಡಿ ಖರೀದಿಸುವುದಕ್ಕೆ ಅವಕಾಶ ಕಲ್ಪಿಸಿದ್ದರಿಂದ ಎಪಿಎಂಸಿ ವ್ಯಾಪಾರಸ್ಥರು ಹೊರಗಡೆಯೇ ವಹಿವಾಟು ಆರಂಭಿಸಿದ್ದರು. ಪರಿಣಾಮ ಎಪಿಎಂಸಿಗಳು ಬಿಕೊ ಎನ್ನಲಾರಂಭಿಸಿದ್ದವು.

ADVERTISEMENT

ಗಾಯದ ಮೇಲೆ ಬರೆ ಎಳೆದಂತೆ ₹100 ವಹಿವಾಟಿಗೆ ₹1.60 ಸೆಸ್ ಸಂಗ್ರಹಿಸಲಾಗುತ್ತಿತ್ತು. ಅದನ್ನು 60 ಪೈಸೆಗೆ ಇಳಿಸಲಾಗಿತ್ತು. ಇದೂ ಆದಾಯ ಕುಸಿತಕ್ಕೆ ಕಾರಣವಾಗಿತ್ತು.

ಆದಾಯದಲ್ಲಿ ಹೆಚ್ಚಳ: ಎಪಿಎಂಸಿ ಕಾಯ್ದೆಗೆ ತಂದಿದ್ದ ತಿದ್ದುಪಡಿಯನ್ನು ರದ್ದುಗೊಳಿಸಿದ ನಂತರ ಮಾರುಕಟ್ಟೆಯಲ್ಲಿ ವಹಿವಾಟು ಜೋರಾಗಿ ನಡೆದಿದೆ. ಜತೆಗೆ ಹೊರಗಡೆ ನಡೆಯುವ ವಹಿವಾಟಿಗೂ ಸೆಸ್‌ ಸಂಗ್ರಹವಾಗಲಿದೆ. ಮಾರುಕಟ್ಟೆಯಲ್ಲಿ 431 ನೋಂದಾಯಿದ ವ್ಯಾಪಾರಸ್ಥರು, 131 ದಲ್ಲಾಳಿಗಳಿದ್ದಾರೆ. ಅವರ ಸಂಖ್ಯೆ ಹೆಚ್ಚಾಗುತ್ತಲಿದೆ.

ಈ ಹಿಂದೆ ₹1.5 ಕೋಟಿಗೂ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದ್ದ ಸೆಸ್‌, 2022–23ನೇ ಸಾಲಿನಲ್ಲಿ ₹46.98 ಲಕ್ಷ ಸಂಗ್ರಹವಾಗಿತ್ತು. ಆದಾಯ ಕುಸಿತದಿಂದಾಗಿ ಎಪಿಎಂಸಿ ತೊಂದರೆಗೆ ಸಿಲುಕಿತ್ತು. ಕೆಲವು ಎಪಿಎಂಸಿ ಗಳಲ್ಲಿ ನಿರ್ವಹಣೆಗೂ ಕಷ್ಟ ಪಡಬೇಕಾದ ಸ್ಥಿತಿ ಎದುರಾಗಿತ್ತು.

ಎಪಿಎಂಸಿ ಕಾಯ್ದೆ ತಿದ್ದುಪಡಿ ವಾಪಸ್‌ ಪಡೆದ ನಂತರ ಇಲ್ಲಿಯವರೆಗೆ ಈ ವರ್ಷ ಸೆಪ್ಟೆಂಬರ್ ಅಂತ್ಯಕ್ಕೆ ಈಗಾಗಲೇ ₹80.97 ಲಕ್ಷ ಸಂಗ್ರಹವಾಗಿದೆ. ಸರ್ಕಾರದಿಂದ ₹2.50 ಕೋಟಿ ಗುರಿ ನಿಗದಿ ಮಾಡಲಾಗಿತ್ತು. ವರ್ಷದ ಅಂತ್ಯಕ್ಕೆ ಗುರಿ ತಲುಪುವ ಆಶಾಭಾವವಿದೆ.

ಉತ್ತಮ ಮಳೆ ಆಗಿರುವುದರಿಂದ ಈ ಬಾರಿ ಜಿಲ್ಲೆಯಲ್ಲಿ ಹೆಸರುಕಾಳು, ಸೂರ್ಯಕಾಂತಿ, ಮೆಕ್ಕೆಜೋಳ, ಸಜ್ಜೆ, ತೊಗರಿ, ಒಣ ಮೆಣಸಿನಕಾಯಿ ಫಸಲು ಉತ್ತಮವಾಗಿ ಬಂದಿದೆ.

ಹೆಸರುಕಾಳು, ಸೂರ್ಯಕಾಂತಿ, ಮೆಕ್ಕೆಜೋಳ, ಸಜ್ಜೆ ಇಲ್ಲಿನ ಎಪಿಎಂಸಿಗೆ ಬರುತ್ತದೆ. ಆದರೆ, ತೊಗರಿಯು ಕಲಬುರಗಿ ಮಾರುಕಟ್ಟೆಗೆ, ಒಣ ಮೆಣಸಿನಕಾಯಿ ಬ್ಯಾಡಗಿ ಮಾರುಕಟ್ಟೆಗೆ ಹೋಗುತ್ತದೆ.

‘ಒಣ ಮೆಣಸಿನಕಾಯಿಯನ್ನು ಬಾಗಲಕೋಟೆ ಮಾರುಕಟ್ಟೆಗೆ ತರುವಂತೆ ಮಾಡಲು ಒಣ ಮೆಣಸಿನಕಾಯಿ ಹರಾಜಿಗೆ ಯೋಜಿಸಲಾಗುತ್ತಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ವಿ.ಡಿ. ಪಾಟೀಲ ತಿಳಿಸಿದರು.

ಈರುಳ್ಳಿ ಖರೀದಿ: ವಾರದಲ್ಲಿ ಮೂರು ದಿನ

ಬಾಗಲಕೋಟೆ: ಇಲ್ಲಿನ ಎಪಿಎಂಸಿಯ ತರಕಾರಿ ಮಾರುಕಟ್ಟೆಯಲ್ಲಿ ಅ.12 ರಿಂದ ವಾರದಲ್ಲಿ ಮೂರು ದಿನ ಈರುಳ್ಳಿ ಹರಾಜು ನಡೆಯಲಿದೆ ಎಂದು ಎಪಿಎಂಸಿ ಕಾರ್ಯದರ್ಶಿ ವಿ.ಡಿ. ಪಾಟೀಲ ತಿಳಿಸಿದ್ದಾರೆ. ಇಲ್ಲಿಯವರೆಗೆ ವಾರದಲ್ಲಿ ಎರಡು ದಿನ ಹಾಗೆಯೇ ಖರೀದಿಯು ಮಧ್ಯಾಹ್ನ 3 ಗಂಟೆಯ ನಂತರ ನಡೆಯುತ್ತಿತ್ತು. ಈಗ ಮೂರು ದಿನದ ಜತೆಗೆ ಬೆಳಿಗ್ಗೆ 11ಕ್ಕೆ ಹರಾಜು ಆರಂಭವಾಗಲಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.