ADVERTISEMENT

ಬಾಗಲಕೋಟೆ: ಪೊಲೀಸರ ಹೆಸರಿನಲ್ಲಿ ಸ್ವಾಮೀಜಿಗೆ ₹1 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 11:34 IST
Last Updated 28 ಸೆಪ್ಟೆಂಬರ್ 2024, 11:34 IST
<div class="paragraphs"><p>ಜೆಡಿಎಸ್‌ ಮುಖಂಡ ಪ್ರಕಾಶ ಮುಧೋಳ</p></div>

ಜೆಡಿಎಸ್‌ ಮುಖಂಡ ಪ್ರಕಾಶ ಮುಧೋಳ

   

ಬಾಗಲಕೋಟೆ: ತಾಲ್ಲೂಕಿನ ಗದ್ದನಕೇರಿ ಬಳಿ ಇರುವ ರಾಮಾರೂಢ ಮಠದ ಸ್ವಾಮೀಜಿಗೆ ಉನ್ನತ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ₹1 ಕೋಟಿ ವಂಚನೆ ಮಾಡಲಾಗಿದೆ.

ಜೆಡಿಎಸ್‌ ಮುಖಂಡ ಪ್ರಕಾಶ ಮುಧೋಳ ಎನ್ನುವವರು ಡಿವೈಎಸ್‌ಪಿ ಹೆಸರಿನಲ್ಲಿ, ಇಬ್ಬೊಬ್ಬರು ಎಡಿಜಿಪಿ ಹೆಸರಿನಲ್ಲಿ ರಾಮಾರೂಢ ಮಠದ ಪರಮಹಂಸ ಪರಮರಾಮರೂಢ ಸ್ವಾಮೀಜಿಗೆ ಕರೆ ಮಾಡಿ, ಗೃಹ ಸಚಿವರ ಕಚೇರಿಯಿಂದ ನಮ್ಮ ಕಚೇರಿಗೆ ಸಾಕಷ್ಟು ದೂರುಗಳು ಬಂದಿವೆ. ಅವುಗಳನ್ನು ವಿಚಾರಣೆ ಮಾಡಬೇಕು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ. ಜೈಲಿಗೆ ಕಳುಹಿಸುತ್ತೇವೆ ಎಂದು ಹೆದರಿಸಿದ್ದಾರೆ.

ADVERTISEMENT

ಎಲ್ಲ ಪ್ರಕರಣಗಳನ್ನು ಮುಚ್ಚಿ ಹಾಕಲು ಸಾಹೇಬರಿಗೆ ಹಣ ಕೊಡದಿದ್ದರೆ, ಕೊಲೆ ಮಾಡುವುದಾಗಿ ಬೆದರಿಸಿ ₹1 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಇದರಿಂದ ಬೆದರಿದ ಸ್ವಾಮೀಜಿ ಬೆಂಗಳೂರಿನ ವಿಧಾನಸೌಧದ ಬಳಿ ₹61 ಲಕ್ಷ ಹಾಗೂ ಎರಡು ಖಾಲಿ ಚೆಕ್‌, ಹುಬ್ಬಳ್ಳಿಯ ಈದ್ಗಾ ಮೈದಾನದ ಹತ್ತಿರ ₹31 ಲಕ್ಷ ಹಣವನ್ನು ಶಿವಕುಮಾರ ಮಡ್ಡಿ ಮೂಲಕ ಕೊಡಲಾಗಿದೆ.

₹1 ಕೋಟಿ ಪಡೆದ ನಂತರ ಆರೋಪಿಗಳು ಸ್ವಾಮೀಜಿ ಬಳಿ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಅನುಮಾನಗೊಂಡ ಸ್ವಾಮೀಜಿಗೆ ಮೋಸ ಹೋಗಿದ್ದೇನೆ ಎಂದು ಗೊತ್ತಾಗಿ ಬಾಗಲಕೋಟೆಯ ಸಿಇಎನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮಠಕ್ಕೆ ಪೊಲೀಸರೇ ಹೋಗಿದ್ದರೆ?: ಎಡಿಜಿಪಿ ಎಂದು ಜಿಲ್ಲೆಯ ಪೊಲೀಸ್ ಠಾಣೆಯ ಪಿಎಸ್‌ಐ ಒಬ್ಬರಿಗೆ ಕರೆ ಮಾಡಿ, ರಾಮಾರೂಢ ಮಠಕ್ಕೆ ಹೋಗಿ, ಸ್ವಾಮೀಜಿ ಮಾಹಿತಿ ಹಾಗೂ ಮೊಬೈಲ್‌ ನಂಬರ್ ಸಂಗ್ರಹಿಸಿ ಕೊಡುವಂತೆ ತಿಳಿಸಿದ್ದಾರೆ. ಎಡಿಜಿಪಿ ಅವರೇ ಕರೆ ಮಾಡಿದ್ದಾರೆಂದು ನಂಬಿದ ಪೊಲೀಸರು ಮಠಕ್ಕೆ ತೆರಳಿ ಮಾಹಿತಿ ಹಾಗೂ ನಂಬರ್ ಸಂಗ್ರಹಿಸಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿ ಪ್ರಕಾಶ ಮುಧೋಳ ಅವರನ್ನು ಪೊಲೀಸರು ಬಂಧಿಸಿದ್ದಾರೆ. 

ಜೆಡಿಎಸ್‌ ಮುಖಂಡ: ಆರೋಪಿ ಪ್ರಕಾಶ ಮುಧೋಳ ಜೆಡಿಎಸ್‌ ಮುಖಂಡನಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಸೋತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.