ಮಹಾಲಿಂಗಪುರ: ದುಷ್ಟಶಕ್ತಿಗಳನ್ನು ಹೊಡೆದೋಡಿಸಲು ಪಟ್ಟಣದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿಈಚೆಗೆ ವೈಶಿಷ್ಟ್ಯಪೂರ್ಣ ಪರವು (ಪರ್ವ) ಆಚರಣೆ ಮಾಡಲಾಯಿತು.
ಪವಾಡ ಪುರುಷ ಮಹಾಲಿಂಗೇಶ್ವರರು ಪಟ್ಟಣದ ಎಂಟು ದಿಕ್ಕಿಗೆ ಅಷ್ಟ ಲಿಂಗ ಮುದ್ರೆಗಳನ್ನು ಸ್ಥಾಪಿಸಿದ್ದಾರೆ. ಇವತ್ತಿಗೂ ಈ ಅಷ್ಟಲಿಂಗ ಮುದ್ರೆಗಳು ದುಷ್ಟಶಕ್ತಿಗಳಿಂದ ಪಟ್ಟಣವನ್ನು ಕಾಪಾಡುತ್ತವೆ ಎಂಬ ಪ್ರತೀತಿ ಇಲ್ಲಿದೆ. ಈ ಮುದ್ರೆಗಳಿಗೆ ಪ್ರತಿ ವರ್ಷ ಕಾರಹುಣ್ಣಿಮೆ ಮುನ್ನ ಬರುವ ಗುರುವಾರ ನೈವೇದ್ಯ ಮಾಡಿ ಪರವು ಆಚರಣೆ ಮಾಡುವ ಪರಂಪರೆ ಇಲ್ಲಿದೆ.
ಭಕ್ತರಿಂದ ಸಂಗ್ರಹಿಸಿದ ನವಧಾನ್ಯಗಳಿಂದ ತಯಾರಿಸಿದ ಪ್ರಸಾದಕ್ಕೆ ಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪೂಜೆ ನೆರವೇರಿಸಿದರು. ಪ್ರಸಾದದ ಒಂದು ಬುಟ್ಟಿಯನ್ನು ಭಕ್ತರೊಬ್ಬರ ತಲೆ ಮೇಲೆ ಇಟ್ಟು ಚಾಲನೆ ನೀಡಲಾಯಿತು.
ನಂತರ ಪ್ರಸಾದವನ್ನು ಅಷ್ಟಲಿಂಗ ಮುದ್ರೆಗಳಿಗೆ ನೈವೇದ್ಯ ಮಾಡಿ ದುಷ್ಟಶಕ್ತಿಗಳಿಂದ ಪಟ್ಟಣವನ್ನು ಕಾಪಾಡುವಂತೆ ಭಕ್ತರು ಬೇಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.