ADVERTISEMENT

ಬಾಗಲಕೋಟೆ | ಸತತ ಮಳೆ: ನೀರು ಪಾಲಾದ ಬೆಳೆ

ಮುಂಗಾರಿನಲ್ಲಿ ಕಾಡಿದ್ದ ಪ್ರವಾಹ ಹಿಂಗಾರಿಗೂ ಕಾಡುತಿದೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 6:47 IST
Last Updated 21 ಅಕ್ಟೋಬರ್ 2024, 6:47 IST
ರಾಂಪುರ ಸಮೀಪದ ಬೆನಕಟ್ಟಿ ಗ್ರಾಮದ ಹೊಲದಲ್ಲಿ ಕಿತ್ತು ಹಾಕಿದ್ದ ಈರುಳ್ಳಿ ಬೆಳೆ ಧಾರಾಕಾರ ಮಳೆಗೆ ನೀರಿನಲ್ಲಿ ಮುಳುಗಿರುವುದು
ರಾಂಪುರ ಸಮೀಪದ ಬೆನಕಟ್ಟಿ ಗ್ರಾಮದ ಹೊಲದಲ್ಲಿ ಕಿತ್ತು ಹಾಕಿದ್ದ ಈರುಳ್ಳಿ ಬೆಳೆ ಧಾರಾಕಾರ ಮಳೆಗೆ ನೀರಿನಲ್ಲಿ ಮುಳುಗಿರುವುದು    

ಬಾಗಲಕೋಟೆ: ಮುಂಗಾರಿಗೆ ಕಾಡಿದ್ದ ಪ್ರವಾಹ, ಮಳೆಯು ಹಿಂಗಾರಿನಲ್ಲಿಯೂ ಕಾಡುತ್ತಿದೆ. ಬೆಳೆದು ನಿಂತಿದ್ದ ಬೆಳೆಯು ನೀರು ಪಾಲಾಗಿದೆ. ಮತ್ತೆ ಆರ್ಥಿಕ ಸಂಕಷ್ಟ ಎದುರಾಗಿದೆ.

ಮುಂಗಾರಿನಲ್ಲಿ ಮಳೆ ಹೆಚ್ಚಾಗಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳಲ್ಲಿ ಪ್ರವಾಹ ಬಂದಿದ್ದರಿಂದ ಕಬ್ಬು, ಜೋಳ ಸೇರಿದಂತೆ ವಿವಿಧ ಬೆಳೆಗಳು ಹಾನಿಗೆ ಒಳಗಾಗಿದ್ದವು. ಹಿಂಗಾರಿನಲ್ಲಿ ಮಳೆಯಾಗಿ ಮಲಪ್ರಭಾ ನದಿಯಲ್ಲದೆ, ವಿವಿಧೆಡೆ ಹೊಲಗಳಲ್ಲಿ ನೀರು ನಿಂತಿದೆ. ಕಿತ್ತು ಹಾಕಿದ್ದ ಈರುಳ್ಳಿ ನೀರಿನಲ್ಲಿ ಕೊಳೆಯುತ್ತಿದೆ.

ತೊಗರಿ ಬೆಳೆ ಹೂವಾಗಿ ಕಾಯಿ ಕಟ್ಟುವ ಹಂತದಲ್ಲಿದೆ. ಸತತ ಮಳೆಯಿಂದಾಗಿ ಹೂವು ಉದುರ ತೊಡಗಿದೆ. ಗುಡುಗು, ಸಿಡಿಲು ಸಹಿತ ಮಳೆಯಾಗುತ್ತಿದ್ದು, ಇನ್ನಷ್ಟು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ಹೇಳಿರುವುದು ರೈತರ ಚಿಂತೆ ಹೆಚ್ಚಿಸಿದೆ.

ADVERTISEMENT

ಜೋಳ, ಕಡಲೆ ಬಿತ್ತನೆ ಕಾರ್ಯ ಭರದಿಂದ ನಡೆದಿತ್ತು. ಮಳೆಯಿಂದಾಗಿ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿದೆ. ಈ ವಾರದಲ್ಲಿ ಜೋಳ ಬಿತ್ತನೆ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಬಿತ್ತನೆ ಕಷ್ಟ. ಹಿಂಗಾರು ಹಂಗಾಮಿಗೆ ಶೇ 30ರಷ್ಟು ಮಾತ್ರ ಬಿತ್ತನೆಯಾಗಿದೆ.

ಈರುಳ್ಳಿ, ತೊಗರಿಗೆ ಬೆಳೆಗೆ ಹಾನಿ

ಹುನಗುಂದ: ಹುನಗುಂದ ಮತ್ತು ಇಳಕಲ್ ತಾಲ್ಲೂಕುಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೆಳೆಗಳು ನೆಲ ಕಚ್ಚಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

ಹುನಗುಂದ ತಾಲ್ಲೂಕಿನಲ್ಲಿ ತೊಗರಿ 16,685 ಹೆಕ್ಟೇರ್, ಈರುಳ್ಳಿ 3,304 ಹೆಕ್ಟೇರ್, ಮೆಣಸಿನಕಾಯಿ 855 ಹೆಕ್ಟೇರ್ ಹಾಗೂ ಇಳಕಲ್ ತಾಲ್ಲೂಕಿನಲ್ಲಿ ತೊಗರಿ 17,636 ಹೆಕ್ಟೇರ್, ಈರುಳ್ಳಿ 1,555 ಹೆಕ್ಟೇರ್, ಮೆಣಸಿನಕಾಯಿ 855 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ಪ್ರಮುಖವಾಗಿ ಉಭಯ ತಾಲ್ಲೂಕುಗಳಲ್ಲಿ ಮುಂಗಾರು ಹಂಗಾಮಿನಲ್ಲಿ ತೊಗರಿ ಬೆಳೆಯನ್ನು ದಾಖಲೆ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ. ಈಗ ಬಹುತೇಕ ತೊಗರಿ ಬೆಳೆ ಹೂ ಬಿಡುವ ಮತ್ತು ಕಾಯಿ ಕಟ್ಟುವ ಹಂತ. ಇಂತಹ ಸಮಯದಲ್ಲಿ ನಿರಂತರ ಮಳೆ, ಹವಾಮಾನ ವೈಪರೀತ್ಯದಿಂದಾಗಿ ತೊಗರಿ ಗಿಡದಲ್ಲಿನ ಹೆಚ್ಚಿನ ಪ್ರಮಾಣದ ಹೂವುಗಳು ಉದುರಿವೆ. ಮಳೆಯಿಂದಾಗಿ ಬೆಳೆಗೆ ಔಷಧ ಸಿಂಪಡಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತೊಗರಿ ಬೆಳೆ ಇಳುವರಿ ಕಡಿಮೆ ಆಗುತ್ತದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಮಳೆ ಆಶ್ರಿತ ಮತ್ತು ನೀರಾವರಿ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಬೆಳೆಗೆ ಮಳೆಯಿಂದ ಹೆಚ್ಚಿನ ಹಾನಿ ಉಂಟಾಗಿದೆ. ಬಹುತೇಕ ಈರುಳ್ಳಿ ಕಟಾವಿಗೆ ಬಂದಿತ್ತು. ಈಗ ನಿರಂತರ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಭೂಮಿಯಲ್ಲಿನ ಈರುಳ್ಳಿ ಹಾಗೂ ಕಿತ್ತು ಹಾಕಿದ ಈರುಳ್ಳಿ ಬೆಳೆ ಹಾಳಾಗಿದೆ. ಈ ಬಾರಿ ಉತ್ತಮ ಬೆಲೆ ಇತ್ತು. ರೈತರು ಸಹ ನಮ್ಮ ಬೆಳೆಗೆ ಉತ್ತಮ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಮಳೆ ರೈತರಿಗೆ ಬರಸಿಡಿಲು ಬಡಿದಂತಾಗಿದೆ. ಬೆಳೆಗೆ ಖರ್ಚು ಮಾಡಿದ ಹಣ ಬಂದರೆ ಸಾಕು ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ರೈತರು.

ಕಳೆದ ವರ್ಷ ಬರಗಾಲದಿಂದ ಕಂಗೆಟ್ಟಿದ್ದ ರೈತರಿಗೆ ಈಗ ಹವಾಮಾನ ವೈಪರೀತ್ಯ ಜೊತೆಗೆ ನಿರಂತರ ಮಳೆಯಿಂದ ಮೆಣಸಿನಕಾಯಿ ಬೆಳೆ ಹೂವುಗಳು ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತಿದ್ದು, ಇಳುವರಿ ಮೇಲೆ ಪರಿಣಾಮ ಬೀರಿದ್ದು, ಮುಂದೆ ಏನಾಗುವುದೋ  ಎಂದು ಮೆಣಸಿನಕಾಯಿ ಬೆಳೆದ ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ನಿರಂತರ ಮಳೆಯಿಂದ ರಾಶಿ ಮಾಡಿದ ಗೋವಿನ ಜೋಳವನ್ನು ಒಣಗಿಸಲು ಸಾಧ್ಯಾವಾಗುತ್ತಿಲ್ಲ ಎಂದು ಐಹೊಳೆ ಗ್ರಾಮದ ರೈತ ಪರಸಪ್ಪ ಅಳಲು ತೋಡಿಕೊಂಡರು.

ಪ್ರಜಾವಾಣಿ ತಂಡ: ಬಸವರಾಜ ಹವಾಲ್ದಾರ, ಎಸ್‌.ಎಂ. ಹಿರೇಮಠ, ಪ್ರಕಾಶ ಬಾಳಕ್ಕನವರ, ಸಂಗಮೇಶ ಹೂಗಾರ

ಹುನಗುಂದ ತಾಲ್ಲೂಕಿನ ನಾಗೂರು ಗ್ರಾಮದ ಹೊಲದಲ್ಲಿನ ಈರುಳ್ಳಿ ಬೆಳೆ ನಿರಂತರ ಮಳೆಯಿಂದ ಹಳದಿ ಬಣ್ಣಕ್ಕೆ ತಿರುಗಿರುವುದು
ಬಾದಾಮಿ ಸಮೀಪದ ಮುಮರಡ್ಡಿಕೊಪ್ಪ ಗ್ರಾಮದ ಮಲಪ್ರಭಾ ನದಿ ದಂಡೆಯ ಹೊಲಗಳಿಗೆ ನದಿ ನೀರು ನುಗ್ಗಿ ಬೆಳೆಯೆಲ್ಲ ಜಲವೃತವಾಗಿರುವುದು
ನೀರಲ್ಲಿ ನಿಂತಿರುವ ಈರುಳ್ಳಿ ಬೆಳೆ
ಈ ಬಾರಿ ತೊಗರಿ ಬೆಳೆ ಉತ್ತಮ ಇಳುವರಿ ಬರುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ ನಾಲ್ಕೈದು ದಿನಗಳಿಂದ ಸುರಿದ ಮಳೆಗೆ ತೊಗರಿ ಬೆಳೆ ನೆಲಕಚ್ಚಿದೆ. ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು.
– ಮಹಾಂತೇಶ ಗುಡದಪ್ಪನವರ ರೈತ ಚಿತ್ತವಾಡಗಿ
ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳ ಹಾನಿಯ ಸಮೀಕ್ಷೆ ನಡೆದಿದೆ. ಕೆಲವು ಕಡೆಗಳಲ್ಲಿ ಈರುಳ್ಳಿ ಬೆಳೆ ಹಾನಿ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ
ರವೀಂದ್ರ ಹಕಾಟೆ ಉಪನಿರ್ದೇಶಕ ತೋಟಗಾರಿಕೆ ಇಲಾಖೆ
ನದಿ ದಂಡೆಯ ರೈತರಿಗೆ ಶಾಪವಾದ ಪ್ರವಾಹ
ಬಾದಾಮಿ: ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ಪಕ್ಕದ ಗ್ರಾಮಗಳ ರೈತರಿಗೆ ಪ್ರತಿ ವರ್ಷ ಏನಾದರೊಂದು ಸಮಸ್ಯೆ ಕಾದಿರುತ್ತದೆ. ನದಿ ಬತ್ತಿ ಮಳೆಯಾಗದೇ ಬರ ಇಲ್ಲವೇ ಪ್ರವಾಹದಿಂದ ಬೆಳೆ ಹಾನಿಯಾಗುತ್ತದೆ. ನದಿ ದಂಡೆಯಲ್ಲಿ ಕಪ್ಪು ಮತ್ತು ಕೆಂಪು ಮಣ್ಣಿನ ಫಲವತ್ತಾದ ಜಮೀನುಗಳಿವೆ. ರೈತರು ಎರಡು ಬೆಳೆಯನ್ನು ತೆಗೆಯಬಹುದಾಗಿದ್ದು ಬಿತ್ತನೆ ಮಾಡಿ ಬೆಳೆದ ಬೆಳೆಯು ಇನ್ನೇನು ಕೈಗೆ ಬರುತ್ತದೆ ಎನ್ನುವಾಗಲೇ ಪ್ರವಾಹ ಬಂದು ರೈತರ ಶ್ರಮವು ನೀರಿನಲ್ಲಿ ಕೊಚ್ಚಿ ಹೋಗುತ್ತದೆ. ‘ಈ ಬಾರಿ ಎರಡೂ ಸಲ ಪ್ರವಾಹ ಬಂದು ಬೆಳೆಯೆಲ್ಲ ಹಾನಿಯಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಆಗಸ್ಟ್ ಮತ್ತು ಅಕ್ಟೋಬರ್ ಎರಡನೇ ವಾರದಲ್ಲಿ ನದಿಗೆ ಬೆಣ್ಣೆಹಳ್ಳದ ಮತ್ತು ನವಿಲುತೀರ್ಥ ಜಲಾಶಯದಿಂದ ಬಿಟ್ಟ ಹೆಚ್ಚುವರಿ ನೀರಿನಿಂದ ಕಬ್ಬು ಮೆಕ್ಕೆಜೋಳ ಹೆಸರು ಹತ್ತಿ ಶೇಂಗಾ ಮತ್ತು ತೊಗರಿ ಬೆಳೆಗಳೆಲ್ಲ ಹಾನಿಯಾಗಿವೆ ’ ಎಂದು ಮುರಡ್ಡಿಕೊಪ್ಪ ಗ್ರಾಮದ ರೈತ ವೀರಭದ್ರಯ್ಯ ಹೇಳಿದರು. ‘ ಕಂದಾಯ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸರ್ವೇ ಪ್ರಕಾರ ಆಗಸ್ಟ್ ತಿಂಗಳ ಪ್ರವಾಹದಿಂದ ನದಿ ದಂಡೆಯಲ್ಲಿ ಅಂದಾಜು 1540 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಪ್ರವಾಹದಿಂದ ಅಂದಾಜು 500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಪ್ರವಾಹ ಕಡಿಮೆಯಾದ ನಂತರ ಜಂಟಿಯಾಗಿ ಸರ್ವೇ ಕಾರ್ಯ ಆರಂಭಿಸಲಾಗುವುದು ’ ಎಂದು ತಹಶೀಲ್ದಾರ್ ಮಧುರಾಜ ಮತ್ತು ಸಹಾಯಕ ಕೃಷಿ ನಿರ್ದೇಶಕ ಅಶೋಕ ತಿರಕನ್ನವರ ತಿಳಿಸಿದರು.
ನೀರಿನಲ್ಲಿ ನಿಂತಿರುವ ಈರುಳ್ಳಿ
ರಾಂಪುರ:ವಾರದಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಕ್ಕಿಂತ ಬೆಳೆಗಳು ನೀರಲ್ಲಿ ನಿಂತು ಕೊಳೆಯುವ ಭೀತಿ ಎದುರಾಗಿರುವುದು ರೈತರನ್ನು ಚಿಂತಾಕ್ರಾಂತರನ್ನಾಗಿಸಿದೆ. ಬಾಗಲಕೋಟೆ ತಾಲ್ಲೂಕಿನ ಶಿರೂರ ಹಾಗೂ ರಾಂಪುರ ಹೋಬಳಿಯಲ್ಲಂತೂ ಮಂಗಳವಾರದಿಂದಲೇ ಧಾರಾಕಾರ ಮಳೆ ಸುರಿದು ಅನೇಕ ಗ್ರಾಮಗಳ ಜಮೀನುಗಳು ಸಂಪೂರ್ಣ ನೀರಲ್ಲಿ ಮುಳುಗಿದ್ದು ಕೊಯ್ಲಿಗೆ ಬಂದಿರುವ ಸಜ್ಜೆ ಗೋವಿನಜೋಳ ಈರುಳ್ಳಿ ಬೆಳೆಗಳು ನೀರಲ್ಲಿ ನಿಂತಿವೆ. ಈರುಳ್ಳಿಗೆ ಉತ್ತಮ ಬೆಲೆ ಸಿಗುತ್ತಿದೆ. ಈರುಳ್ಳಿಯನ್ನು ಕೊಯ್ಲು ಮಾಡಬೇಕೆಂದು ಹಂಬಲಿಸುತ್ತಿದ್ದರೆ ಮಳೆ ನಿತ್ಯ ಸುರಿಯುತ್ತಿರುವುದರಿಂದ ರೈತರ ಆಸೆಗೆ ತಣ್ಣೀರೆರಚುತ್ತಿದೆ. ಕಿತ್ತು ಹಾಕಿರುವ ಈರುಳ್ಳಿ ಬೆಳೆ ಸಹ ನೀರಲ್ಲಿ ನಿಂತು ಕೊಳೆಯುತ್ತಿದೆ. ಮನ್ನಿಕಟ್ಟಿ ಕಿರಸೂರ ಭಗವತಿ ಹಳ್ಳೂರು ಬೆನಕಟ್ಟಿ ಶಿರೂರ ಗ್ರಾಮಗಳ ರೈತರು ಈ ಬಾರಿ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದು ಒಳ್ಳೆಯ ಬೆಲೆ ಸಿಗುತ್ತಿರುವುದಕ್ಕೆ ಸಂತಸಪಟ್ಟಿದ್ದರು. ಆದರೆ ಮಳೆ ರೈತರ ಸಂತಸಕ್ಕೆ ಬ್ರೆಕ್ ಹಾಕಿ ಆತಂಕ ಸೃಷ್ಠಿಸಿದೆ. ಸಧ್ಯಕ್ಕೆ ಮಳೆ ನಿಲ್ಲಬೇಕೆನ್ನುವ ಪ್ರಾರ್ಥನೆ ರೈತರದ್ದಾಗಿದೆ. ಇನ್ನಷ್ಟು ಆತಂಕ: ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಅ.23 ರವರೆಗೂ ಮಳೆ ಆಗಲಿದೆ ಎಂದು ಮುನ್ಸೂಚನೆ ನೀಡಿದ್ದು ಇದು ರೈತರನ್ನು ಇನ್ನಷ್ಟು ಆತಂಕಗೊಳಿಸಿದೆ. ಹವಾಮಾನ ಇಲಾಖೆಯು ಅ.19 20 ರಂದು 10 ಮಿ.ಮೀ. ಮಳೆಯಾಗುವ ಮುನ್ಸೂಚನೆ ನೀಡಿದೆ. ನಂತರದ ಮೂರು ದಿನ 8 ಮಿ.ಮೀ. ಮಳೆಯಾಗುವ ನಿರೀಕ್ಷೆ ಇರುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುವ ಲಕ್ಷಣಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.