ಬಾಗಲಕೋಟೆ: ವಾಣಿಜ್ಯ ಚಟುವಟಿಕೆಗಾಗಿ ಯುನಿಟ್ 3ರಲ್ಲಿ 200 ಎಕರೆ ಭೂಮಿಯನ್ನು ಕಾಯ್ದಿರಿಸಬೇಕು ಎಂದು ಫೆಡರೇಷನ್ ಆಫ್ ಬಾಗಲಕೋಟೆ ಮರ್ಚಂಟ್ಸ್ ಅಸೋಸಿಯೇಷನ್ಸ್ ಸದಸ್ಯರು ಶನಿವಾರ ಬಿಟಿಡಿಎ ಅಧ್ಯಕ್ಷ ಎಚ್.ವೈ. ಮೇಟಿ ಅವರಿಗೆ ಮನವಿ ಸಲ್ಲಿಸಿದರು.
ರೈಲ್ವೆ ಸ್ಟೇಷನ್ನಿಂದ ಎಪಿಎಂಸಿ ಕ್ರಾಸ್ವರೆಗೆ, ರೋಟರಿ ಸರ್ಕಲ್ನಿಂದ ಮಹಾರಾಜ್ ಗಾರ್ಡನ್ವರೆಗೆ ವಾಣಿಜ್ಯ ಚಟುವಟಿಕೆಗಾಗಿ ಮೀಸಲಿರುವುದಲ್ಲದೆ, ಅಭಿವೃದ್ಧಿಗೊಳಿಸಬೇಕು ಎಂದು ಆಗ್ರಹಿಸಿದರು.
ಮಾಹಿತಿ ತಂತ್ರಜ್ಞಾನ, ಸಗಟು, ಗೃಹ ಉದ್ಯಮ, ಉತ್ಪಾದನೆ, ಚಿಲ್ಲರೆ ವ್ಯಾಪಾರ, ಜವಳಿ ಇತ್ಯಾದಿ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬೇಕು. ಮೂಲ ಸೌಕರ್ಯ ಒದಗಿಸಬೇಕು. ಪರಿಸರ ಸ್ನೇಹಿ ಸುಸ್ಥಿರ ವ್ಯವಹಾರಗಳಿಗೆ ತೆರಿಗೆ ವಿನಾಯಿತಿ ನೀಡಬೇಕು. ಪಾರದರ್ಶಕವಾಗಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಬಾಗಲಕೋಟೆ ಮುಳುಗಡೆಯಾದ ಮೇಲೆ ವ್ಯಾಪಾರಕ್ಕೆ ಹೊಡೆತ ಬಿದ್ದಿದ್ದು, ವಾಣಿಜ್ಯ ಚಟುವಟಿಕೆಗಳು ಮಂದಗತಿಯಲ್ಲಿ ನಡೆದಿವೆ. ವ್ಯಾಪಾರಕ್ಕೆ ಉತ್ತೇಜನ ನೀಡುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಾಣಿಜ್ಯ ಚಟುವಟಿಕೆ ಕುಂಠಿತಗೊಂಡಿರುವುದರಿಂದ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವ್ಯಾಪಾರಸ್ಥರ ಜೀವನವನ್ನು ಪುನರುಜ್ಜೀವನಗೊಳಿಸಬೇಕು. ವ್ಯಾಪಾರ ಉಳಿಸಿ, ವ್ಯಾಪಾರಸ್ಥರ ಕುಟುಂಬಗಳನ್ನು ರಕ್ಷಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವಿ ಸಲ್ಲಿಸಿದ್ದಾರೆ.
ಪ್ರಕಾಶ ತಪಶೆಟ್ಟಿ, ರವಿ ಕುಮಟಗಿ, ಶ್ರೀನಿವಾಸ ಬಳ್ಳಾರಿ, ಶೇಖರ ಮಾನೆ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.