ADVERTISEMENT

ಜಮಖಂಡಿ | ಪೊಲೀಸರಿಂದ ತಾರತಮ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 16:20 IST
Last Updated 30 ಜೂನ್ 2024, 16:20 IST

ಜಮಖಂಡಿ: ತಾಲ್ಲೂಕು ಒಕ್ಕುಲತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಚುನಾವಣೆ ಇಲ್ಲಿಯ ಗಿರೀಶ ನಗರದ ಶಾಲೆಯಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಪಕ್ಷಪಾತ ತೋರಲಾಗಿದೆ ಎಂದು ಬಿಜೆಪಿ ಪ್ರಕಟಣೆಯ ಮೂಲಕ ಆರೋಪಿಸಿದೆ.

‘ಚುನಾವಣೆಯಲ್ಲಿ ಮತಗಟ್ಟೆಗೆ ಮತದಾರರನ್ನು ಕಾರ್ಯಕರ್ತರು ಕರೆತರುವಾಗ ಕಾಂಗ್ರೆಸ್‌ನವರಿಗೆ ಒಂದು ರೀತಿ ಬಿಜೆಪಿ ಕಾರ್ಯಕರ್ತರಿಗೆ ಮತ್ತೊಂದ ರೀತಿ ನಡೆದುಕೊಂಡಿದ್ದ ನೋವಿನ ಸಂಗತಿ. ಸಿಪಿಐ ಮಲ್ಲಪ್ಪ ಮಡ್ಡಿ ಕಾಂಗ್ರೆಸ್‌ ಏಜೆಂಟರಂತೆ ವರ್ತಿಸಿ, ಬಿಜೆಪಿ ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಪ್ರಕಾಶ ಕಾಳೆ ಅವರನ್ನು ಆವಾಚ್ಯ ಶಬ್ದಗಳಿಂದ ನಿಂದಿಸಿ ಕೊರಳಪಟ್ಟಿ ಹಿಡಿದು ಸಾರ್ವಜನಿಕರೆದುರು ಎಳೆದಾಡಿರುವುದು ಖಂಡನಿಯ’ ಎಂದು ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ, ಗ್ರಾಮೀಣ ಮಂಡಲ ಅಧ್ಯಕ್ಷ ಅರವಿಂದಗೌಡ ಪಾಟೀಲ ತಿಳಿಸಿದ್ದಾರೆ.

‘ಪೊಲೀಸ್ ಸಿಬ್ಬಂದಿಗಳಾದ ಭೀಮಸಿ ಮದರಖಂಡಿ, ಸಿದ್ದು ಕಲಾಟೆ ಇವರು ಬಿಜೆಪಿ ಮುಖಂಡ ಸುರೇಶಗೌಡ ಪಾಟೀಲ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪಕ್ಷಪಾತ ಹಾಗೂ ಜನ ವಿರೋಧಿ ನೀತಿಯನ್ನು ಬಿಜೆಪಿ ಖಂಡಿಸುತ್ತದೆ. ಇಂಥ ಜನ ವಿರೋಧಿ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಚುನಾವಣೆಯಲ್ಲಿ ನಾವು, ನಮ್ಮ ಸಿಬ್ಬಂದಿ ಸೇರಿ ನಿಷ್ಪಕ್ಷಪಾತವಾಗಿ ಕೆಲಸ  ಮಾಡಿದ್ದೆವೆ. ಯಾವ ವ್ಯಕ್ತಿ, ಪಕ್ಷ ನಮಗೆ ಸಂಬಂಧ ಇಲ್ಲ, ಎಲ್ಲರೂ ನಮಗೆ ಒಂದೇ’ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.