ADVERTISEMENT

ಸಂಶೋಧನೆಗೆ ಒತ್ತು ನೀಡಿ: ಗುಪ್ತಾ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 14:28 IST
Last Updated 4 ಅಕ್ಟೋಬರ್ 2024, 14:28 IST
ಬಾಗಲಕೋಟೆ ಎಸ್.ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನಲ್ಲಿ  ಹಾನಗಲ್ ಕುಮಾರೇಶ್ವರ ಔಷಧ ವಿಜ್ಞಾನ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ನಡೆಯಿತು
ಬಾಗಲಕೋಟೆ ಎಸ್.ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನಲ್ಲಿ  ಹಾನಗಲ್ ಕುಮಾರೇಶ್ವರ ಔಷಧ ವಿಜ್ಞಾನ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ನಡೆಯಿತು   

ಬಾಗಲಕೋಟೆ: ‘ಕೊರೊನಾ ಸಮಯದಲ್ಲಿ ಭಾರತದ ಲಸಿಕೆ ಜಗತ್ತಿಗೆ ಜೀವರಕ್ಷಕವಾಗಿದ್ದು, ಭಾರತದ ಹೆಮ್ಮೆಯಾಗಿದೆ. ಔಷಧ ತಂತ್ರಜ್ಞಾನದಲ್ಲಿ ಅವಕಾಶಗಳಿದ್ದು, ಸಂಶೋಧನೆಗೆ ಒತ್ತು ನೀಡಬೇಕು’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಲಹೆಗಾರ ಡಾ. ಉಮೇಶದತ್ತ ಗುಪ್ತಾ ಹೇಳಿದರು.

ಎಸ್.ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನ ಶತಾಬ್ಧಿ ಭವನದಲ್ಲಿ ಗುರವಾರ ಆಯೋಜಿಸಿದ್ದ ಹಾನಗಲ್ ಕುಮಾರೇಶ್ವರ ಔಷಧ ವಿಜ್ಞಾನ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ‘ಔಷಧ ತಂತ್ರಜ್ಷಾನ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ, ಪದವಿ ನಂತರವೂ ಸಂಶೋಧನೆ ನಿರಂತರವಾಗಿರಲಿ. ಮುಂದಿನ ಪೀಳಿಗೆ ಆರೋಗ್ಯದ ರಕ್ಷಣೆ ನಮ್ಮೆಲ್ಲರ ಮೇಲಿದೆ’ ಎಂದರು

ಪುಣೆಯ ಬಿ.ವಿ.ಜಿ ಲೈಫ್ ಸೈನ್ಸ್ ಲಿಮಿಟೆಡ್‍ನ ನಿರ್ದೇಶಕ ಪವನಕುಮಾರ ಸಿಂಗ್ ಮಾತನಾಡಿ, ‘ಔಷಧ ಕಂಪನಿಗಳನ್ನು ಸ್ಥಾಪಿಸಲು ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳಿವೆ. ನಮ್ಮ ಕ್ಷೇತ್ರದ ಸಂಪೂರ್ಣ ಜ್ಞಾನ ಮುಖ್ಯ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಮಾತನಾಡಿ, ‘ಪದವೀಧರರಾಗಲು ವಿದ್ಯಾರ್ಥಿಗಳಲ್ಲಿ ಸಮರ್ಪಣೆ, ಪರಿಶ್ರಮ ಮತ್ತು ಬದ್ಧತೆ ಅಗತ್ಯವಿದೆ. ಸಂಶೋಧನೆಗೂ ಆದ್ಯತೆ ನೀಡಲಾಗಿದ್ದು ₹3 ಕೋಟಿ ವೆಚ್ಚದಲ್ಲಿ ಪ್ರಯೋಗಾಲಯ ಸ್ಥಾಪಿಸಲಾಗಿದೆ’ ಎಂದು ಹೇಳಿದರು.

ಹಾನಗಲ್‌ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಉಪಸ್ಥಿತರಿದ್ದರು. 
ಇದೇ ಸಂದರ್ಭದಲ್ಲಿ ಬಿ.ವಿ.ವಿ.ಎಸ್ ರಿಸರ್ಚ್ ಸೆಂಟರ್ ಮತ್ತು ಬಿ.ವಿ.ಜಿ ಲೈಫ್ ಸೈನ್ಸ್ ಲಿಮಿಟೆಡ್ ನಡುವೆ  ತಂತ್ರಜ್ಞಾನ ವರ್ಗಾವಣೆ ಹಾಗೂ ಜಂಟಿ ಪೇಟೆಂಟ್ ಯೋಜನೆಗೆ ಒಪ್ಪಂದ ಮಾಡಿಕೊಳ್ಳಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.