ತೇರದಾಳ: ದೇಶವಾಸಿಗಳ ತಲಾ ಆದಾಯ ಹೆಚ್ಚಾದಂತೆ ದೇಶದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹಾಗಾಗಿ ಪ್ರತಿಯೊಬ್ಬರೂ ದೇಶದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಸಾಮಾನ್ಯ ಜ್ಞಾನವಾದರೂ ಹೊಂದಿರಬೇಕು’ ಎಂದು ತೇರದಾಳದ ಎಸ್ಡಿಎಂ ಟ್ರಸ್ಟ್ನ ಅಧ್ಯಕ್ಷ ಡಾ.ಎಂ.ಎಸ್. ದಾನಿಗೊಂಡ ಹೇಳಿದರು.
ಎಸ್ಡಿಎಂ ಸಂಸ್ಥೆಯ ದಾನಿಗೊಂಡ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಚಾರ್ಟರ್ಡ್ ಅಕೌಂಟಂಟ್, ಕಾರ್ಯದರ್ಶಿ ಪದವಿಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ವಾಣಿಜ್ಯ ವಿಭಾಗದಲ್ಲಿ ಪಿಯು ಓದುವಾಗಲೇ ಲೆಕ್ಕ ಪರಿಶೋಧನೆ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಈ ವೃತ್ತಿಗೆ ಇಂದು ಜಾಗತಿಕ ಮಟ್ಟದಲ್ಲಿ ಒಳ್ಳೆಯ ಬೇಡಿಕೆಯಿದೆ. ವಾಣಿಜ್ಯ ಪದವಿ ಬಳಿಕ ವಿಪುಲ ಉದ್ಯೋಗಾವಕಾಶಗಳಿವೆ. ನಮ್ಮ ಭಾಗದಲ್ಲೂ ಅನೇಕ ಪ್ರತಿಭಾವಂತರಿದ್ದು, ಅವರಿಗೆ ಈ ವೃತ್ತಿಗೆ ಬೇಕಾದ ಅರ್ಹತೆ, ಮಹತ್ವ ಮತ್ತು ಸಾಧನೆಗೆ ಬೇಕಾದ ನೈಪುಣ್ಯದ ಬಗ್ಗೆ ತಜ್ಞರು ತಿಳಿವಳಿಕೆ ಮತ್ತು ಮಾರ್ಗದರ್ಶನ ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಲಿ’ ಎಂದರು.
ಧಾರವಾಡದ ಲೆಕ್ಕಪರಿಶೋಧಕರಾದ ವಿಠ್ಠಲ ಗುತ್ತಿ ಮಾತನಾಡಿ, ‘ಲೆಕ್ಕಪರಿಶೋಧಕನ ಸಹಿಗೆ ಇದ್ದ ಬೆಲೆ ಒಬ್ಬ ರಾಷ್ಟ್ರಪತಿ ಸಹಿಗಿಂತ ಹೆಚ್ಚು ಎಂಬ ದೇಶದ ಪ್ರಧಾನಮಂತ್ರಿಯವರ ಮಾತಿನಲ್ಲೇ ಈ ಕೆಲಸದ ಮಹತ್ವ ಹೇಳಿದಂತಾಗಿದೆ. ದೇಶ ಆರ್ಥಿಕತೆಯಲ್ಲಿ ಪ್ರಗತಿ ಹೊಂದಬೇಕಾದರೆ ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲೆಕ್ಕಪರಿಶೋಧಕರು ಮೂಡಿ ಬರಬೇಕಿದೆ’ ಎಂದು ಹೇಳಿದರು.
ವಾಣಿಜ್ಯ ವಿಭಾಗದಲ್ಲಿ ಇರುವಂತಹ ಉದ್ಯೋಗ ಅವಕಾಶಗಳ ಬಗ್ಗೆ ದೀಪಾ ತಳವಾರ ವಿವರಿಸಿದರು. ಕಾಲೇಜು ಪ್ರಾಚಾರ್ಯ ಸಂತೋಷ ಕೃಷ್ಣಾಪುರ ಇದ್ದರು. ವಿಠ್ಠಲ ಮುರಾರಿ, ಬಿ.ಎಸ್. ನೇಗಿನಾಳ, ಅಮೋಘ ಕಂಕಣವಾಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.