ಮಹಾಲಿಂಗಪುರ (ಬಾಗಲಕೋಟೆ ಜಿಲ್ಲೆ): ‘ಭ್ರೂಣಹತ್ಯೆ ಪ್ರಕರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸೂಕ್ತ ಕ್ರಮ ಕೈಗೊಂಡಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ನ್ಯಾ. ಎಸ್.ಕೆ. ಒಂಟಗೋಡಿ ಹೇಳಿದರು.
ಭ್ರೂಣಹತ್ಯೆ ಆರೋಪದಡಿ ಬಂಧಿಸಲ್ಪಟ್ಟ ಕವಿತಾ ಬಾಡನವರ ಮನೆಗೆ ಸೋಮವಾರ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ‘ತನಿಖೆ ನಡೆಸಿ, ದೋಷಾರೋಪ ಪಟ್ಟಿ ಸಲ್ಲಿಸಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಘಟನೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಆಯೋಗದಿಂದಲೂ ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ಭ್ರೂಣಹತ್ಯೆ ನಡೆದಿರುವ ಮನೆಯನ್ನು ಮಹಜರು ಮಾಡಿ, ಆರೋಗ್ಯ ಅಧಿಕಾರಿಗಳು ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ. 2022ರಲ್ಲಿ ಮುಖ್ಯದ್ವಾರವನ್ನು ಬಂದ್ ಮಾಡಲಾಗಿತ್ತು. ಆದರೆ, ಮನೆ ಒಳಗಡೆ ಸಂಪರ್ಕ ಕಲ್ಪಿಸುವ ಇನ್ನೆರಡು ಬಾಗಿಲುಗಳನ್ನು ಬಂದ್ ಮಾಡಿರಲಿಲ್ಲ. ಇದರಿಂದ ಆರೋಪಿಗಳಿಗೆ ಕೃತ್ಯ ಎಸಗಲು ಅನುಕೂಲವಾಗಿತ್ತು’ ಎಂದರು.
ಮನೆಯ ಮಹಜರು ಕುರಿತು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ ಅವರನ್ನು ಒಂಟಗೋಡಿ ಅವರು ತರಾಟೆಗೆ ತೆಗೆದುಕೊಂಡರು.
ಮೊಬೈಲ್ ಫೋನ್ನಲ್ಲಿ ದಾಖಲಿಸಿಕೊಂಡಿರುವ ‘ಸಾಹೇಬರು’ ಹೆಸರಿನ ವ್ಯಕ್ತಿಯ ಕುರಿತು ಆರೋಪಿ ಕವಿತಾ ಬಾಡನವರ ಪೊಲೀಸರ ವಿಚಾರಣೆ ವೇಳೆ ಬಹಿರಂಗಪಡಿಸಿದ್ದು, 2014ರಿಂದ ಆ ವ್ಯಕ್ತಿ ಪರಿಚಯವಿದೆ ಎಂದು ತಿಳಿಸಿದ್ದಾರೆ. ಕೆಲ ಮುಖಂಡರಿಂದ ಫೋನ್ ಪೇ ಮೂಲಕ ಕವಿತಾ ಮೊಬೈಲ್ಗೆ ಹಣ ಬಂದಿರುವ ಬಗ್ಗೆಯೂ ಪೊಲೀಸರು ಮಾಹಿತಿ ಸಂಗ್ರಹಿಸಿದ್ದು, ಅವರನ್ನು ಕರೆಸಿ ವಿಚಾರಣೆ ಮಾಡುವ ಸಾಧ್ಯತೆಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.