ADVERTISEMENT

ಕ್ಷೇತ್ರದಲ್ಲಿ ಗದ್ದಿಗೌಡರ ಸಾಧನೆ ಶೂನ್ಯ

ಕಾಂಗ್ರೆಸ್ ಸಮಾವೇಶದಲ್ಲಿ ಸಚಿವ ಶಿವಾನಂದ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 14:03 IST
Last Updated 13 ಏಪ್ರಿಲ್ 2024, 14:03 IST
ರಬಕವಿ ಬನಹಟ್ಟಿ ಸಮೀಪದ ರಾಮಪುರದಲ್ಲಿ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಸಚಿವ ಆರ್.ಬಿ. ತಿಮ್ಮಾಪುರ ಉದ್ಘಾಟಿಸಿದರು
ರಬಕವಿ ಬನಹಟ್ಟಿ ಸಮೀಪದ ರಾಮಪುರದಲ್ಲಿ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಸಚಿವ ಆರ್.ಬಿ. ತಿಮ್ಮಾಪುರ ಉದ್ಘಾಟಿಸಿದರು   

ರಬಕವಿ ಬನಹಟ್ಟಿ: ‘ಸತತ ನಾಲ್ಕು ಬಾರಿ ಬಾಗಲಕೋಟೆ ಮತಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಪಿ.ಸಿ.ಗದ್ದಿಗೌಡರ ಅವರ ಸಾಧನೆ ಶೂನ್ಯವಾಗಿದೆ. ಮತ್ತೊಮ್ಮೆ ಸ್ಪರ್ಧೆ ಮಾಡುವಲ್ಲಿ ಯಾವುದೇ ನೈತಿಕತೆ ಇಲ್ಲ’ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಶುಕ್ರವಾರ ಸಮೀಪದ ರಾಮಪುರದ ದಾನೇಶ್ವರ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವದಲ್ಲಿ ಮಾತನಾಡಿದರು.

ಸ್ಥಳೀಯ ಶಾಸಕ ಸಿದ್ದು ಸವದಿ ಕೆಎಚ್‌ಡಿಸಿ ನಿಗಮ ಮಂಡಳಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಲ್ಲಿಯ ಆಡಳಿತ ಮಂಡಳಿಯ ವ್ಯವಸ್ಥಾಪಕರೊಂದಿಗೆ ₹196 ಕೋಟಿಯ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.

ADVERTISEMENT

ವಿಧಾನ ಪರಿಷತ್ ಸದಸ್ಯೆ ಉಮಾಶ‍್ರೀ ಮಾತನಾಡಿ, ನನಗೆ ರಾಜಕೀಯವಾಗಿ ನೆಲೆ ಕೊಟ್ಟ ಕ್ಷೇತ್ರ ತೇರದಾಳ. ಇಲ್ಲಿನ ನೇಕಾರರು ಪ್ರಬುದ್ಧರಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ನೀಡಲಿದ್ದಾರೆ. ಶೇಕಡ 1 ಮತ್ತು ಶೇಕಡ 3ರ ಬಡ್ಡಿ ಸಹಾಯಧನ ಹಾಗೂ ಸಾಲಮನ್ನಾ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಡಳಿತದಲ್ಲಿ ನಡೆದಿದ್ದು, ಶೀಘ್ರವೇ ಸಾಲದ ಬಡ್ಡಿ ಸಹಾಯಧನ ದೊರೆಯಲಿದೆ ಎಂದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತಾ ಪಾಟೀಲ ಮಾತನಾಡಿ, ಕ್ಷೇತ್ರದಲ್ಲಿ ಸಾಕಷ್ಟು ಜನಬೆಂಬಲ ದೊರೆತಿದೆ. ಈಗಾಗಲೇ ಕ್ಷೇತ್ರದ ಅನೇಕ ಕಡೆಗಳಲ್ಲಿ ಸಂಚರಿಸಿ ಪ್ರಚಾರ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಸಚಿವ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ ಎಸ್.ಆರ್.ಪಾಟೀಲ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಶಾಸಕರಾದ ಜೆ.ಟಿ.ಪಾಟೀಲ, ಭೀಮಸೇನ ಚಿಮ್ಮನಕಟ್ಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ ಮತ್ತು ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿದ್ದು ಕೊಣ್ಣೂರ, ರಾಜೇಂದ್ರ ಭದ್ರನವರ, ರಕ್ಷಿತಾ ಈಟಿ, ಭೀಮಶಿ ಮಗದುಮ್, ಲಕ್ಷ್ಮಣ ದೇಸಾರಟ್ಟಿ, ಎಂ.ಬಿ.ಸೌದಾಗರ, ಮಲ್ಲಪ್ಪ ಸಿಂಗಾಡಿ, ನೀಲಕಂಠ ಮುತ್ತೂರ, ಡಾ.ಎ.ಅರ್.ಬೆಳಗಲಿ, ರಂಗನಗೌಡ ಪಾಟೀಲ, ಬಸವರಾಜ ಕೊಕಟನೂರ, ನಸೀಮ ಮೊಕಾಸಿ, ದಾನಪ್ಪ ಹುಲಜತ್ತಿ, ರಾಹುಲ ಕಲಾಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.