ADVERTISEMENT

ಕಲಾದಗಿ: ವಾಹನ ಸವಾರರಿಗೆ ದೂಳಿನ ಮಜ್ಜನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 7:51 IST
Last Updated 9 ಅಕ್ಟೋಬರ್ 2024, 7:51 IST
ಕಲಾದಗಿ ಗ್ರಾಮದ ದಕ್ಷಿಣ ಹೆರಕಲ್ ಏತ ನೀರಾವರಿ ಯೋಜನೆ ಕಾಲುವೆಯ ಸೇತುವೆ ರಸ್ತೆ ಧೂಳುಮಯವಾಗುತ್ತಿರುವುದು
ಕಲಾದಗಿ ಗ್ರಾಮದ ದಕ್ಷಿಣ ಹೆರಕಲ್ ಏತ ನೀರಾವರಿ ಯೋಜನೆ ಕಾಲುವೆಯ ಸೇತುವೆ ರಸ್ತೆ ಧೂಳುಮಯವಾಗುತ್ತಿರುವುದು   

ಕಲಾದಗಿ: ಗ್ರಾಮದ ಬಾಗಲಕೋಟೆ ರಸ್ತೆ ಸಂಪರ್ಕಿಸುವ ಒಳ ರಸ್ತೆ ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಬಸ್ ಹಾಗೂ ಖಾಸಗಿ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವುದರಿಂದ ದೂಳಿನಿಂದ ರಸ್ತೆ ಸಂಪೂರ್ಣವಾಗಿ ಆವರಿಸಿ ವಾಹನ ಸವಾರಿಗೆ ರಸ್ತೆ ಕಾಣದಾಗಿದೆ.ರಸ್ತೆ ಪಕ್ಕದ ಜಮೀನಿನಲ್ಲಿ ಬೆಳೆದ ಬೆಳೆಗಳು ಹಾಳಾಗುತ್ತಿವೆ.

ಪ್ರತಿ ವರ್ಷ ಘಟಪ್ರಭಾ ನದಿ ಹಿನ್ನೀರಿನಿಂದ ಕೆಳ ಸೇತುವೆ ಜಲಾವೃತವಾಗಿ ಕನಿಷ್ಠ ಆರು ತಿಂಗಳು ರಸ್ತೆ ಸಂಪರ್ಕ ಕಡಿತವಾಗುತ್ತಿದೆ. ಸೇತುವೆ ಪಕ್ಕದ ಜಮೀನಿನ ಮಾಲಕರು ತಮ್ಮ ಹೊಲಗಳಿಗೆ ಹೋಗಬೇಕಾದರೆ ದಿನನಿತ್ಯ 2 ಕಿ.ಮೀ ಸುತ್ತುವರೆದು ಹೋಗಬೇಕಾದ ಪರಿಸ್ಥಿತಿ ಇತ್ತು. ದಕ್ಷಿಣ ಹೆರಕಲ್ ಏತ ನೀರಾವರಿಯ ಯೋಜನೆ ಕಾಲುವೆಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯು ನನೆಗುದಿಗೆ ಬಿದ್ದಿತ್ತು. ಶೀಘ್ರ ಸೇತುವೆ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಶಾಸಕ ಜೆ.ಟಿ.ಪಾಟೀಲ ಸೂಚಿಸಿದ್ದರು.

ಈ ಸೇತುವೆ ರಸ್ತೆಯಲ್ಲಿ ಬಸ್ ಹಾಗೂ ಖಾಸಗಿ ವಾಹನಗಳ ಅಬ್ಬರದಿಂದ ಅಪಾರ ಪ್ರಮಾಣ ಧೂಳು ಎಳುತ್ತದೆ. ಬೈಕ್ ಸವಾರರಿಗೆ ರಸ್ತೆ ಕಾಣದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ರೈತ ಚಂದ್ರು ಹೊಸಮನಿ

ADVERTISEMENT

ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಸ್ತೆಗೆ ಡಾಂಬರೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.

ಸೇತುವೆ ರಸ್ತೆ ಡಾಂಬರೀಕರಣ ಮಾಡಲು ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆಯಾದ ನಂತರ ಟೆಂಡರ್ ಕರೆದು ರಸ್ತೆ ಡಾಂಬರೀಕರಣ ಮಾಡಲಾಗುವುದು.
-ನವೀನ್, ಕೆಬಿಜಿಎನ್‌ಎಲ್ ಸಹಾಯಕ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.