ADVERTISEMENT

ಧರ್ಮದಿಂದ ಜೀವನ ವಿಕಾಸ, ಆರೋಗ್ಯ ವೃದ್ಧಿ

ಪ್ರವಚನಕಾರ ಅನ್ನದಾನಿ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 14:44 IST
Last Updated 8 ಅಕ್ಟೋಬರ್ 2024, 14:44 IST
ಮಹಾಲಿಂಗಪುರದ ಬನಶಂಕರಿದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡ ಶ್ರೀದೇವಿ ಪುರಾಣ ಕಾರ್ಯಕ್ರಮದಲ್ಲಿ ಅನ್ನದಾನಿ ಸ್ವಾಮೀಜಿ ಪ್ರವಚನ ನೀಡಿದರು
ಮಹಾಲಿಂಗಪುರದ ಬನಶಂಕರಿದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡ ಶ್ರೀದೇವಿ ಪುರಾಣ ಕಾರ್ಯಕ್ರಮದಲ್ಲಿ ಅನ್ನದಾನಿ ಸ್ವಾಮೀಜಿ ಪ್ರವಚನ ನೀಡಿದರು    

ಮಹಾಲಿಂಗಪುರ: ‘ನಿರ್ಮಲ ಮನಸ್ಸಿನಿಂದ ದೃಢವಾದ ಭಕ್ತಿಯ ಮೂಲಕ ದೇವರನ್ನು ನಂಬಿ ಭಕ್ತಿ ಆಚರಣೆ ಮಾಡಬೇಕು. ಅಂದಾಗ ದೇವರು ನಮ್ಮ ಸಂಕಷ್ಟಗಳನ್ನು ಪರಿಹಾರ ಮಾಡುತ್ತಾನೆ’ ಎಂದು ಬೆಂಗಳೂರಿನ ಅನ್ನದಾನಿ ಸ್ವಾಮೀಜಿ ಹೇಳಿದರು.

ಪಟ್ಟಣದ ಬನಶಂಕರಿದೇವಿ ದೇವಸ್ಥಾನದಲ್ಲಿ ನವರಾತ್ರಿ ಐದನೇ ದಿನ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ‘ಶ್ರೀದೇವಿ ಪುರಾಣ ಹಾಗೂ ದಸರಾ ಸಾಂಸ್ಕೃತಿಕ ಉತ್ಸವ’ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ ಮಾತನಾಡಿದರು.

‘ಧರ್ಮದಿಂದ ಜೀವನ ವಿಕಾಸ ಹಾಗೂ ಆರೋಗ್ಯ ವೃದ್ಧಿ ಆಗುತ್ತದೆ. ಸಂಯಮಶೀಲರಾಗಿ ಧರ್ಮ ಕ್ಷೇತ್ರಕ್ಕೆ ಬರಬೇಕು. ಇದರಿಂದ ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಸಾಧ್ಯವಿದೆ. ದುರ್ಗಣಗಳನ್ನು ಬಿಟ್ಟು ಶಿವ ಗುಣ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಇಂದು ನೈತಿಕ ಶಿಕ್ಷಣ ಬೇಕಿದೆ. ಯುವಕರು ದುಶ್ಚಟಗಳನ್ನು ಬಿಟ್ಟು ಕುಟುಂಬ, ದೇಶ ರಕ್ಷಣೆ ಮಾಡುವ ಸಂಕಲ್ಪ ಮಾಡಿ ದೇವಿ ಎದುರು ಪ್ರಮಾಣ ಮಾಡಬೇಕು’ ಎಂದು ಸಲಹೆ ಮಾಡಿದರು.

ADVERTISEMENT

ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ‘ನಮ್ಮ ಮನಸ್ಸಿನೊಳಗೆ ರಾಕ್ಷಸರು ಅಡಗಿ ಕುಳಿತಿದ್ದಾರೆ. ಜಗಜ್ಜನನಿಯನ್ನು ಸ್ಮರಿಸಿದರೆ ಈ ರಾಕ್ಷಸರು ನಾಶವಾಗುತ್ತಾರೆ’ ಎಂದರು.

ಶ್ರೀಕಾಂತ ನಾಯಿಕ ಹಾರ್ಮೋನಿಯಂ, ಹಣಮಂತ ಅಂಕದ ತಬಲಾ ಸಾಥ್ ನೀಡಿದರು. ಪ್ರಸಾದ ದಾನಿಗಳಾದ ಶ್ರೀಶೈಲ ಜಯಪ್ಪ ಮುರಗೋಡ ದಂಪತಿ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ದಂಪತಿ, ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ ದಂಪತಿ, ಹೆಸ್ಕಾಂ ಅಧಿಕಾರಿ ರಾಜೇಶ ಬಾಗೋಜಿ, ಲೈನ್‍ಮನ್ ಪರಶು ಚಲವಾದಿ, ಪಿಎಸ್‍ಐ ಕಿರಣ ಸತ್ತಿಗೇರಿ ಅವರನ್ನು ಸನ್ಮಾನಿಸಲಾಯಿತು. ಪಂಚಮಸಾಲಿ, ಬಣಜಿಗ, ಕಲಾಲ ಸಮಾಜದ ಮುಖಂಡರು ಶ್ರೀಗಳನ್ನು ಸನ್ಮಾನಿಸಿದರು. ನಂತರ ಬೀದರದ ನವಲಿಂಗ ಪಾಟೀಲ ಅವರಿಂದ ‘ಹಾಸ್ಯ ಸಂಜೆ’ ಕಾರ್ಯಕ್ರಮ ನಡೆಯಿತು.
 
ಕೆಂಗೇರಿಮಡ್ಡಿಯಲ್ಲಿ ನವರಾತ್ರಿ ಸಡಗರ

ಮಹಾಲಿಂಗಪುರ: ಪಟ್ಟಣದ ಕೆಂಗೇರಿಮಡ್ಡಿಯ ಲಕ್ಷ್ಮಿದೇವಿ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನವರಾತ್ರಿ ಉತ್ಸವದಲ್ಲಿ ಮಹಾಲಕ್ಷ್ಮಿ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ದಿ ಮಹಾಲಿಂಗಪುರ ಅರ್ಬನ್ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಶೇಖರ ಅಂಗಡಿ ಅವರನ್ನು ಸನ್ಮಾನಿಸಲಾಯಿತು. ಷಣ್ಮುಖ ಶಾಸ್ತ್ರೀಗಳು ಶ್ರೀದೇವಿ ಪುರಾಣ ಪ್ರವಚನ ನೀಡಿದರು.
ಮಹಾಲಕ್ಷ್ಮಿ ಸಹಕಾರಿ ಸಂಘದ ಅಧ್ಯಕ್ಷ ವಿಠ್ಠಲಗೌಡ ಕುಳಲಿ, ಸಿದ್ದಪ್ಪ ರಾಮೋಜಿ, ಚನ್ನಪ್ಪ ರಾಮೋಜಿ, ಪಂಡಿತ ಖೋತ, ಮುತ್ತಪ್ಪ ಕುಂದ್ರಾಳ, ಪ್ರಕಾಶ ರಾಮೋಜಿ, ಬಸವರಾಜ ಬಂಡಿವಡ್ಡರ, ರಾಜೇಸಾಬ ನದಾಫ್, ತಿಪ್ಪಣ್ಣ ಪಾತ್ರೋಟ, ಮಹಾಲಿಂಗ ಹಿಪ್ಪರಗಿ, ಸಿರಾಜ್ ಪಾಂಡು ಇತರರಿದ್ದರು.

ಚಿಮ್ಮಡದಲ್ಲಿ ಕೋಲಾಟ ಸಂಭ್ರಮ

ಮಹಾಲಿಂಗಪುರ: ಸಮೀಪದ ಚಿಮ್ಮಡ ಗ್ರಾಮದಲ್ಲಿ ಮಲ್ಲಯ್ಯನ ಗುಡಿ ಗಜಾನನ ಕಮೀಟಿ ವತಿಯಿಂದ ನವರಾತ್ರಿ ಅಂಗವಾಗಿ ಪ್ರತಿದಿನ ಸಂಜೆ ಕೋಲಾಟ ಕಾರ್ಯಕ್ರಮ ನಡೆಯುತ್ತಿದೆ. ಮಹಿಳೆಯರು ಸಂಭ್ರಮದಿಂದ ಭಾಗವಹಿಸುತ್ತಿದ್ದು, ಅ.11 ರವರೆಗೆ ಕೋಲಾಟ ಕಾರ್ಯಕ್ರಮ ನಡೆಯಲಿದೆ. ನವರಾತ್ರಿ ಅಂಗವಾಗಿ ಮಂಗಳವಾರ ‘ಲುಡೋಕಿಂಗ್’ ಸ್ಪರ್ಧೆ ಆಯೊಜಿಸಲಾಗಿತ್ತು. ವಿಜೇತರಿಗೆ ಪ್ರಥಮ ₹5 ಸಾವಿರ, ದ್ವಿತೀಯ ₹3 ಸಾವಿರ ಹಾಗೂ ತೃತೀಯ ₹1500 ಬಹುಮಾನವಾಗಿ ನೀಡಲಾಯಿತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.