ಬಾಗಲಕೋಟೆ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೊಸ ಮುಖಗಳಿಗೆ ಮಣೆ ಹಾಕಲಿದೆ ಎಂಬ ವಿಷಯ ಚರ್ಚೆಯಾಗುತ್ತಿರುವ ಬೆನ್ನಲ್ಲೇ ನಿವೃತ್ತ ಐಎಎಸ್ ಅಧಿಕಾರಿ ಡಾ.ಪ್ರಕಾಶ ಪರಪ್ಪ ಅವರು ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿ ಬಾಗಲಕೋಟೆ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ತೀವ್ರಗೊಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಪ್ರಕಾಶ ಅವರು ಮೈಸೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ಪದವೀಧರರು. 1997ರಲ್ಲಿ ಐಎಎಸ್ ಪರೀಕ್ಷೆ ಉತ್ತೀರ್ಣರಾದ ಅವರು ಮುಂಬೈ ಸೇರಿ ವಿವಿಧೆಡೆ ಕೇಂದ್ರದ ಆರ್ಥಿಕ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು.
ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯಲ್ಲಿದ್ದ (ಆರ್ಎಸ್ಎಸ್) ಅವರು 2020ರಲ್ಲಿ ಬಿಜೆಪಿಗೆ ಸೇರಿದರು. ಬಿಜೆಪಿಯ ರಾಜ್ಯ ಪ್ರಬುದ್ಧರ ಪ್ರಕೋಷ್ಠದ ಸಹ ಸಂಚಾಲಕ, ಪ್ರಧಾನಿ ಮೋದಿ ಅವರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ರಾಜ್ಯ ಸಹ ಪ್ರಭಾರಿ, ರಾಜ್ಯ ಚುನಾವಣಾ ಪ್ರಣಾಳಿಕೆ ಸಮಿತಿ ಸಹ ಸಂಚಾಲಕ, ರಾಜ್ಯ ವಿಶೇಷ ಸಂಪರ್ಕ ಸಮಿತಿಯ ಸಹ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ.
2023ರ ವಿಧಾನಸಭಾ ಚುನಾವಣೆ ವೇಳೆ ಜಿಲ್ಲೆಯ 24 ಪ್ರಕೋಷ್ಠಗಳಿಗೆ ರಾಜ್ಯ ಪ್ರಭಾರಿಯಾಗಿದ್ದ ಅವರು, ಜಿಲ್ಲೆಯಾದ್ಯಂತ ಓಡಾಡಿದರು. ನಾಲ್ಕು ತಿಂಗಳಿನಿಂದ ಬಾಗಲಕೋಟೆಯಲ್ಲೇ ವಾಸವಿರುವ ಅವರು ಗ್ರಾಮಗಳಿಗೆ ಭೇಟಿ ನೀಡಿ, ಸಭೆ ನಡೆಸಿದ್ದಾರೆ.
ಗ್ರಾಮಗಳಲ್ಲಿ ಎಂ.ಪಿ (ಮೋದಿ, ಪ್ರಕಾಶ) ಚಾಯ್ ಅಭಿಯಾನ ಆರಂಭಿಸಿರುವ ಡಾ. ಪ್ರಕಾಶ ಅವರು ಗ್ರಾಮಸ್ಥರೊಂದಿಗೆ ಚಹಾ ಕುಡಿಯುತ್ತ ಸಮಸ್ಯೆ ಆಲಿಸುತ್ತಾರೆ.
‘200ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಭಿಯಾನ ಕೈಗೊಂಡು, ಗ್ರಾಮಸ್ಥರ ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ. ಹಲವು ವರ್ಷಗಳಿಂದ ಬಾಗಲಕೋಟೆ ಕ್ಷೇತ್ರವನ್ನು ಬಿಜೆಪಿ ಸಂಸದರು ಪ್ರತಿನಿಧಿಸಿದ್ದಾರೆ, ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಇದೆಲ್ಲದರ ಮಧ್ಯೆ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಪಕ್ಷದ ನಾಯಕನಾಗಿ ಗ್ರಾಮಸ್ಥರ ಅಹವಾಲು ಆಲಿಸಿದ್ದೇನೆ’ ಎಂದು ಡಾ. ಪ್ರಕಾಶ ‘ಪ್ರಜಾವಾಣಿ’ಗೆ ತಿಳಿಸಿದರು.
ಚಿತ್ರದುರ್ಗ ಕ್ಷೇತ್ರ ಮೀಸಲು ಕ್ಷೇತ್ರ ಆಗಿರುವ ಕಾರಣ ಬೇರೆಡೆ ಸ್ಪರ್ಧಿಸಬೇಕು. ಇಲ್ಲಿ ವೈದ್ಯ ಸ್ನೇಹಿತರು ಸಂಬಂಧಿಗಳು ಇರುವ ಕಾರಣ ಈ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೇನೆ. ಪಕ್ಷದ ವರಿಷ್ಠರ ಸೂಚನೆಯೂ ಇದೆಡಾ.ಪ್ರಕಾಶ ಜೆ ಪರಪ್ಪ ಬಿಜೆಪಿ ನಾಯಕ ಎಂಪಿ ಚಾಯ್ ಪ್ರಕಾಶ ಪರಪ್ಪ ಮುಂಬೈ
ಮತ್ತೊಮ್ಮೆ ಸ್ಪರ್ಧಿಸಲು ಉತ್ಸುಕನಾಗಿದ್ದೇನೆ. ಪಕ್ಷದ ಹೈಕಮಾಂಡ್ ಅವಕಾಶ ನೀಡಲಿದೆ ಎಂಬ ನಿರೀಕ್ಷೆ ಇದೆ.ಪಿ.ಸಿ. ಗದ್ದಿಗೌಡರ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.