ಮಹಾಲಿಂಗಪುರ: ಸಮೀಪದ ಸೈದಾಪುರ ಗ್ರಾಮದಲ್ಲಿ ಶಿವಲಿಂಗೇಶ್ವರ ಜಾತ್ರೆ ಅಂಗವಾಗಿ ಮಾರುತಿ ದೇವರ ಕಡೆಓಕುಳಿ ಶನಿವಾರ ನೆರವೇರಿತು.
ಓಕುಳಿ ಕೊಂಡಕ್ಕೆ ವಿವಿಧ ದೇವರ ಪಲ್ಲಕ್ಕಿಗಳ ಪ್ರದಕ್ಷಿಣೆ ಹಾಕಿದ ನಂತರ ಓಕುಳಿಯಾಟ ನಡೆಯಿತು. ಮಕ್ಕಳು, ಯುವಕರು ಉತ್ಸಾಹದಿಂದ ನೀರು ಎರಚಿ ಸಂಭ್ರಮಿಸಿದರು. ಕಡೆಓಕುಳಿ ನಂತರ ಪಲ್ಲಕ್ಕಿ ಸೇವೆ ನಡೆದು ದೇವರು ಹೊಳೆಗೆ ತೆರಳಿದವು.
ಯುವಕರು ಮರಗಾಲು ಕಟ್ಟಿಕೊಂಡು ವಾದ್ಯಮೇಳಗಳ ತಾಳಕ್ಕೆ ತಕ್ಕಂತೆ ಕುಣಿದರೆ, ಕುದುರೆ, ನವಿಲು ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳ ಸೋಗಿನ ಗುಂಪುಗಳ ಕುಣಿತ ಕಣ್ಮನ ಸೆಳೆಯಿತು.
ಮಾರುತಿ ದೇವರ ಗದ್ದುಗೆಗೆ ರುದ್ರಾಭಿಷೇಕ, ಪೂಜೆ ನಡೆದ ನಂತರ ಗ್ರಾಮಸ್ಥರು ದೇವಸ್ಥಾನಕ್ಕೆ ತೆರಳಿ ನೈವೇದ್ಯ, ಪೂಜೆ ಸಲ್ಲಿಸಿ, ಹರಕೆ ತೀರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.