ಮುಧೋಳ: ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳನ್ನು ನಕಲಿಯಾಗಿ ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ರಾಜ್ಯ ಹಾಗೂ ಹೊರ ರಾಜ್ಯಗಳ ಒಂಬತ್ತು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಂದ ಕೊಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ದೇವದುರ್ಗದ ಮಹಮ್ಮದ್ ವಶೀಂ, ಹೈದರಾಬಾದಿನ ಮುನೀರ್, ಹಿಮಾಯತ, ದೆಹಲಿಯ ಮಹಮ್ಮದ್ ಅಲಿ, ನಿಪ್ಪಾಣಿಯ ವಿಕಾಸ ಚವಾಣ್, ಸಂತೋಷ ಬಳ್ಳೊಳ್ಳೆ, ಬೆಳಗಾವಿಯ ಜಹೀರ್ ಅಬ್ಬಾಸ್, ನದೀಮ್ ಹಾಗೂ ಇಕ್ಬಾಲ್ ಎಂದು ಬಂಧಿತರು.
ಆರೋಪಿಗಳು ಆರ್ಎಂಡಿ ತಂಬಾಕು ಉತ್ಪನ್ನವನ್ನು ನಕಲಿಯಾಗಿ ತಯಾರಿಸಿ ಕಂಪನಿಗೆ ಅಪಾರ ಹಾನಿಯನ್ನುಂಟು ಮಾಡುತ್ತಿದ್ದರು. ಈ ಬಗ್ಗೆ ಮುಧೋಳದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ನಾಲ್ಕು ರಾಜ್ಯಗಳ ವಂಚಕರನ್ನು ಬಂಧಿಸಿದ್ದಾರೆ.
ನಕಲಿ ಗುಟ್ಕಾ ತಯಾರಿಕೆಗೆ ಬಳಕೆ ಮಾಡುತ್ತಿದ್ದ ಮೂರು ಯಂತ್ರಗಳು, ಖಾಲಿ ಪ್ಯಾಕೆಟ್ ಸೇರಿ ಕೊಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಸಿಪಿಐ ಆರ್.ಆರ್. ಪಾಟೀಲ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಅಜಿತಕುಮಾರ ಹೊಸಮನಿ, ರಮೇಶ ಪಾಟೀಲ, ರಾಕೇಶ ಬಗಲಿ ಪೊಲೀಸ್ ಸಿಬ್ಬಂದಿ ಆರ್.ಬಿ.ಕಟಗೇರಿ, ಬೀರಪ್ಪ ಕುರಿ, ಹನಮಂತ ಮಾದರ, ಮಾರುತಿ ದಳವಾಯಿ, ದಾದಾಪೀರ್ ಅತ್ರಾವತ, ಎಚ್.ವೈ. ಕೋಳಿ, ಎನ್.ವೈ. ಐದಮನಿ ಅವರ ತಂಡ ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.