ಇಳಕಲ್: ಇಲ್ಲಿಯ ಬಸವನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸ್ವಂತ ಕಟ್ಟಡವಿಲ್ಲ. ಕಿರಿದಾದ ತಗಡಿನ ಶೆಡ್ಡಿನಲ್ಲಿ ಬೇಸಿಗೆಯ ಬಿರುಬಿಸಿಲಿನ ಝಳ ಹಾಗೂ ಸೆಕೆಯಲ್ಲಿ ಚಿಕ್ಕ ಮಕ್ಕಳು ಕಷ್ಟಪಡುತ್ತಿದ್ದಾರೆ.
ಈ ಶಾಲೆ 2011 ರಲ್ಲಿ ಆರಂಭವಾಗಿದ್ದು, 1 ರಿಂದ 5 ತರಗತಿಯವರೆಗೆ ಒಟ್ಟು 25 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇಬ್ಬರು ಶಿಕ್ಷಕರಿದ್ದು ಸುತ್ತಮುತ್ತಲಿನ ಬಡ ಕುಟುಂಬಗಳ ವಿದ್ಯಾರ್ಥಿಗಳು ಇಲ್ಲಿ ದಾಖಲಾಗಿದ್ದಾರೆ.
ಶಾಲೆಗಾಗಿ ನಗರಸಭೆ ನಿವೇಶನ ನೀಡಿದೆ. ಶಿಕ್ಷಕರ ಪ್ರಯತ್ನದ ಫಲವಾಗಿ ಶಾಲೆ ಹೆಸರಿನಲ್ಲಿ ನಿವೇಶನದ ಖಾತೆಯೂ ಆಗಿದೆ. ಶಾಲಾ ಕಟ್ಟಡಕ್ಕಾಗಿ ಈ ಹಿಂದೆ ಒಮ್ಮೆ ಶಾಸಕ ವಿಜಯಾನಂದ ಕಾಶಪ್ಪನವರ, ಇನ್ನೊಮ್ಮೆ ದೊಡ್ಡನಗೌಡ ಪಾಟೀಲರ ಅವಧಿಯಲ್ಲಿ ಅನುದಾನ ಮಂಜೂರಾಗಿತ್ತು. ಕಟ್ಟಡ ಕಾಮಗಾರಿಯ ಭೂಮಿ ಪೂಜೆಯೂ ನಡೆದಿತ್ತು.
‘ಒಮ್ಮೆ ಶಾಲೆಯ ಹೆಸರಿನಲ್ಲಿ ಜಾಗ ಇಲ್ಲದ ಕಾರಣಕ್ಕೆ, ಇನ್ನೊಮ್ಮೆ ಕೆಲ ಪಟ್ಟಭದ್ರರ ಪ್ರಭಾವದಿಂದಾಗಿ ಮಂಜೂರಾಗಿದ್ದ ಅನುದಾನ ಬೇರೆಡೆಗೆ ವರ್ಗಾವಣೆಯಾಗಿದೆ. ಈ ಶಾಲೆಯನ್ನು ಬೇರೆಡೆಗೆ ಎತ್ತಂಗಡಿ ಮಾಡಿಸುವ ದುರುದ್ದೇಶವನ್ನು ಕೆಲವರು ಹೊಂದಿದ್ದು, ಕಟ್ಟಡ ಆಗದಂತೆ ನೋಡಿಕೊಂಡಿದ್ದಾರೆ. ಇದರಿಂದ ಈ ಭಾಗದಲ್ಲಿರುವ ನೂರಾರು ಬಡ ಕುಟುಂಬಗಳ ಮಕ್ಕಳಿಗೆ ತೊಂದರೆಯಾಗಿದೆ. ಈಗ ಶಾಸಕ ವಿಜಯಾನಂದ ಕಾಶಪ್ಪನವರ ಮುತುವರ್ಜಿ ವಹಿಸಿ, ಶಾಲೆಗೆ ಕಟ್ಟಡ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಬೇಕು’ ಎಂದು ಇಲ್ಲಿ ಓದುತ್ತಿರುವ ಮಕ್ಕಳ ಪಾಲಕರು ಮನವಿ ಮಾಡಿದ್ದಾರೆ.
‘13 ವರ್ಷದಿಂದ ತಗಡಿನ ಶೆಡ್ಡಿನಲ್ಲಿಯೇ ನಡೆಯುತ್ತಿದ್ದರೂ ಸ್ವಂತ ಕಟ್ಟಡ ನಿರ್ಮಿಸುವ ಪ್ರಯತ್ನ ಅಧಿಕಾರಿಗಳಿಂದ ಆಗಿಲ್ಲ. ಕೂಡಲೇ ಶಾಲೆಗೆ ಸ್ವಂತ ಕಟ್ಟಡ ಕಟ್ಟಿಸಿ, ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಪಾಲಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಬಿಇಒ ಜಾಸ್ಮಿನ್ ಕಿಲ್ಲೇದಾರ್ ಪ್ರತಿಕ್ರಿಯಿಸಿ, ‘ಶಾಲೆಗೆ ಭೇಟಿ ನೀಡಿದಾಗ ಕಟ್ಟಡವಿಲ್ಲದ್ದು ಗಮನಕ್ಕೆ ಬಂದಿದೆ. ಸರಕಾರ ಹೊಸ ಶಾಲಾ ಕಟ್ಟಡಕ್ಕೆ ಅನುದಾನ ಮಂಜೂರು ಮಾಡಿದ ಕೂಡಲೇ ಆದ್ಯತೆಯ ಮೇರೆಗೆ ಈ ಶಾಲೆಗೆ ಅನುದಾನ ಹಂಚಿಕೆ ಮಾಡಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.