ADVERTISEMENT

ಬಾಗಲಕೋಟೆ | ಸತತ ಮಳೆ: ಜೋಳದ ಬಿತ್ತನೆಗೆ ಅಡ್ಡಿ

ಅಕ್ಟೋಬರ್ ತಿಂಗಳಲ್ಲಿ ವಾಡಿಕೆಯಷ್ಟು ಮಳೆ, 98 ಸಾವಿರ ಹೆಕ್ಟೇರ್‌ ಪ್ರದೇಶ ಬಿತ್ತನೆ ಗುರಿ

ಬಸವರಾಜ ಹವಾಲ್ದಾರ
Published 17 ಅಕ್ಟೋಬರ್ 2024, 5:12 IST
Last Updated 17 ಅಕ್ಟೋಬರ್ 2024, 5:12 IST
   

ಬಾಗಲಕೋಟೆ: ಹಿಂಗಾರು ಜೋಳ ಬಿತ್ತನೆ ಪ್ರದೇಶದಲ್ಲಿ ಸತತ ಮಳೆಯಾಗುತ್ತಿರುವುದರಿಂದ ಬಿತ್ತನೆಗೆ ಅಡ್ಡಿಯಾಗಿದೆ.

ಹಿಂಗಾರು ಹಂಗಾಮಿನಲ್ಲಿ 3.09 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆಯ ಗುರಿ ಹೊಂದಲಾಗಿದೆ. ಆದರೆ, ಇಲ್ಲಿಯವರೆಗೆ 60 ಸಾವಿರ ಹೆಕ್ಟೇರ್‌ನಷ್ಟು ಮಾತ್ರ ಬಿತ್ತನೆಯಾಗಿದೆ.

ಜೋಳ ಪ್ರಮುಖ ಬೆಳೆಯಾಗಿದ್ದು, 98 ಸಾವಿರ ಹೆಕ್ಟೇರ್‌ ಪ್ರದೇಶ ಬಿತ್ತನೆ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೆ 9,400 ಹೆಕ್ಟೇರ್ ಪ್ರದೇಶದಷ್ಟು ಮಾತ್ರ ಬಿತ್ತನೆಯಾಗಿದೆ. 

ADVERTISEMENT

24,400 ಹೆಕ್ಟೇರ್ ಗೋವಿನ ಜೋಳ ಬಿತ್ತನೆ ಗುರಿಯಲ್ಲಿ 900 ಹೆಕ್ಟೇರ್, 29 ಸಾವಿರ ಹೆಕ್ಟೇರ್‌ ಗೋಧಿ ಬಿತ್ತನೆಯಲ್ಲಿ 600 ಹೆಕ್ಟೇರ್, 1,09 ಲಕ್ಷ ಕಡಲೆ ಬಿತ್ತನೆಯಲ್ಲಿ 9,790 ಹೆಕ್ಟೇರ್‌ ಬಿತ್ತನೆಯಾಗಿದೆ. ಸೂರ್ಯಕಾಂತಿ, ಶೇಂಗಾ ಬಿತ್ತನೆಯೂ ಆಗಬೇಕಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ವಾಡಿಕೆಯಂತೆ 13.6 ಸೆ.ಮೀ. ಮಳೆಯಾಗಬೇಕಿತ್ತು. ಆದರೆ, 67 ಸೆ.ಮೀ. ನಷ್ಟು ಮಾತ್ರ ಮಳೆಯಾಗಿದೆ. ಮಳೆಯ ಕೊರತೆ ಎದುರಿಸಿದ್ದರಿಂದ ಬಿತ್ತನೆಗೆ ಮುಂದಾಗಿರಲಿಲ್ಲ.

ಅಕ್ಟೋಬರ್ ತಿಂಗಳದ 15 ದಿನಗಳು ಮುಗಿಯುವ ವೇಳೆಗೆ ವಾಡಿಕೆಯಷ್ಟು ಮಳೆಯಾಗಿದೆ. ಆದರೆ, ಸತತವಾಗಿ ಮಳೆಯಾಗುತ್ತಿರುವುದರಿಂದ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನಷ್ಟು ವಿಳಂಬವಾದರೆ ಜೋಳ ಬಿತ್ತನೆ ಸಾಧ್ಯವಾಗುವುದಿಲ್ಲ.

‘ಜೋಳ ಬಿತ್ತನೆಗೆ ಸಜ್ಜು ಮಾಡಿಕೊಳ್ಳಲಾಗಿದೆ. ಆದರೆ, ಭೂಮಿಯಲ್ಲಿ ತೇವಾಂಶ ಜಾಸ್ತಿ ಇದೆ. ಮಳೆ ನಿಂತರೆ ಬಿತ್ತನೆ ಮಾಡಬಹುದಾಗಿದೆ. ಇಲ್ಲದಿದ್ದರೆ, ತೊಂದರೆಯಾಗುತ್ತದೆ’ ಎಂದು ಶೀಗಿಕೇರಿ ರೈತ ಮಲ್ಲಣ್ಣ ಹೇಳಿದರು.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವು ದರಿಂದ ಮುಂದಿನ ಮೂರ್ನಾಲ್ಕು ದಿನ ಸಾಧಾರಣದಿಂದ ಜೋರಾದ ಮಳೆಯಾಗುವ ಸಾಧ್ಯತೆ ಇದೆ
ಬಸವರಾಜ ನಾಗಲೀಕರ,ಹವಾಮಾನ ತಜ್ಞ, ಕೃಷಿ ವಿಜ್ಞಾನ ಕೇಂದ್ರ
ಬಾಗಲಕೋಟೆ ಸೇರಿದಂತೆ ವಿವಿಧೆಡೆ ಮಳೆ
ಬಾಗಲಕೋಟೆ: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸತತ ಎರಡನೇ ದಿನವೂ ಮಳೆ ಮುಂದುವರೆದಿದೆ. ಬಾಗಲಕೋಟೆ, ಬಾದಾಮಿ, ಹುನಗುಂದ, ಇಳಕಲ್‌, ಬೀಳಗಿ, ಕುಳಗೇರಿ, ಮುಧೋಳ, ಮಹಾಲಿಂಗಪುರ ಸೇರಿದಂತೆ ಎಲ್ಲೆಡೆ ಮಳೆಯಾಗಿದೆ. ನವಿಲುತೀರ್ಥ ಜಲಾಶಯ ಭರ್ತಿಯಾಗಿರುವುದರಿಂದ 8 ಸಾವಿರ ಕ್ಯುಸೆಕ್‌ ನೀರು ಹೊರ ಬಿಡಲಾಗಿದೆ. ಬೆಣ್ಣೆ ಹಳ್ಳ ಹರಿಯುವ ಪ್ರದೇಶದ ಹುಬ್ಬಳ್ಳಿ–ಧಾರವಾಡದಲ್ಲಿಯೂ ಮಳೆಯಾಗುತ್ತಿರುವುದರಿಂದ ಮಲಪ್ರಭಾ ನದಿ ನೀರು ಈಗಾಗಲೇ ಬೆಳೆಗಳಿಗೆ ನುಗ್ಗಿದೆ. ಇನ್ನಷ್ಟು ಮಳೆ ಹೆಚ್ಚಾದರೆ, ಗ್ರಾಮಗಳಿಗೂ ನೀರು ನುಗ್ಗುವ ಅಪಾಯವಿದೆ.
ಹಿಂಗಾರು ಬಿತ್ತನೆಗೆ ಮಳೆ ಅಡ್ಡಿ: ಆತಂಕ
ಹುನಗುಂದ: ಪಟ್ಟಣವು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಜೋರು ಮಳೆ ಆಗಿದೆ. ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಳೆ, ತಾಲ್ಲೂಕಿನ ನಾಗೂರು, ಯಡಹಳ್ಳಿ, ಚಿತ್ತವಾಡಗಿ, ವೀರಾಪೂರ, ಬನ್ನಿಹಟ್ಟಿ, ಹೊನ್ನರಹಳ್ಳಿ, ಬೇವಿನಮಟ್ಟಿ, ಹಿರೇಬಾದವಾಡಗಿ, ಚಿಕ್ಕಬಾದವಾಡಗಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಮಳೆ ಅಬ್ಬರಿಸಿದೆ. ಮಳೆ ಅಬ್ಬರಕ್ಕೆ ಹೊಲಗಳಲ್ಲಿನ ಬದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಕೆಲ ಪ್ರದೇಶಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಮಳೆ ಸುರಿಯುತ್ತಿದೆ. ಹಿಂಗಾರು ಬೆಳೆಗಳಾದ ಜೋಳ, ಕಡಲೆ ಬಿತ್ತನೆಗೆ ಮಳೆ ಅಡ್ಡಿಯಾಗಬಹುದು ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.