ಕೆರೂರ: ಸಮಾಜದಲ್ಲಿ ಅನ್ಯಾಯದ ವಿರುದ್ಧ ರೆಡ್ಡಿಸಮಾಜ ನಿರಂತರ ಹೋರಾಟ ಮಾಡುತ್ತಿದೆ ಎಂದು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಸಮೀಪದ ಹೂಲಗೆರಿ ಗ್ರಾಮದ ಹೇಮ-ವೇಮ ಸೇವಾ ಸಂಸ್ಥೆ ಆಶ್ರಯದಲ್ಲಿ ಶನಿವಾರ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ, ತತ್ವಜ್ಞಾನಿ ಮಹಾಯೋಗಿ ವೇಮನ ಹಾಗೂ ಬಸವಣ್ಣರ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸಮಾಜದಲ್ಲಿನ ಅಂಕುಡೊಂಕುಗಳನ್ನು ಹೋಗಲಾಡಿಸುವ ಕೆಲಸವನ್ನು ವೇಮನರು ಮಾಡಿದ್ದಾರೆ. ಕಲ್ಲಿನೊಳಗೆ ದೇವರಿಲ್ಲ, ನಿಮ್ಮ ಆತ್ಮದೊಳಗೆ ದೇವರಿದ್ದಾನೆ’ ಎಂದು ಹೇಳಿದರು.
‘ನಮ್ಮ ಇಂದಿನ ಜೀವನ ಶೈಲಿಯ ದಿನಗಳಲ್ಲಿ ನಮ್ಮೇಲ್ಲರ ಮಾನಸಿಕ ನೆಮ್ಮದಿ ಶಾಂತಿ ಸಿಗುವುದು ದೇವಸ್ಥಾನದ ಪೂರಕ ವಾತಾವರಣದಲ್ಲಿ ಮಾತ್ರ’ ಎಂದು ಮುಜರಾಯಿ, ಸಾರಿಗೆ ಮಂತ್ರಿ ರಾಮಲಿಂಗಾರೆಡ್ಡಿ ಹೇಳಿದರು.
ಸಮಾಜದಲ್ಲಿ ಧಾರ್ಮಿಕ ಆಚರಣೆಗೆ ಮಾತ್ರ ಒತ್ತು ಕೊಡದೆ ವೇಮನರು ಹಾಗೂ ಮಲ್ಲಮ್ಮನವರ ತತ್ವಾದರ್ಶಗಳನ್ನು ಅರಿತು ಸನ್ಮಾರ್ಗದಲ್ಲಿ ನಡೆಯುಬೇಕು ಎಂದರು.
ರೆಡ್ಡಿಗಳಲ್ಲಿ ಒಗ್ಗಟ್ಟು ಅಗತ್ಯ:
‘ರೆಡ್ಡಿ ಸಮಾಜದಲ್ಲಿ ಒಗ್ಗಟ್ಟು ಪುನಃ ಸ್ಥಾಪನೆಗೆ ರೆಡ್ಡಿ ಪೀಠದ ಶ್ರೀಗಳು ಉತ್ತಮ ಕೆಲಸ ಮಾಡುತ್ತಿದ್ದು ಅವರು ಶೈಕ್ಷಣಿಕ ಕಾಳಜಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ರಾಜ್ಯದ ಉತ್ತರ ದಕ್ಷಿಣದ ರೆಡ್ಡಿ ನಾಯಕರನ್ನು ಒಗ್ಗೂಡಿಸಿ ಸಮರ್ಥ ನಾಯಕತ್ವಕ್ಕೆ ಬಲ ನೀಡುತ್ತಿದ್ದು ಅದನ್ನು ನಾವೇಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಜೆ.ಟಿ.ಪಾಟೀಲ ಹೇಳಿದರು.
ರೆಡ್ಡಿಗುರು ಪೀಠದ ವೇಮನಾಂದ ಸ್ವಾಮೀಜಿ, ರಾಜನಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮೀಜಿ, ಕೆರೂರ ಚರಂತಿಮಠದ ಶಿವಕುಮಾರ ಸ್ವಾಮೀಜಿ, ಗದ್ದನಗಿರಿ ಮಠದ ಮಳಿಯಪ್ಪಯ್ಯ ಮಹಾಪುರುಷ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಂಸದ ಪಿಸಿ ಗದ್ದಿಗೌಡರ, ಶಾಸಕರಾದ ಪಿಎಚ್ ಪೂಜಾರ, ಬಿ.ಬಿ. ಚಿಮ್ಮನಕಟ್ಟಿ, ಹಣಮಂತ ನಿರಾಣಿ, ಹೂವಪ್ಪ ರಾಠೋಡ, ಎಂ.ಎನ್ ಪಾಟೀಲ, ಅಭಯ ಸರನಾಯಕ, ಲಚ್ಚಪ್ಪ ಕಕರೆಡ್ಡಿ, ಸುರೇಶ ನಾರಪ್ಪನವರ, ಕುಮಾರ ಕಕರಡ್ಡಿ, ವೆಂಕಟೇಶ ಹಲಗತ್ತಿ, ರಾಜು ಕಕರೆಡ್ಡಿ, ಬಸಪ್ಪ ಮುಗಳೊಳ್ಳಿ, ಗಿರೀಶ ದಾಸಪ್ಪನವರ, ಪಾಂಡು ಹಳ್ಳಿ, ಡಾ.ಬಿ.ಕೆ ಕೂವಳ್ಳಿ, ಹಣಮಂತ ಕರಡಿಗುಡ್ಡ ಮತ್ತಿತರರು ಹಾಜರಿದ್ದರು.
ಸಮಾಜದ ಸಾಕಷ್ಟು ಬೇಡಿಕೆಗಳನ್ನು ಮುಖ್ಯಮಂತ್ರಿ ಈಡೇರಿಸಿದ್ದಾರೆ. ಶೀಘ್ರದಲ್ಲಿ ರೆಡ್ಡಿ ಅಭಿವೃದ್ಧಿ ನಿಮಗ ಸ್ಥಾಪಿಸುವಂತೆ ಮನವಿ ಮಾಡಲಾಗಿದೆ
-ಎಚ್.ಕೆ. ಪಾಟೀಲ ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.