ರಬಕವಿ ಬನಹಟ್ಟಿ: ಇಲ್ಲಿನ ನಗರಸಭೆಯ ಹಿಂಬದಿಯ ರಾಮಪುರದ ರಸ್ತೆ ಮಾರ್ಗ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಚಾಲಕರು, ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದು ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿಯಾಗಿದ್ದು, ಇಲ್ಲಿ ಬೃಹತ್ ತಗ್ಗುಗಳು ನಿರ್ಮಾಣವಾಗಿವೆ. ಮಧ್ಯದಲ್ಲಿ ಈ ತಗ್ಗುಗಳನ್ನು ಮುಚ್ಚುವ ಸಲುವಾಗಿ ಕಲ್ಲುಗಳನ್ನು ಹಾಕಲಾಗಿತ್ತು. ಈ ಕಲ್ಲುಗಳು ಕೂಡಾ ಸಾರ್ವಜನಿಕರಿಗೆ ಬಹಳಷ್ಟು ಸಮಸ್ಯೆಯನ್ನುಂಟು ಮಾಡಿದವು.
ಈ ರಸ್ತೆಯಲ್ಲಿ ಎಲ್ಲಿಯೂ ಬೀದಿ ದೀಪಗಳು ಇಲ್ಲದೆ ಇರುವುದು ಮತ್ತೊಂದು ಸಮಸ್ಯೆಯಾಗಿದೆ. ಅದರಲ್ಲೂ ಸಂಜೆಯಾಗುತ್ತಿದ್ದಂತೆ ವಾಹನ ಸಂಚಾರಿಗಳಿಗೆ ಮತ್ತಷ್ಟು ತೊಂದರೆಯಾಗಿದೆ. ಈಗ ಸತತವಾಗಿ ಮಳೆಯಾಗುತ್ತಿರುವುದರಿಂದ ರಸ್ತೆಯಲ್ಲಿ ಮತ್ತಷ್ಟು ತಗ್ಗುಗಳು ನಿರ್ಮಾಣವಾಗಿವೆ. ಇವು ಅರ್ಧಕ್ಕಿಂತ ಹೆಚ್ಚು ರಸ್ತೆಯನ್ನು ಆಕ್ರಮಿಸಿವೆ. ಇದರಿಂದಾಗಿ ವಾಹನಗಳು ಯಾವ ಕಡೆಗೆ ಹೋಗುತ್ತಿವೆ ಎಂಬುದು ಗೊತ್ತಾಗುವುದಿಲ್ಲ ಬಹಳಷ್ಟು ದ್ವಿಚಕ್ರ ವಾಹನ ಚಾಲಕರು ತೆಗ್ಗುಗಳಲ್ಲಿ ಬಿದ್ದು ಗಾಯಗಳನ್ನು ಮಾಡಿಕೊಂಡಿದ್ದಾರೆ.
ಇದು ರಾಜ್ಯ ಹೆದ್ದಾರಿಯಾಗಿರುವುದರಿಂದ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮತ್ತು ಮಹಾರಾಷ್ಟ್ರಕ್ಕೆ ಹೋಗುವ ಪ್ರಮುಖ ರಸ್ತೆಯಾಗಿದೆ. ನಿತ್ಯ ನೂರಾರು ವಾಹನಗಳು ಈ ರಸ್ತೆಯ ಮೂಲಕವೇ ಸಂಚಾರ ಮಾಡುತ್ತವೆ. ರಬಕವಿ ಬನಹಟ್ಟಿ ಪ್ರಮುಖ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಇದೇ ಮಾರ್ಗದ ಮೂಲಕ ತೆರಳ ಬೇಕಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ತೆರಳಬೇಕಾದ ಸಂದರ್ಭದಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ರಸ್ತೆಯ ಎರಡು ಬದಿಗೆ ಗುಡ್ಡದ ಪ್ರದೇಶವಿದೆ. ಇಲ್ಲಿ ನೂರಾರು ಮನೆಗಳು ಇವೆ. ಇಲ್ಲಿ ಯಾವುದೇ ಚರಂಡಿ ವ್ಯವಸ್ಥೆ ಇಲ್ಲ. ಮನೆಯ ತ್ಯಾಜ್ಯ ನೀರು ಕೂಡಾ ರಸ್ತೆಯನ್ನು ಸೇರುತ್ತದೆ. ಇದರಿಂದಾಗಿ ಈ ಪ್ರದೇಶ ಗಬ್ಬೆದ್ದು ನಾರುತ್ತಿದೆ.
ಸಂಬಂಧಪಟ್ಟ ಅಧಿಕಾರಿಗಳು ಗಮನ ನೀಡಿ ಇಲ್ಲಿಯ ರಸ್ತೆಯಲ್ಲಿ ನಿರ್ಮಾಣವಾದ ತಗ್ಗುಗಳನ್ನು ಮುಚ್ಚುವುದರ ಜೊತೆಗೆ ರಸ್ತೆಯ ಎರಡು ಬದಿಗೆ ಬೀದಿ ದೀಪಗಳನ್ನು ಅಳವಡಿಸಬೇಕುವಿಕಾಸ ಹೂಗಾರ ಸ್ಥಳೀಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.