ADVERTISEMENT

ಮೂಲೆ ಸೇರಿದ ತ್ರಿಚಕ್ರ ವಾಹನ

Venugopala K.
Published 11 ಅಕ್ಟೋಬರ್ 2024, 7:05 IST
Last Updated 11 ಅಕ್ಟೋಬರ್ 2024, 7:05 IST
   

ಮಹಾಲಿಂಗಪುರ: ಅಂಗವಿಕಲರೊಬ್ಬರಿಗೆ ಆಸರೆಯಾಗಬೇಕಿದ್ದ ತ್ರಿಚಕ್ರ ವಾಹನವೊಂದು ಒಂದೂವರೆ ವರ್ಷದಿಂದ ಪುರಸಭೆ ಕಚೇರಿಯ ಮೂಲೆ ಸೇರಿದ್ದು, ನಿಂತಲ್ಲೇ ತುಕ್ಕು ಹಿಡಿಯುತ್ತಿದೆ.

2022-23ನೇ ಸಾಲಿನ ಎಸ್‍ಎಫ್‍ಸಿ ಮುಕ್ತನಿಧಿ ಶೇ 5ರ ಅನುದಾನದ ಅಂಗವಿಕಲರಿಗೆ ಪೂರೈಸಲು ₹1.34 ಲಕ್ಷ ವೆಚ್ಚ ಮಾಡಿ ಟಿವಿಎಸ್ ಸ್ಕೂಟಿ ಖರೀದಿಸಲಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರಿನ ಲಾವಣ್ಯ ಎಂಟರ್‌ಪ್ರೈಸಸ್‌ನವರು 2023ರ ಮಾರ್ಚ್ ತಿಂಗಳಲ್ಲಿ ಇದನ್ನು ಪೂರೈಸಿದ್ದಾರೆ. ಆದರೆ, ಅರ್ಹ ಫಲಾನುಭವಿಯನ್ನು ಆಯ್ಕೆ ಮಾಡಿ ವಿತರಣೆಗೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿಲ್ಲ.

ಲಕ್ಷಾಂತರ ಬೆಲೆ ಬಾಳುವ ಈ ವಾಹನ ಅನಾಥವಾಗಿ ನಿಂತಿದೆ. ತುಕ್ಕು ಹಿಡಿದಿರುವುದನ್ನು ಗಮನಿಸಿದರೆ ಮುಂದೆ ಅಂಗವಿಕಲರಿಗೆ ವಿತರಿಸಿದರೂ ಪ್ರಯೋಜನಕ್ಕೆ ಬರುತ್ತದೆಯೇ ಎಂಬ ಪ್ರಶ್ನೆ ಎದುರಾಗುತ್ತದೆ.

ADVERTISEMENT

ವಾಹನ ವಿತರಣೆಯಾಗಿದ್ದರೆ ಅಂಗವಿಕಲರಿಗೆ ಅನುಕೂಲವಾದರೂ ಆಗುತ್ತಿತ್ತು. ಫಲಾನುಭವಿಯನ್ನು ಆಯ್ಕೆ ಮಾಡಿ ವಾಹನ ವಿತರಣೆ ಮಾಡಲು ಮುಂದಾದರೂ ದುರಸ್ತಿ ಮಾಡಿಸಬೇಕಾಗುತ್ತದೆ. ಇದಕ್ಕೆ ಪುರಸಭೆ ಹಣ ನೀಡಬೇಕು, ಇಲ್ಲವಾದರೆ, ಫಲಾನುಭವಿ ಮೇಲೆ ಹೊರೆ ಬೀಳುತ್ತದೆ. ಇನ್ನೂ ತಡವಾದರೆ ವಾಹನ ಬಳಕೆಗೆ ಬಾರದಂತಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.

ಹಲವಾರು ಅಂಗವಿಕಲರು ಸೌಲಭ್ಯಕ್ಕಾಗಿ ಕಚೇರಿಗಳಿಗೆ ಅಲೆದಾಡುತ್ತಾರೆ. ತ್ರಿಚಕ್ರ ವಾಹನ ಸಿಕ್ಕರೆ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ. ಹಲವೆಡೆ ಸೌಲಭ್ಯ ನೀಡಲು ವಾಹನಗಳಿಲ್ಲ. ಆದರೆ, ಇಲ್ಲಿ ವಾಹನವಿದ್ದರೂ ಅಧಿಕಾರಿಗಳ ನಿರ್ಲಕ್ಷದಿಂದ ವಿತರಣೆಯಾಗಿಲ್ಲ.

‘ಅಂಗವಿಕಲರಿಗೆ ಸರಿಯಾಗಿ ಸೌಲಭ್ಯಗಳು ತಲುಪುತ್ತಿಲ್ಲ. ಸರ್ಕಾರ ಅನುದಾನ ನೀಡಿದರೂ, ಅದನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿಲ್ಲ. ಮೂಲೆ ಸೇರಿರುವ ಈ ತ್ರಿಚಕ್ರ ವಾಹನವನ್ನು ಕೂಡಲೇ ಫಲಾನುಭವಿಯೊಬ್ಬರನ್ನು ಆಯ್ಕೆ ಮಾಡಿ ವಿತರಿಸಬೇಕು’ ಎಂದು ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ತೇರದಾಳ ಆಗ್ರಹಿಸಿದರು.

ಫಲಾನುಭವಿ ಆಯ್ಕೆಯಲ್ಲಿ ತೊಂದರೆಯಾಗಿದ್ದರಿಂದ ವಾಹನ ವಿತರಣೆ ಮಾಡಿಲ್ಲ. ನಗರೋ
ತ್ಥಾನ ಯೋಜನೆಯಡಿ ಕೆಲ ವಾಹನಗಳನ್ನು ವಿತರಿಸಲಾಗುತ್ತಿದ್ದು, ಆಗ ಇದನ್ನು ವಿತರಣೆ ಮಾಡಲಾಗುವುದು
ಈರಣ್ಣ ದಡ್ಡಿ, ಮುಖ್ಯಾಧಿಕಾರಿ, ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.