ಮಹಾಲಿಂಗಪುರ: ಪಟ್ಟಣದ ಎಪಿಎಂಸಿಯಿಂದ ಬಸವೇಶ್ವರ ವೃತ್ತದವರೆಗೆ ಲೋಕೋಪಯೋಗಿ ಇಲಾಖೆಯಿಂದ ನಡೆದಿರುವ ಚರಂಡಿ ನಿರ್ಮಾಣ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ ಎಂದು ಸಾರ್ವಜನಿಕರು ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿದರು.
‘ರಸ್ತೆಯ ಎರಡೂ ಬದಿಗೆ ಚರಂಡಿ ನಿರ್ಮಿಸಲಾಗುತ್ತಿದೆ. ಆದರೆ, ರಸ್ತೆ ಬದಿಗೆ ಚರಂಡಿ ನೇರವಾಗಿ ನಿರ್ಮಿಸದೇ ಅಂಕುಡೊಂಕಾಗಿ ನಿರ್ಮಿಸಲಾಗುತ್ತಿದೆ. ಇನ್ನೊಂದು ಬದಿಗೆ ಈಗಾಗಲೇ ಇರುವ ಚರಂಡಿಯನ್ನು ಬಿಟ್ಟು ಅದರ ಮಗ್ಗುಲಲ್ಲಿ ಹೊಸದಾಗಿ ಚರಂಡಿ ನಿರ್ಮಿಸಲಾಗುತ್ತಿದೆ. ಇದರಿಂದ ರಸ್ತೆ ಕಿರಿದಾಗಿ ಸಂಚಾರಕ್ಕೆ ಅಡೆತಡೆ ಆಗುತ್ತದೆ’ ಎಂದು ಸಾರ್ವಜನಿಕರು ಆರೋಪಿಸಿದರು.
ಲೋಕೋಪಯೋಗಿ ಇಲಾಖೆ ಅಧಿಕಾರಿ ಸರದಾರಅಲಿ ಮುಜಾವರ ಮಾತನಾಡಿ, ‘ಅಂದಾಜು ಪತ್ರಿಕೆ ಪ್ರಕಾರವೇ ರಸ್ತೆ ನಿರ್ಮಿಸಲಾಗಿದ್ದು, ಈಗ ಚರಂಡಿಯನ್ನೂ ನಿರ್ಮಿಸಲಾಗುತ್ತಿದೆ. ರಸ್ತೆ ಸ್ಪಲ್ಪ ವಕ್ರವಾಗಿದ್ದರಿಂದ ಚರಂಡಿಯೂ ಅದರ ಅಳತೆ ಪ್ರಮಾಣದಲ್ಲಿ ಇರುತ್ತದೆ. ಈಗಾಗಲೇ ಇರುವ ಚರಂಡಿ ಪಕ್ಕ ಹೆಚ್ಚುವರಿಯಾಗಿ ತಗ್ಗು ತೋಡಲಾಗಿದ್ದು, ಇದರಲ್ಲಿ ಈಗಿನ ಚರಂಡಿ ನೀರನ್ನು ಶೇಖರಿಸಿ ಅದೇ ಸ್ಥಳದಲ್ಲಿ ಹೊಸದಾಗಿ ಚರಂಡಿ ನಿರ್ಮಿಸಲಾಗುವುದು’ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್.ಗೊಂಬಿ, ಗುತ್ತಿಗೆದಾರ ಮಹಾದೇವ ಕಂಕಾಳೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.