ಬಾಗಲಕೋಟೆ: ‘ವಕ್ಫ್ ಬೋರ್ಡ್ ಗೆ ಬೆಂಬಲ ನೀಡುವ ಕೆಲವು ನಾಲಾಯಕ್ ಹಿಂದೂಗಳಿದ್ದಾರೆ, ಕೆಲವು ಹಿಜಡಾ ಹಿಂದೂಗಳಿದ್ದಾರೆ. ಈ ಶಬ್ದ ಬಳಸಬಾರದು; ನೋವಿನಿಂದ ಬಳಸುತ್ತಿದ್ದೇನೆ. ವಕ್ಫ್ ನಿಯಮ ಸಡಿಲಿಸುವುದಲ್ಲ, ವಕ್ಫ್ ಬೋರ್ಡ್ ರದ್ದು ಮಾಡಬೇಕು’ ಎಂದು ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ ಆಗ್ರಹಿಸಿದರು.
ವಿಜಯಪುರದಲ್ಲಿ ರೈತರಿಗೆ ವಕ್ಫ್ ಜಮೀನು ಎಂದು ವಕ್ಫ್ ಬೋರ್ಡ್ನಿಂದ ನೀಡಿರುವ ನೋಟಿಸ್ಗೆ ಸಂಬಂಧಿಸಿದಂತೆ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ನವರು ಮುಸ್ಲಿಂರನ್ನು ಓಲೈಸಲು ವಕ್ಫ್ ಬೋರ್ಡ್ ಮಾಡಿದ್ದಾರೆ. ಮುಂದೊಂದು ದಿನ ಅವರಿಗೂ ಮುಳುವಾಗುತ್ತದೆ’ ಎಂದರು.
‘ದೇಶದ ತುಂಬೆಲ್ಲ ವಕ್ಫ್ ಬೋರ್ಡ್ ಆಸ್ತಿ ಎಂದು ನೋಟಿಸ್ ನೀಡುತ್ತಿದ್ದಾರೆ. ನೂರಾರು ವರ್ಷಗಳ ಹಿಂದಿನ ದೇವಸ್ಥಾನಗಳ ಆಸ್ತಿಯನ್ನೂ ತಮ್ಮದು ಎನ್ನುತ್ತಿದ್ದಾರೆ. ಚಳಿಗಾಲ ಅಧಿವೇಶನದಲ್ಲಿ ತಿದ್ದುಪಡಿ ತರಲಿದ್ದಾರೆ. ತಿದ್ದುಪಡಿ ಬೇಡ, ದೇಶಕ್ಕೆ ವಕ್ಫ್ ಅವಶ್ಯಕತೆ ಇಲ್ಲ. ರದ್ದುಗೊಳಿಸುವಂತೆ ಒತ್ತಾಯಿಸುತ್ತೇನೆ’ ಎಂದರು.
‘ಅಜ್ಜ, ಮುತ್ತಜ್ಜನ ಕಾಲದಿಂದ ಉಳುಮೆ ಮಾಡುವ ಜಮೀನುಗಳಿಗೆ ನೋಟಿಸ್ ನೀಡಿದ್ದಾರೆ. ಅವರು ಹೇಳಿದರೆ ಆಸ್ತಿ ವಕ್ಫ್ನದ್ದು ಆಗುತ್ತದೆಯಾ’ ಎಂದು ಪ್ರಶ್ನಿಸಿದರು.
‘ಸಚಿವ ಜಮೀರ್ ಅಹ್ಮದ್ನದ್ದೇ ಉಪದ್ಯಾಪಿತನ. ಅವ ಹಿಂದೂಗಳ ಮೇಲೆ ಕೆಂಡ ಕಾರುವ ಮಾತನಾಡುತ್ತಾನೆ. ಅತ್ಯಂತ ಕೋಮುವಾದಿ. ಇವನನ್ನು ಕಾಂಗ್ರೆಸ್ ನಿಯಂತ್ರಣ ಮಾಡಬೇಕು. ಈಗಾಗಲೇ ಅವನ ಕಾರಿಗೆ ಕಲ್ಲು ಒಗೆದಿದ್ದಾರಂತೆ. ಜನರ ರೊಚ್ಚಿಗೇಳದಂತೆ ಎಚ್ಚರದಿಂದ ಇರಬೇಕು’ ಎಂದು ಭಾಂಡಗೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.