ADVERTISEMENT

ಮರಕುಂಬಿ ಪ್ರಕರಣದ 100 ಅಪರಾಧಿಗಳು ಬಳ್ಳಾರಿ ಜೈಲಿಗೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 15:29 IST
Last Updated 27 ಅಕ್ಟೋಬರ್ 2024, 15:29 IST
ಬಳ್ಳಾರಿ ಜೈಲು ಆವರಣ
ಬಳ್ಳಾರಿ ಜೈಲು ಆವರಣ   

ಬಳ್ಳಾರಿ: ದಶಕದ ಹಿಂದೆ ಗಂಗಾವತಿ ತಾಲ್ಲೂಕಿನ ಮರಕುಂಬಿಯಲ್ಲಿ ನಡೆದಿದ್ದ ಜಾತಿ ಸಂಘರ್ಷ ಪ್ರಕರಣದಲ್ಲಿ ಇತ್ತೀಚೆಗೆ ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ 101 ಅಪರಾಧಿಗಳ ಪೈಕಿ 100 ಜನರನ್ನು ಬಳ್ಳಾರಿ ಜೈಲಿಗೆ ರವಾನಿಸಲಾಗಿದೆ. 

ಒಟ್ಟು 101 ಅಪರಾಧಿಗಳ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹5 ಸಾವಿರ ದಂಡ ಹಾಗೂ ಇನ್ನುಳಿದ ಮೂವರಿಗೆ ಐದು ವರ್ಷ ಜೈಲು ಹಾಗೂ ತಲಾ ₹2 ಸಾವಿರ ದಂಡ ವಿಧಿಸಲಾಗಿತ್ತು. ಅದರಂತೆ 101 ಅಪರಾಧಿಗಳು ಬಳ್ಳಾರಿ ಜೈಲು ಸೇರಬೇಕಿತ್ತು. ಆದರೆ, ಶಿಕ್ಷೆಗೆ ಗುರಿಯಾಗಿದ್ದ ರಾಮಣ್ಣ ಭೋವಿ (40) ಎಂಬುವವರು ನ್ಯಾಯಾಲಯದ ಆದೇಶ ಪ್ರಕಟವಾದ ಮರುದಿನವೇ ಮೃತಪಟ್ಟರು. ಹೀಗಾಗಿ 100 ಮಂದಿಯನ್ನು ಸದ್ಯ ಬಳ್ಳಾರಿ ಜೈಲಿನಲ್ಲಿ ಇರಿಸಲಾಗಿದೆ.

ಇದರೊಂದಿಗೆ ಬಳ್ಳಾರಿ ಜೈಲಿನಲ್ಲಿ ಸದ್ಯ 485 ಮಂದಿಯನ್ನು ಬಂಧಿಸಿಟ್ಟಂತಾಗಿದೆ. ಜೈಲಿನಲ್ಲಿ ಈವರೆಗೆ 220 ಸಜಾ ಬಂಧಿಗಳಿದ್ದರು. ಈ ಸಂಖ್ಯೆ ಏಕಾಏಕಿ 330ಕ್ಕೆ ಏರಿದೆ.

ADVERTISEMENT

‘ಗಂಗಾವತಿ ತಾಲ್ಲೂಕು ಬಳ್ಳಾರಿ ಕೇಂದ್ರ ಕಾರಾಗೃಹದ ವ್ಯಾಪ್ತಿಗೆ ಒಳಪಡುತ್ತದೆ. ಮರಕುಂಬಿ ಪ್ರಕರಣದಲ್ಲಿ ತೀರ್ಪು ಪ್ರಕಟವಾಗುತ್ತಲೇ ಜೈಲಿನಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ನಮಗೆ ಸೂಚನೆಗಳು ಬಂದಿದ್ದವು. ಗುರುವಾರ ತಡರಾತ್ರಿ ಎಲ್ಲ ಅಪರಾಧಿಗಳನ್ನು ಬಳ್ಳಾರಿ ಜೈಲಿಗೆ ಕರೆತರಲಾಯಿತು. ಎಲ್ಲರನ್ನೂ ಪ್ರತ್ಯೇಕಿಸಿ ಜೈಲಿನ ಇತರ ಬಂಧಿಗಳೊಂದಿಗೆ ಇರಿಸಲಾಗಿದೆ’ ಎಂದು ಬಳ್ಳಾರಿ ಕೇಂದ್ರ ಕಾರಾಗೃಹದ ಅಧೀಕ್ಷಕಿ ಲತಾ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.