ಹೂವಿನಹಡಗಲಿ: ಪಟ್ಟಣದ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ ಗ್ರಾಹಕರೊಬ್ಬರ ಹಣವನ್ನು ಒಟಿಪಿ ಇಲ್ಲದೇ ಆನ್ಲೈನ್ ವಂಚಕರು ₹9.7 ಲಕ್ಷ ದೋಚಿರುವ ಘಟನೆ ಭಾನುವಾರ ಜರುಗಿದೆ.
ತಾಲ್ಲೂಕಿನ ನಂದಿಹಳ್ಳಿಯ ಕಂಠಿ ವಿರೂಪಾಕ್ಷ ಹಣ ಕಳೆದುಕೊಂಡಿರುವರು. ಎರಡು ದಿನಗಳ ಹಿಂದೆಯಷ್ಟೇ ಜಮೀನು ಮಾರಾಟದ ಹಣ ಇವರ ಖಾತೆಗೆ ಜಮೆ ಆಗಿತ್ತು. ಖರೀದಿದಾರರು ಇನ್ನಷ್ಟು ಹಣವನ್ನು ಜಮೆ ಮಾಡುವರಿದ್ದರು. ಈ ವೇಳೆ ಕೆನರಾ ಬ್ಯಾಂಕ್ ಲೋಗೋ ಇರುವ ಆ್ಯಪ್ನ ಲಿಂಕ್ ಇವರ ಮೊಬೈಲ್ಗೆ ಸಂದೇಶ ಬಂದಿದೆ. ಬ್ಯಾಂಕ್ ಸಂದೇಶವೆಂದು ತಿಳಿದು ಲಿಂಕ್ ಬಳಸಿ ಆ್ಯಪ್ ಡೌನ್ಲೋಡ್ ಮಾಡಿದ್ದಾರೆ. ನಂತರದ 30 ನಿಮಿಷದಲ್ಲಿ ಖಾತೆಯಲ್ಲಿದ್ದ ಹಣವೆಲ್ಲ ಖಾಲಿಯಾಗಿದೆ.
ಸೋಮವಾರ ಬೆಳಿಗ್ಗೆ ಹಣ ವರ್ಗಾವಣೆಗೆ ಮಾಡಲು ಮುಂದಾದಾಗ ಖಾತೆಯಲ್ಲಿಹಣ ಇಲ್ಲದಿರುವುದು ತಿಳಿದು, ಬ್ಯಾಂಕ್ಗೆ ಹೋಗಿ ವಿಚಾರಿಸಿದಾಗ ವಂಚನೆಯಾಗಿರುವುದು ತಿಳಿದಿದೆ.
ಈ ಕುರಿತು ವಿರೂಪಾಕ್ಷಿ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣವನ್ನು ಸೈಬರ್ ಕ್ರೈಂ ವಿಭಾಗಕ್ಕೆ ವರ್ಗಾಯಿಸಿದ್ದಾರೆ.
‘ಬ್ಯಾಂಕ್ ಸಂದೇಶವೆಂದು ತಿಳಿದು ಲಿಂಕ್ ಓಪನ್ ಮಾಡಿದೆ. ಅಷ್ಟರಲ್ಲಿ ಆನ್ ಲೈನ್ ವಂಚಕರು ಹಣ ಲಪಟಾಯಿಸಿದ್ದಾರೆ. ಆರ್ಥಿಕ ತೊಂದರೆ ಇದ್ದುದರಿಂದ ಜಮೀನು ಮಾರಾಟ ಮಾಡಿದ್ದೆ. ಹಣವನ್ನೆಲ್ಲ ಕಳ್ಳರು ದೋಚಿದ್ದಾರೆ’ ಎಂದು ವಿರೂಪಾಕ್ಷಿ ಅಳಲು ತೋಡಿಕೊಂಡರು.
ಬ್ಯಾಂಕ್ ಖಾತೆಗಳಿಗೆ ಕನಿಷ್ಠ ರಕ್ಷಣೆ ಇಲ್ಲವಾದರೆ ಗ್ರಾಹಕರು ಯಾವ ವಿಶ್ವಾಸದ ಮೇಲೆ ವ್ಯವಹರಿಸಬೇಕು. ಹಣ ವರ್ಗಾವಣೆಗೆ ಒಟಿಪಿ ಕಡ್ಡಾಯವಿದ್ದರೂ ಈ ಪ್ರಕರಣದಲ್ಲಿ ಒಟಿಪಿ ಇಲ್ಲದೇ ಲಕ್ಷಾಂತರ ಹಣ ಲಪಟಾಯಿಸಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.