ಸಂಡೂರು: ‘50 ವರ್ಷಗಳಿಂದ ಆಗದ ಸಂಡೂರಿನ ಅಭಿವೃದ್ಧಿಯನ್ನು ಕೇವಲ ಮೂರೂವರೆ ವರ್ಷಗಳಲ್ಲಿ ಮಾಡಿ ತೋರಿಸುತ್ತೇವೆ’ ಎಂದು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಭರವಸೆ ನೀಡಿದರು.
ಉಪಚುನಾವಣೆ ಹಿನ್ನೆಲೆ ಕ್ಷೇತ್ರದ ಕೃಷ್ಣಾನಗರ, ದೌಲತ್ಪುರ, ವೆಂಕಟಗಿರಿ, ಜೈಸಿಂಗ್ಪುರ, ಸಿದ್ದಾಪುರ, ಸುಶೀಲಾನಗರ, ನಾರಾಯಣಪುರ, ವಿಠಲನಗರ, ರಣಜಿತ್ ಪುರ, ನರಸಿಂಗಾಪುರ, ದೋಣಿಮಲೈ, ಭುಜಂಗ ನಗರಗಳಲ್ಲಿ ಪ್ರಚಾರ ನಡೆಸಿ ಅವರು ಮಾತನಾಡಿದರು.
‘ಸಂತೋಷ ಲಾಡ್, ತುಕಾರಾಂ ಅವರಿಗೆ ಸೇರಿ ಐದು ಬಾರಿ ಅವಕಾಶ ನೀಡಿದರೂ ಸಂಡೂರಿಗೆ ಬಸ್ ನಿಲ್ದಾಣ, ಸುಸಜ್ಜಿತ ಆಸ್ಪತ್ರೆ ಇಲ್ಲ. ಅವರು ಅಭಿವೃದ್ಧಿಗೆ ಒತ್ತು ನೀಡಿಲ್ಲ. ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕರೇ ಇಲ್ಲದಿದ್ದರೂ ಸಂಡೂರಿನಿಂದ ಕೂಡ್ಲಿಗಿ, ತೋರಣಗಲ್ಲು, ಹೊಸಪೇಟೆ ಸಂಪರ್ಕಿಸುವ ರಸ್ತೆಗಳನ್ನು ನಿರ್ಮಿಸಿರುವುದು ಬಿಜೆಪಿಯ ಅವಧಿಯಲ್ಲಿ. ವಾಲ್ಮೀಕಿ ನಿಗಮದ ಹಣದಲ್ಲಿ ತುಕಾರಾಂ ಸಂಸದರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಈ ಬಾರಿ ಬಿಜೆಪಿಗೆ ಮತ ನೀಡುವ ಮೂಲಕ ಆಶೀರ್ವದಿಸಬೇಕು’ ಎಂದು ಮನವಿ ಮಾಡಿದರು.
ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ, ಮಾಜಿ ಸಚಿವ ಬಿ. ಶ್ರೀರಾಮುಲು ಮಾತನಾಡಿದರು. ಕುಡಚಿ ಮಾಜಿ ಶಾಸಕ ಪಿ.ರಾಜೀವ್, ರಾಜ್ಯ ಬಿಜೆಪಿ ಕಾರ್ಯದರ್ಶಿ ಕೆ.ಎಸ್.ದಿವಾಕರ್, ಪ್ರಮುಖರಾದ ರಾಮಚಂದ್ರ ರೆಡ್ಡಿ, ಜಿ.ಟಿ.ಪಂಪಾಪತಿ, ನಾನಾಸಾಹೇಬ್ ನಿಕ್ಕಂ, ಕುಮಾರ್ ನಾಯ್ಕ್ , ದೌಲತ್ಪುರ ಮಲ್ಲಿಕಾರ್ಜುನ, ಪೂಜಾರಿ ವೆಂಕಪ್ಪ, ಸುರೇಶ, ಮಲ್ಲಿಕಾರ್ಜುನ, ತಾಯಪ್ಪ, ಜಂಬಣ್ಣ, ಸತೀಶ, ರಾಮಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.