ತೋರಣಗಲ್ಲು: ಇಲ್ಲಿನ ಜಿಂದಾಲ್ ಉಕ್ಕು ಮತ್ತು ಕಬ್ಬಿನ ಕಾರ್ಖಾನೆಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಭೂಮಿ ಮಾರಾಟ ಮಾಡಲು ನಿರ್ಧರಿಸಿರುವ ಸರ್ಕಾರದ ನಿರ್ಧಾರ ಖಂಡಿಸಿ ಡಿವೈಎಫ್ಐ ಸಂಘಟನೆ ಮುಖಂಡರು ಬಳ್ಳಾರಿಯಿಂದ ತೋರಣಗಲ್ಲು ಗ್ರಾಮದವರೆಗೂ ಪಾದಯಾತ್ರೆ ನಡೆಸಿದರು.
ಸಂಘಟನೆಯ ರಾಜ್ಯ ಅಧ್ಯಕ್ಷೆ ಲವಿತ್ರ ಮಾತನಾಡಿ, ‘3,667 ಎಕರೆ ಭೂಮಿಯನ್ನು ಜಿಂದಾಲ್ಗೆ ಮಾರಾಟ ಮಾಡಲು ರಾಜ್ಯ ಸರ್ಕಾರವು ಈಚೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸೂಚಿಸಿರುವುದು ಸರಿಯಲ್ಲ. ತಕ್ಷಣ ಈ ನಿರ್ಧಾರವನ್ನು ಹಿಂಪಡೆಯಬೇಕು. ಬೆಲೆ ಬಾಳುವ ಕೃಷಿ ಭೂಮಿಯನ್ನು ಕಾರ್ಖಾನೆಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡದೆ, ಹೆಚ್ಚಿನ ದರದಲ್ಲಿ, ಗುತ್ತಿಗೆ ಆಧಾರದಲ್ಲಿ ಮುಂದುವರಿಸಬೇಕು. ಜಿಂದಾಲ್ ಕಂಪನಿಯು ಸ್ಥಳಿಯರಿಗೆ ಉದ್ಯೋಗ ನೀಡದೇ ವಂಚಿಸಿದ್ದು, ಸರ್ಕಾರವು ಜಿಂದಾಲ್ ವಿಚಾರದಲ್ಲಿ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರಿ, ಜಿಲ್ಲಾ ಘಟಕದ ಅಧ್ಯಕ್ಷ ಯು.ಎರ್ರಿಸ್ವಾಮಿ, ಮುಖಂಡರಾದ ಹನುಮಂತಪ್ಪ, ತಿಪ್ಪೇರುದ್ರ, ಮಸ್ತಾನ್ ಸಾಬ್, ನವೀನ, ಕಾಲುಬಾ, ತಿಮ್ಮಪ್ಪ, ಎ.ಸ್ವಾಮಿ, ನಾಗಭೂಷಣ, ಮಂಜುನಾಥ, ಎಂ.ತಿಪ್ಪೇಸ್ವಾಮಿ ಇದ್ದರು.
ಶನಿವಾರ ಬೆಳಗ್ಗೆ ಬಳ್ಳಾರಿ ನಗರದಿಂದ ಆರಂಭವಾದ ಪಾದಯಾತ್ರೆ, ಕುಡತಿನಿ ಮಾರ್ಗವಾಗಿ ಭಾನುವಾರ ತೋರಣಗಲ್ಲು ಗ್ರಾಮದ ಜಿಂದಾಲ್ನ ಹಳೆಯ ಗೇಟ್ವರೆಗೂ ಸಾಗಿ ಮುಕ್ತಾಯ ಕಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.