ADVERTISEMENT

ಹಗರಿಬೊಮ್ಮನಹಳ್ಳಿ | ಸರ್ಕಾರಿ ನಿವೇಶನ ಒತ್ತುವರಿ: ಆರೋಪ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 14:12 IST
Last Updated 2 ಜನವರಿ 2024, 14:12 IST
ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದಲ್ಲಿನ ಕೂಸಿನ ಮನೆಗೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಗಿರಿಜಾಶಂಕರ ಭೇಟಿನೀಡಿ ಪರಿಶೀಲಿಸಿದರು
ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದಲ್ಲಿನ ಕೂಸಿನ ಮನೆಗೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಗಿರಿಜಾಶಂಕರ ಭೇಟಿನೀಡಿ ಪರಿಶೀಲಿಸಿದರು   

ಹಗರಿಬೊಮ್ಮನಹಳ್ಳಿ: ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಸರ್ಕಾರಿ ನಿವೇಶನ ಒತ್ತುವರಿ ಮಾಡಿಕೊಂಡು ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ ಎಂದು ಅಹಿಂದ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬುಡ್ಡಿ ಬಸವರಾಜ ಆರೋಪಿಸಿದರು.

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಸರ್ವೇ ನಂಬರ್ 288 ಎ/2 ಭೂಮಿ ಸರ್ಕಾರಕ್ಕೆ ಸೇರಿದೆ, ಕಟ್ಟಡ ನಿರ್ಮಿಸುವಾಗ ಪುರಸಭೆಯಿಂದ ಪರವಾನಿಗೆ ಪಡೆಯುವುದಕ್ಕೆ ಮತ್ತು ವಿದ್ಯುತ್ ಸಂಪರ್ಕ ಪಡೆಯಲು ಎನ್‍ಒಸಿ ಪಡೆಯುವಾಗ ಯಾವ ದಾಖಲೆ ಸೃಷ್ಟಿಸಿ ತೆಗೆದುಕೊಂಡಿದ್ದಾರೋ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ನಿವೇಶನಕ್ಕೆ ಸಂಬಂಸಿದಂತೆ ಮಾಹಿತಿ ಹಕ್ಕಿನ ಮೂಲಕ ಅಧಿಕೃತ ದಾಖಲೆಗಳನ್ನು ಪಡೆದಿದ್ದೇನೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೃಷಿ ಭೂಮಿಯನ್ನು ಪರಿವರ್ತಿಸುವ ವಸತಿ ಉದ್ಧೇಶಕ್ಕೆ ಪಡೆದು ವಾಣಿಣ್ಯ ಸಂಕೀರ್ಣ ನಿರ್ಮಿಸಲಾಗಿದೆ ಎಂದರು.

ADVERTISEMENT

ಸರ್ಕಾರಕ್ಕೆ ಸೇರಿದ ನಿವೇಶನ ಸರ್ವೆ ನಡೆಸುವಂತೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಮೂರು ಬಾರಿ ನೋಟಿಸ್ ನೀಡಿದರೂ ಸರ್ವೇ ಕಾರ್ಯಕ್ಕೆ ಮುಂದಾಗಿಲ್ಲ. ಈ ಕುರಿತಂತೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವೇದಿಕೆ ತಾಲ್ಲೂಕು ಘಟಕದ ಸಂಚಾಲಕ ಲಿಂಗರಾಜ ಯಾದವ್, ಜನವಾದಿ ಮಹಿಳಾ ಸಂಘಟನೆಯ ತಾಲ್ಲೂಕು ಘಟಕದ ಕಾರ್ಯದರ್ಶಿ ಸರ್ದಾರ ಹುಲಿಗೆಮ್ಮ, ಸಂಚಾಲಕಿ ರೇಣುಕಾ, ಬಂಟರ ಸೋಮಪ್ಪ, ಕೆ.ವಿ.ಎಂ.ವಿಶ್ವನಾಥ, ಯಡ್ರಮ್ಮನಹಳ್ಳಿ ಮರಿಯಪ್ಪ, ಬಣಕಾರ ರಮೇಶ್ ಇದ್ದರು.

ಮಾರ್ಚ್ ಅಂತ್ಯಕ್ಕೆ ಕೂಸಿನ ಮನೆ ಪ್ರಾರಂಭ ಕುರುಗೋಡು: ಜನವರಿ ಮೊದಲ ವಾರದಲ್ಲಿ ಸಿರಿಗೇರಿ ಮತ್ತು ಕರೂರು ಗ್ರಾಮದಲ್ಲಿನ ಕೂಸಿನ ಮನೆ ಪ್ರಾರಂಭಗೊಳ್ಳಲಿವೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗಿರಿಜಾಶಂಕರ್ ಹೇಳಿದರು. ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದಲ್ಲಿನ ಕೂಸಿನ ಮನೆ ಕೇರ್ ಟೇಕರ್ಸ್ ತರಬೇತಿ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದ ನಂತರ ಅವರು ಮಾತನಾಡಿದರು. ಮಾರ್ಚ್ ಅಂತ್ಯದೊಳಗೆ ಸಿರುಗುಪ್ಪ ತಾಲ್ಲೂಕಿನ 27 ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಕೂಸಿನ ಮನೆಗಳು ಪ್ರಾರಂಭಗೊಳ್ಳಲಿವೆ. ಕೇಂದ್ರದಲ್ಲಿ ಮಕ್ಕಳನ್ನು ಆರೈಕೆ ಮಾಡಲು ಒಟ್ಟು ಉದ್ಯೋಗ ಖಾತ್ರಿಯಲ್ಲಿ ಹೆಸರು ನೋಂದಾಯಿಸಿ 80 ಮಹಿಳೆಯರನ್ನು ಗುರುತಿಸಿ ಅವರಿಗೆ ಕೇರ್ ಟೇಕರ್ಸ್ ತರಬೇತಿ ನೀಡಲಾಗುತ್ತಿದೆ. ಅವರು ಕೇಂದ್ರದಲ್ಲಿನ ಮಕ್ಕಳ ಆರೈಕೆ ಮಾಡಲಿದ್ದಾರೆ ಎಂದರು. ಮೈಸೂರು ಅಬ್ದುಲ್ ನಜೀರ್ ತರಬೇತಿ ಕೇಂದ್ರದ ಉಮೇಶ್ ನರೇಗಾ ಸಹಾಯಕ ನಿರ್ದೇಶಕ ಮನೋಹರ್ ಮತ್ತು ಅಭಿವೃದ್ಧಿ ಅಧಿಕಾರಿ ಉಪ್ಪಾರ ರಾಮಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.