ADVERTISEMENT

ಕುರುಗೋಡು: ಗಮನ ಸೆಳೆದ ಪೀರ ದೇವರುಗಳ ಕಡೆ ಸವಾರಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 6:30 IST
Last Updated 30 ಜುಲೈ 2023, 6:30 IST
ಕುರುಗೋಡಿನಲ್ಲಿ ಶನಿವಾರ ಪೀರಲ ದೇವರುಗಳ ಕೊನೆ ಸವಾರಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು
ಕುರುಗೋಡಿನಲ್ಲಿ ಶನಿವಾರ ಪೀರಲ ದೇವರುಗಳ ಕೊನೆ ಸವಾರಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು   

ಕುರುಗೋಡು: ಪಟ್ಟಣದಲ್ಲಿ ಮೊಹರಂ ಹಬ್ಬದ ಅಂಗವಾಗಿ ಪೀರಲ ದೇವರುಗಳ ಕಡೆ ಸವಾರಿ ಮೆರವಣಿಗೆ ಶನಿವಾರ ಸಡಗರ ಸಂಭ್ರಮದಿಂದ ಜರುಗಿತು.

ಮೊಹರಂ ಹಬ್ಬದ ಅಂಗವಾಗಿ ಶುಕ್ರವಾರ ರಾತ್ರಿ ಪಟ್ಟಣದ ಏಳು ಮಸೀದಿಗಳಲ್ಲಿ ಪ್ರತಿಷ್ಠಾಪಿಸಿದ್ದ ವಿವಿಧ ಹೆಸರಿನ ಪೀರಲ ದೇವರುಗಳಿಗೆ ಭಕ್ತರು ಕೆಂಪುಸಕ್ಕರೆ ಮತ್ತು ಮಾದಲಿ ಅರ್ಪಿಸಿ ಹರಕೆ ತೀರಿಸಿದರು. ಕೆಲವು ಭಕ್ತರು ಮಸೀದಿಗಳ ಮುಂದೆ ಹಾಕಿದ್ದ ಅಗ್ನಿ ಕುಂಡದಲ್ಲಿ ಉಪ್ಪು ಮತ್ತು ಕಟ್ಟಿಗೆ ಸಮರ್ಪಿಸಿ ಭಕ್ತಿ ಮೆರೆದರು.

ಕೆಲವು ಭಕ್ತರು ಹುಲಿ ವೇಶ ಧರಿಸಿ ಹರಕೆ ತೀರಿಸಿದರೆ ಇನ್ನೂ ಕೆಲವರು ಮಸೀದಿಗಳ ಮುಂದೆ ತೋಡಿದ ಅಲಾಯಿ ಕುಣಿಯಲ್ಲಿನ ಬೆಂಕಿಯ ಕೆಂಡದ ಮೇಲೆ ನಡೆಯುವ ಮೂಲಕ ಭಕ್ತಿಯ ಪರಾಕಾಷ್ಟೆಯನ್ನು ತಲುಪಿದ ದೃಶ್ಯ ಕಂಡುಬಂತು.

ADVERTISEMENT

ಶನಿವಾರ ಸಂಜೆ ಪೀರಲ ದೇವರುಗಳ ಕೊನೆಯ ಸವಾರಿಗೆ ಸಿದ್ದವಾಗಿ ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನದ ಮುಂಭಾಗದ ಬಯಲಿನಲ್ಲಿ ಸೇರಿದ ಸಂದರ್ಭದಲ್ಲಿ ದೇವರುಗಳ ಮೆರವಣಿಗೆಯ ಸೊಬಗನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.

ಪೀರಲ ದೇವರುಗಳಿಗೆ ಮಂಡಕ್ಕಿ ಮತ್ತು ಬೆಲ್ಲ ಎಸೆದು ಭಕ್ತಿ ಮೆರೆದರು. ಕೆಲವು ಜನರು ಹಲಗೆ ಬಡಿತದ ತಾಳಕ್ಕೆ ಹೆಜ್ಜೆಹಾಕುತ್ತಿರುವ ದೃಶ್ಯ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.