ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ.
ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೆ, ಉಪ ಮೇಯರ್ ಸ್ಥಾನ ಹಿಂದುಳಿದ ವರ್ಗ–ಮಹಿಳೆಗೆ ಮೀಸಲಾಗಿದೆ. ಒಟ್ಟು 39 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್ 21 ಸ್ಥಾನಗಳನ್ನು ಗೆದ್ದಿತ್ತು. ಇದರ ಜತೆಗೆ, ಪಕ್ಷೇತರರಾಗಿ ಗೆದ್ದಿದ್ದ ಐವರು ಸದಸ್ಯರು ಚುನಾವಣೆ ನಂತರ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಹೀಗಾಗಿ ಪಾಲಿಕೆಯಲ್ಲಿ ಕಾಂಗ್ರೆಸ್ ಒಟ್ಟು 26 ಸ್ಥಾನಗಳನ್ನು ಹೊಂದಿದೆ. ಬಿಜೆಪಿ 13 ಸದಸ್ಯರನ್ನು ಹೊಂದಿದ್ದು, ಬಹುಮತದ ಕೊರತೆ ಎದುರಿಸುತ್ತಿದೆ.
ಪಾಲಿಕೆಯಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್ನಿಂದ ಮೇಯರ್ ಸ್ಥಾನಕ್ಕೆ ನಾಲ್ವರು ಆಕಾಂಕ್ಷಿಗಳಿದ್ದರೆ, ಉಪ ಮೇಯರ್ ಸ್ಥಾನಕ್ಕೆ ಇಬ್ಬರು ಪೈಪೋಟಿ ನಡೆಸುತ್ತಿದ್ದಾರೆ. ಸಂಖ್ಯಾಬಲ ಇಲ್ಲದಿದ್ದರೂ ಬಿಜೆಪಿ, ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಆದರೆ, ಅದು ಸಾಂಕೇತಿಕ ಹೋರಾಟ ಮಾತ್ರ.
ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ನಲ್ಲಿ ತೀವ್ರ ಪೈಪೋಟಿ ಎದುರಾಗಿದ್ದು, ಪಕ್ಷನಿಷ್ಠರು, ಪಕ್ಷೇತರರು, ಹಿರಿಯರು ಎಂಬೆಲ್ಲ ಸಂಗತಿಗಳು ಕೆಲಸ ಮಾಡುತ್ತಿವೆ. 18ನೇ ವಾರ್ಡ್ನಿಂದ ಗೆದ್ದಿದ್ದ ಮುಲ್ಲಂಗಿ ನಂದೀಶ್, 3ನೇ ವಾರ್ಡ್ನಿಂದ ಗೆದ್ದಿದ್ದ ಮುಂಡ್ಲೂರು ಪ್ರಭಂಜನ್ ನಡುವೆ ತುರುಸಿನ ಪೈಪೋಟಿ ನಡೆಯುತ್ತಿದೆ. ಇದರ ಮಧ್ಯೆ, 20ನೇ ವಾರ್ಡ್ನ ಪೇರಮ್ ವಿವೇಕ್, 23ನೇ ವಾರ್ಡ್ನ ಪಿ.ಗಾದೆಪ್ಪ ಅವರೂ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಮೇಯರ್ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ‘ನಾಮಪತ್ರ ಸಲ್ಲಿಸಲು ಪಕ್ಷ ಅಂತಿಮ ಕ್ಷಣದಲ್ಲಿ ಯಾರಿಗೆ ಸೂಚನೆ ನೀಡುತ್ತದೆಯೋ ಗೊತ್ತಿಲ್ಲ. ಆಗಲೇ ಅಭ್ಯರ್ಥಿ ಯಾರೆಂದು ನಮಗೂ ತಿಳಿಯಲಿದೆ’ ಎನ್ನುತ್ತಾರೆ ಪಕ್ಷದ ಮುಖಂಡರು.
ಉಪ ಮೇಯರ್ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿದ್ದು, ಕಾಂಗ್ರೆಸ್ನಲ್ಲಿ ಕವಿತಾ ಮತ್ತು ಕೆ. ಮಂಜುಳಾ ಉಮಾಪತಿ ಆಕಾಂಕ್ಷಿಗಳಾಗಿದ್ದಾರೆ.
ಅಭ್ಯರ್ಥಿಗಳ ಆಯ್ಕೆಗಾಗಿ ಕಾಂಗ್ರೆಸ್ ಈಗಾಗಲೇ ಸರಣಿ ಸಭೆ ನಡೆಸಿದೆ. ಬುಧವಾರ ನಗರಕ್ಕೆ ಆಗಮಿಸಿದ್ದ ಕಾಂಗ್ರೆಸ್ ವೀಕ್ಷಕರು ಪ್ರತಿಯೊಬ್ಬ ಕಾರ್ಪೊರೇಟರ್ಗಳ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇದಾದ ಬಳಿಕ ಶಾಸಕರು, ಸಂಸತ್ ಸದಸ್ಯರು ಪ್ರತ್ಯೇಕವಾಗಿ ಸಭೆ ನಡೆಸಿ ಚರ್ಚೆ ಮಾಡಿದ್ದಾರೆ.
ಬಿಜೆಪಿಯು ಮೇಯರ್ ಸ್ಥಾನಕ್ಕೆ ಕೋನಂಕಿ ತಿಲಕ್ ಅವರನ್ನು ಮತ್ತು ಉಪ ಮೇಯರ್ ಸ್ಥಾನಕ್ಕೆ ಸುರೇಖಾ ಮಲ್ಲನಗೌಡ ಅವರನ್ನು ಕಣಕ್ಕಿಳಿಸುತ್ತಿದೆ.
44 ಮತ: ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಒಟ್ಟು 39 ಕಾರ್ಪೋರೇಟರ್ಗಳು, ಪಾಲಿಕೆ ವ್ಯಾಪ್ತಿಯ ಇಬ್ಬರು ಶಾಸಕರು, ಒಬ್ಬ ಪರಿಷತ್ ಸದಸ್ಯ, ಇಬ್ಬರು ಸಂಸತ್ (ಲೋಕಸಭೆ, ರಾಜ್ಯಸಭೆ) ಸದಸ್ಯರು ಸೇರಿ ಒಟ್ಟು 44 ಮಂದಿ ಮತ ಚಲಾವಣೆ ಮಾಡಲಿದ್ದಾರೆ. ಇಬ್ಬರು ಶಾಸಕರು, ಇಬ್ಬರು ಸಂಸತ್ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಬಳಿ 30 ಮತಗಳಿವೆ. ಒಬ್ಬ ಪರಿಷತ್ ಸದಸ್ಯರ ಬೆಂಬಲದೊಂದಿಗೆ ಬಿಜೆಪಿ ಬಳಿ 14 ಮತಗಳಿವೆ. ಹೀಗಾಗಿ ಪಾಲಿಕೆಯಲ್ಲಿ ಕಾಂಗ್ರೆಸ್ ಬಹುಮತ ಹೊಂದಿದ್ದು, ಆ ಪಕ್ಷದವರೇ ಮೇಯರ್, ಉಪ ಮೇಯರ್ ಆಗಿ ಆಯ್ಕೆಯಾಗಲಿದ್ದಾರೆ.
ಬೆಳಗ್ಗೆ 10.30ಕ್ಕೆ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದ್ದು, 12.30ರ ಹೊತ್ತಿಗೆ ನಾಮಪತ್ರ ಪರಿಶೀಲನೆ ಕಾರ್ಯ ಪೂರ್ಣಗೊಳ್ಳಲಿದೆ. ನಂತರ ಮತದಾನ ನಡೆಯಲಿದೆ.
ಯಾವ ಗೊಂದಲವೂ ಇಲ್ಲ ಪಕ್ಷದ ಎಲ್ಲಾ ಕಾರ್ಪೊರೇಟರ್ಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಒಬ್ಬೊಬ್ಬರನ್ನೇ ಕರೆದು ಮಾತನಾಡಿಸಿದ್ದೇವೆ. ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ಎಲ್ಲರೂ ಹೇಳಿದ್ದಾರೆ. ಹಿಂದಿನ ಚುನಾವಣೆಗಳಂತೆ ಈ ಬಾರಿ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷ ಸೂಚಿಸುವವರು ಮೇಯರ್ ಆಗಿ ಆಯ್ಕೆಯಾಗಲಿದ್ದಾರೆ. ಚುನಾವಣೆ ಸುಸೂತ್ರವಾಗಿ ನೆರವೇರಲಿದೆ.– ನಾರಾಯಣಸ್ವಾಮಿ ಕಾಂಗ್ರೆಸ್ ವೀಕ್ಷಕ
ಬೆಂಬಲ ಕೋರಿಲ್ಲ ಕೋನಂಕಿ ತಿಲಕ್ ಅವರನ್ನು ಮೇಯರ್ ಸ್ಥಾನಕ್ಕೆ ಮತ್ತು ಸುರೇಖಾ ಮಲ್ಲನಗೌಡ ಅವರನ್ನು ಉಪ ಮೇಯರ್ ಸ್ಥಾನದ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದ್ದೇವೆ. ಪಕ್ಷೇತರರೊಬ್ಬರು ಮೇಯರ್ ಚುನಾವಣೆಗೆ ಆಕಾಂಕ್ಷಿಯಾಗಿದ್ದಾರೆ. ಅವರು ನಮ್ಮ ಬೆಂಬಲ ಕೇಳಿಲ್ಲ. ಬಿಜೆಪಿ ಬೆಂಬಲ ಕೋರಿದ್ದರೆ ಪರಿಶೀಲಿಸಬಹುದಿತ್ತು. ಆದರೆ ಅವರು ಕಾಂಗ್ರೆಸ್ನೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ. ಅವರಿಗೆ ನಮ್ಮ ಬೆಂಬಲ ಇಲ್ಲ.ಅನಿಲ್ ಕುಮಾರ್ ಮೋಕಾ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.