ADVERTISEMENT

ಶೀಘ್ರದಲ್ಲೇ ಬಳ್ಳಾರಿ ಬಂದ್: ಯು.ಬಸವರಾಜ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 13:30 IST
Last Updated 22 ಸೆಪ್ಟೆಂಬರ್ 2024, 13:30 IST
ಕುಡತಿನಿಯಲ್ಲಿ ಭೂಸಂತ್ರಸ್ತರು, ವಿವಿಧ ಸಂಘಟನೆಗಳಿಂದ ನಿರಂತರವಾಗಿ ನಡೆಯುತ್ತಿರುವ ಹೋರಾಟದ ಸಭೆಯಲ್ಲಿ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ್ ಮಾತನಾಡಿದರು
ಕುಡತಿನಿಯಲ್ಲಿ ಭೂಸಂತ್ರಸ್ತರು, ವಿವಿಧ ಸಂಘಟನೆಗಳಿಂದ ನಿರಂತರವಾಗಿ ನಡೆಯುತ್ತಿರುವ ಹೋರಾಟದ ಸಭೆಯಲ್ಲಿ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ್ ಮಾತನಾಡಿದರು   

ಕುಡತಿನಿ (ತೋರಣಗಲ್ಲು): ಕೈಗಾರಿಕೆ ಸ್ಥಾಪನೆಯ ಉದ್ದೇಶಕ್ಕಾಗಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರಿಂದ ವಶಪಡಿಸಿಕೊಂಡ ಜಮೀನುಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಇಲ್ಲವೆ ಜಮೀನುಗಳನ್ನು ವಾಪಸ್‌ ನೀಡಲು ಒತ್ತಾಯಿಸಿ, ನಿರುದ್ಯೋಗ ಭತ್ಯೆಗಾಗಿ ಆಗ್ರಹಿಸಿ ಭೂ ಸಂತ್ರಸ್ತರು, ವಿವಿಧ ಸಂಘಟನೆಗಳಿಂದ ನಡೆಸುವ ಹೋರಾಟವು ಭಾನುವಾರಕ್ಕೆ 645 ದಿನಗಳನ್ನು ಪೂರೈಸಿತು.

ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ್ ಮಾತನಾಡಿ, ‘ಕುಡತಿನಿ, ಸುತ್ತಲಿನ ಗ್ರಾಮಗಳ ಬಡ ರೈತರಿಂದ 2010ರಲ್ಲಿ ಅರ್ಸೇಲ್‍ರ ಮಿತ್ತಲ್, ಬ್ರಾಹ್ಮಿಣಿ ಸ್ಟೀಲ್ ಹಾಗೂ ಎನ್‍ಎಂಡಿಸಿ ಕಂಪನಿಗಳು ಕೈಗಾರಿಕೆಗಳ ಸ್ಥಾಪನೆಯ ಉದ್ದೇಶಕ್ಕಾಗಿ ಮೋಸದ ಭೂ ಬೆಲೆ, ಅತಿ ಕಡಿಮೆ ಬೆಲೆಗೆ 13ಸಾವಿರ ಎಕರೆಯ ಭೂಮಿ ವಶಪಡಿಸಿಕೊಂಡು ಸುಮಾರು 14 ವರ್ಷಗಳಾದರೂ ಕೈಗಾರಿಕೆಗಳನ್ನು ಸ್ಥಾಪಿಸಿಲ್ಲ. ರೈತರಿಗೆ ಉದ್ಯೊಗ ಭದ್ರತೆ ಒದಗಿಸಿಲ್ಲ. ರಾಜ್ಯ ಸರ್ಕಾರವು ಮೋಸದ ಭೂ ಬೆಲೆ ರದ್ದುಪಡಿಸಿ ಕೋರ್ಟ್ ಆದೇಶದಂತೆ ಹೊಸ ಭೂ ಬೆಲೆಯನ್ನು ನಿಗದಿಪಡಿಸಿ ಪ್ರತಿ ರೈತ ಕುಟುಂಬಕ್ಕೆ ₹1.60 ಲಕ್ಷಕ್ಕಿಂತ ಹೆಚ್ಚಿನ ಭೂ ಬೆಲೆಯನ್ನು ನೀಡಬೇಕು’ ಎಂದರು.

ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲ ಗ್ರಾಮಗಳ ರೈತರಿಂದ, ವಿವಿಧ ಸಂಘಟನೆಗಳ ಸಹಕಾರದಿಂದ ಶೀಘ್ರವಾಗಿ ಬಳ್ಳಾರಿ ಬಂದ್‍ ನಡೆಸಲಾಗುವುದು ಎಂದರು.

ADVERTISEMENT

‘ಇತ್ತೀಚೆಗೆ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕದ ವಿಮೋಚಾನ ದಿನಾಚರಣೆ ಅಂಗವಾಗಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು ಕಲ್ಯಾಣ ಕರ್ನಾಟಕ ಭಾಗದ ಭೂಮಿ ಕಳೆದು ಕೊಂಡ ಕುಡತಿನಿಯ ಬಡ ರೈತರು ಸುಮಾರು ಎರಡು ವರ್ಷಗಳಿಂದ ನಿರಂತರ ಧರಣಿ ನಡೆಸುತ್ತಿದ್ದರೂ ಅವರ ಬಗ್ಗೆ ಸಭೆಯಲ್ಲಿ ಮುಖ್ಯಮಂತ್ರಿ, ಇತರೆ ಮಂತ್ರಿಗಳು ಕನಿಷ್ಠ ಸೌಜನ್ಯಕ್ಕಾದರೂ ಚರ್ಚೆ ನಡೆಸಿದಿರುವುದು ಅತ್ಯಂತ ವಿಷಾದಕರ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡರಾದ ತಿಪ್ಪೇಸ್ವಾಮಿ, ಜಂಗ್ಲಿಸಾಬ್, ಅಂಜಿನಪ್ಪ, ಯು.ತಿಮ್ಮಪ್ಪ, ಮಲ್ಲಯ್ಯ, ಶೇಖರ್, ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.