ಸಂಡೂರು: ‘ಬಿಜೆಪಿಯವರು ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿ, ರಾಜೀನಾಮೆ ಕೇಳುತ್ತಾರೆ. ನಾನು ಯಾವ ತಪ್ಪೂ ಮಾಡಿಲ್ಲ. ರಾಜ್ಯದ ಜನರ ಆಶೀರ್ವಾದ ಇರುವವರೆಗೆ ಬಿಜೆಪಿಯ ಬೆದರಿಕೆಗಳಿಗೆ ಹೆದರಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಂಡೂರಿನಲ್ಲಿ ಸೋಮವಾರ ನಡೆದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ಗ್ಯಾರಂಟಿ ಯೋಜನೆಗಳು ಜಾರಿಯಾದರೆ ರಾಜ್ಯ ದಿವಾಳಿ ಆಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಗ್ಯಾರಂಟಿ ಜಾರಿಯೂ ಆಯಿತು. ಅಭಿವೃದ್ಧಿಯನ್ನೂ ಮಾಡಿದ್ದೇವೆ’ ಎಂದರು.
‘ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ₹31,187 ಕೋಟಿ ನೀಡಿದ್ದೇವೆ. ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಎಷ್ಟು ಖರ್ಚು ಮಾಡಿದೆ ಎಂಬ ಬಗ್ಗೆ ಲೆಕ್ಕ ಕೊಡಲಿ. ಈವರೆಗೆ ಅವರ ಅವಧಿಯಲ್ಲಿ ಒಂದು ಮನೆ ಕೊಡಲು ಆಗಿಲ್ಲ. ಮುಖ್ಯಮಂತ್ರಿಯಾಗಿ 2013 ರಿಂದ ಈವರೆಗೆ ರಾಜ್ಯದಲ್ಲಿ ಬಡವರಿಗೆ 15 ಲಕ್ಷ ಮನೆ ನೀಡಿದ್ದೇನೆ’ ಎಂದರು.
ನಾರಿಹಳ್ಳಕ್ಕೆ ಬಾಗಿನ ಸಲ್ಲಿಸಿದ ಮೊದಲ ಸಿಎಂ:
ಸಂಡೂರು ತಾಲ್ಲೂಕಿನ ತಾರಾನಗರ ಬಳಿಯ ನಾರಿಹಳ್ಳ ಕಿರು ಜಲಾಶಯಕ್ಕೆ ಸಿದ್ದರಾಮಯ್ಯ ಸೋಮವಾರ ಬಾಗಿನ ಅರ್ಪಿಸಿದರು. ಈ ಜಲಾಶಯವನ್ನು 1979ರಲ್ಲಿ ದೇವರಾಜ ಅರಸರು ಉದ್ಘಾಟಿಸಿದ್ದರು. ಅಂದಿನಿಂದ ಈವರೆಗೆ ಯಾವ ಮುಖ್ಯಮಂತ್ರಿಯೂ ಬಾಗಿನ ಅರ್ಪಿಸಿರಲಿಲ್ಲ. ಸಿದ್ದರಾಮಯ್ಯ ಅವರು ಜಲಾಶಯಕ್ಕೆ ಬಾಗಿನ ಸಲ್ಲಿಸಿದ ಮೊದಲ ಮುಖ್ಯಮಂತ್ರಿ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.