ಬಳ್ಳಾರಿ: ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ಅಂತರರಾಜ್ಯ ಗಡಿಗೆ ಹೊಂದಿಕೊಂಡಿರುವ ಏಳು ಬಿ–1 ವರ್ಗದ ಗಣಿ ಗುತ್ತಿಗೆಗಳ ಗುರುತು ಮಾಡುವ ಮತ್ತು ಅವುಗಳನ್ನು ವರ್ಗೀಕರಿಸುವ ಸಲುವಾಗಿ ಕೇಂದ್ರದ ಉನ್ನತಾಧಿಕಾರಿ ಸಮಿತಿ(ಸಿಇಸಿ)ಯು ಗುರುವಾರ ಸ್ಥಳ ಪರಿಶೀಲನೆ ನಡೆಸಿತು.
ಈ ವೇಳೆ ಗಣಿ ಗುತ್ತಿಗೆದಾರಿಂದ ದಾಖಲೆ, ಮಾಹಿತಿಯನ್ನು ಸಂಗ್ರಹಿಸಿತು.
ಅಂತರರಾಜ್ಯ ಗಡಿಗೆ ಹೊಂದಿಕೊಂಡಿರುವ ತುಮಟಿ, ವಿಠಲಾಪುರದಲ್ಲಿನ ಒಟ್ಟು 4, ಹಲಕುಂದಿ, ಬೆಳಗಲ್ಲು ಮತ್ತು ಹೊನ್ನಳ್ಳಿಯಲ್ಲಿನ ತಲಾ ಒಂದೊಂದು ಗಣಿಗಳನ್ನು ಸಿಇಸಿ ಪರಿಶೀಲನೆ ನಡೆಸಿತು.
ಈ ವೇಳೆ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಉಪವಿಭಾಗಾಧಿಕಾರಿ, ಸಂಡೂರು ತಹಶೀಲ್ದಾರ್, ಕಂದಾಯ, ಅರಣ್ಯ, ಭೂದಾಖಲೆಗಳ ಇಲಾಖೆ ಅಧಿಕಾರಿಗಳು ಇದ್ದರು.
ಗ್ರಾಮ ನಕ್ಷೆ, ಗ್ರಾಮ ಗಡಿ ಆಧಾರದಲ್ಲಿ ನಾವು ಗಣಿ ಗುತ್ತಿಗೆಗಳನ್ನು ಪಡೆದುಕೊಂಡಿದ್ದು, ಅದರ ಆಧಾರದಲ್ಲೇ ಗಣಿಗಳ ನಕ್ಷೆ ಸಿದ್ಧಪಡಿಸಿ, ವರ್ಗೀಕರಣ ಮಾಡಬೇಕು ಎಂದು ಗಣಿ ಮಾಲೀಕರು ಸಿಇಸಿ ಸದಸ್ಯರಿಗೆ ಮನವಿ ಮಾಡಿದರು ಎನ್ನಲಾಗಿದೆ.
ಇಂದು ಸಂಡೂರಿನ ಡೋಣಿಮೈಲೈನಲ್ಲಿರುವ ಎನ್ಎಂಡಿಸಿ ಅತಿಥಿ ಗೃಹದಲ್ಲಿ ಸಿಇಸಿ ಸಭೆ ನಡೆಸಲಿದ್ದು ಅದಕ್ಕೆ ಎಲ್ಲ ಗಣಿ ಮಾಲೀಕರು ಹಾಜರಾಗಲಿದ್ದಾರೆ. ಸಭೆಯಲ್ಲಿ ಗಣಿ ಮಾಲೀಕರು ತಮ್ಮ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಲಿರುವ ಸಿಇಸಿ, ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.