ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ರಾಮೇಶ್ವರ ಬಂಡಿ ಗ್ರಾಮದಲ್ಲಿ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿ ಉಳುಮೆ ಮಾಡುತ್ತಿದ್ದದನ್ನು ತಹಶೀಲ್ದಾರ್ ಚಂದ್ರಶೇಖರ್ ಶಂಭಣ್ಣ ಗಾಳಿ ನೇತೃತ್ವದಲ್ಲಿ ತೆರವುಗೊಳಿಸುವ ಕಾರ್ಯ ಮಂಗಳವಾರ ನಡೆಯಿತು.
ಗ್ರಾಮದಲ್ಲಿ ಸರ್ಕಾರಕ್ಕೆ ಸೇರಿದ 67.50 ಎಕರೆ ಭೂಮಿಯನ್ನು ಕೆಲವು ರೈತರು ಒತ್ತುವರಿ ಮಾಡಿದ್ದರು, ಇದರಿಂದಾಗಿ ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕೆ ತೊಂದರೆ ಆಗಿತ್ತು. ಆದ್ದರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿರುವುದಾಗಿ ತಹಶೀಲ್ದಾರ್ ಮಾಹಿತಿ ನೀಡಿದರು.
ಈ ಕುರಿತಂತೆ ರೈತರು ದಾವೆ ಹೂಡಿದ್ದರು. ಉಪವಿಭಾಗಧಿಕಾರಿ, ಜಿಲ್ಲಾಧಿಕಾರಿ ಮತ್ತು ಹೈಕೋರ್ಟ್ಗಳಲ್ಲಿ ಪ್ರಕರಣದ ತೀರ್ಪು ಸರ್ಕಾರದ ಪರವಾಗಿದ್ದರಿಂದ ಭೂಮಿಯನ್ನು ಸರ್ಕಾರದ ವಶ ಪಡೆಯಲಾಗಿದೆ ಎಂದರು.
ಭೂಮಿ ಉಳುಮೆ ಮಾಡುತ್ತಿರುವ ರೈತರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ, ತಾವು ಕೂಲಿಕಾರ್ಮಿಕರಾಗಿದ್ದು ಭೂರಹಿತ ಕೃಷಿಕರಾಗಿದ್ದೇವೆ. ಆದ್ದರಿಂದ ಕೃಷಿಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಎರಡು ಜೆಸಿಬಿ ಯಂತ್ರಗಳ ಮೂಲಕ ಒತ್ತುವರಿ ತೆರವುಗೊಳಿಸಿ ಗಡಿಯನ್ನು ಗುರುತಿಸಲಾಯಿತು. ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದರು. ಸರ್ಕಾರಕ್ಕೆ ಸೇರಿದ ಒತ್ತುವರಿ ಜಮೀನು ತೆರವುಗೊಳಿಸುವಂತೆ ಗ್ರಾಮದ ಅನೇಕರು ಹೋರಾಟ ನಡೆಸಿದ್ದರು. ಹಲವು ಬಾರಿ ಮನವಿ ಸಲ್ಲಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದರು.
ಕಂದಾಯ ನಿರೀಕ್ಷಕ ಕೊಟ್ರೇಶ್ ಸಾಲ್ಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.